ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಮತ್ತು ಬಿಜೆಪಿಯ ಪ್ರಭಾವಿ ನಾಯಕ ಪ್ರತಾಪ್ ಸಿಂಹ ಅವರು ಇದೀಗ ರಾಜ್ಯ ರಾಜಕಾರಣಕ್ಕೆ ಅಧಿಕೃತವಾಗಿ ಮತ್ತೆ ಬರಲು ಸಜ್ಜಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರ ಮುಂದಿನ ರಾಜಕೀಯ ನಡೆ ಏನು ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು, ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡುವ ಮೂಲಕ ತಮ್ಮ ‘ಕರ್ತವ್ಯ ಪಥ’ ಎಲ್ಲಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಚಾಮರಾಜ ವಿಧಾನಸಭಾ ಕ್ಷೇತ್ರವೇ ಇವರ ಗುರಿ!
ಕೆಲವೇ ತಿಂಗಳ ಹಿಂದೆ ಸ್ಥಳೀಯ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ, ತಾವು ಮೈಸೂರು ಜಿಲ್ಲೆಯ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಿಂದ ರಾಜ್ಯ ರಾಜಕಾರಣ ಆರಂಭಿಸುವುದಾಗಿ ಪ್ರತಾಪ್ ಸಿಂಹ ತಿಳಿಸಿದ್ದರು. ಈಗ ಅವರ “ಪ್ರತಾಪ್ ಸಿಂಹ ಸ್ನೇಹ ಬಳಗ” ಬಿಡುಗಡೆ ಮಾಡಿರುವ ಹೊಸ ವರ್ಷದ ಕ್ಯಾಲೆಂಡರ್, ಅವರು ಮೈಸೂರು ನಗರದ ಚಾಮರಾಜ ವಿಧಾನಸಭಾ ಕ್ಷೇತ್ರವನ್ನು ತಮ್ಮ ಮುಂದಿನ ರಾಜಕೀಯ ಕಾರ್ಯಕ್ಷೇತ್ರವನ್ನಾಗಿ ಆರಿಸಿಕೊಂಡಿದ್ದಾರೆ ಎಂಬುದನ್ನು ಸ್ಪಷ್ಟಪಡಿದ್ದಾರೆ.
ಚಾಮರಾಜ ಕ್ಷೇತ್ರವು ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೊಂದಿರುವ ಕ್ಷೇತ್ರವಾಗಿದ್ದು, ಪ್ರತಾಪ್ ಸಿಂಹ ಇಲ್ಲಿಂದ ಸ್ಪರ್ಧಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಆರಂಭಿಸಿದ್ದಾರೆ. ಈ ಕ್ಯಾಲೆಂಡರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಜೊತೆಗೆ ಬಿಜೆಪಿ ಚಿಹ್ನೆ ಮತ್ತು ತಾವು ಸಂಸದರಾಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಚಿತ್ರಗಳನ್ನು ಬಳಸಲಾಗಿದೆ.
ಚಾಮರಾಜ ಕ್ಷೇತ್ರದ ಸದ್ಯದ ಪರಿಸ್ಥಿತಿಯ ಬಗ್ಗೆ ಮಾತನಾಡಿರುವ ಪ್ರತಾಪ್ ಸಿಂಹ, ಚಾಮರಾಜ ಕ್ಷೇತ್ರಕ್ಕೆ ಕೇವಲ ಹಣ ಹಂಚಿ ಗೆಲ್ಲುವ ಶಾಸಕರ ಅಗತ್ಯವಿಲ್ಲ. ಜನರನ್ನು ನಿರ್ಲಕ್ಷಿಸಿ, ಕೇವಲ ಸ್ವಂತ ಕುಟುಂಬ ಮತ್ತು ಸ್ನೇಹಿತರ ಅಭಿವೃದ್ಧಿಗಾಗಿ ಕೆಲಸ ಮಾಡುವವರ ಕಾಲ ಮುಗಿದಿದೆ ಎಂದು ಹೇಳಿದ್ದಾರೆ.
ದಿವಂಗತ ಎಚ್.ಎಸ್. ಶಂಕರಲಿಂಗೇಗೌಡ ಅವರ ಕಾರ್ಯವೈಖರಿಯನ್ನು ನೆನಪಿಸಿಕೊಂಡ ಪ್ರತಾಪ್ ಸಿಂಹ, ಕ್ಷೇತ್ರಕ್ಕೆ ಅಂತಹ ನಿರಂತರ ಅಭಿವೃದ್ಧಿ ನೀಡುವ ಮತ್ತು ಜನರ ಜೊತೆ ಸದಾ ಇರುವ ನಾಯಕನ ಅಗತ್ಯವಿದೆ ಎಂದಿದ್ದಾರೆ. ಜನರು ಪ್ರತಿ ಚುನಾವಣೆಯಲ್ಲೂ ಶಾಸಕರನ್ನು ಬದಲಿಸುವುದನ್ನು ತಡೆಯಬೇಕಾದರೆ, ಸತತ 4-5 ಅವಧಿಗೆ ಕೆಲಸ ಮಾಡುವ ದೂರದೃಷ್ಟಿಯ ನಾಯಕ ಬೇಕು ಎಂಬುದು ಅವರ ವಾದ.
ತಮ್ಮ ಸಂಸದ ಅವಧಿಯಲ್ಲಿ ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡಿದ ಸಾಧನೆಗಳ ಕುರಿತು ಮಾತನಾಡಿದ ಅವರು, ಕೆ.ಆರ್. ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕಗಳು, ಕೆ.ಆರ್.ಎಸ್ ರಸ್ತೆಯ ಪ್ರಿನ್ಸೆಸ್ ಕೃಷ್ಣಜಮ್ಮಣ್ಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ, ಕಿದ್ವಾಯಿ ಮತ್ತು ಇತರ ಆರೋಗ್ಯ ಕೇಂದ್ರಗಳಿಗಾಗಿ 356 ಕೋಟಿ ರೂ. ಹಾಗೂ ಎಂಎಂಸಿ ಮತ್ತು ಆರ್ಐ ಆಸ್ಪತ್ರೆಗಳ ನವೀಕರಣಕ್ಕೆ 89 ಕೋಟಿ ರೂ. ಅನುದಾನ, ಮೇಟಗಳ್ಳಿ ಅಂಚೆ ಕಚೇರಿಯಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ಆರಂಭಿಸಿರುವುದಲ್ಲದೇ ಹೆಬ್ಬಾಳದಿಂದ ಎಲ್ಪಿಜಿ ಪೈಪ್ಲೈನ್ ಅಳವಡಿಕೆ ಮತ್ತು ಹುಣಸೂರು ರಸ್ತೆಯ ಜಲದರ್ಶಿನಿ ಬಳಿ ಅಪಘಾತ ವಲಯದ ದುರಸ್ತಿಕಾರ್ಯ ನಡೆಸಲಾಗಿದೆ ಎಂದು ತಿಳಿಸಿದರು.
ನಾನು ಚಾಮರಾಜ ಕ್ಷೇತ್ರವನ್ನು ನನ್ನ ಕುಟುಂಬವೆಂದು ಪರಿಗಣಿಸುತ್ತೇನೆ. ಈ ಕ್ಷೇತ್ರವನ್ನು ರಾಜ್ಯದ ಅತ್ಯಂತ ಅಭಿವೃದ್ಧಿ ಹೊಂದಿದ ಮಾದರಿ ಕ್ಷೇತ್ರವಾಗಿ ಪರಿವರ್ತಿಸುವ ದೂರದೃಷ್ಟಿ ನನ್ನಲ್ಲಿದೆ ಎಂದಿದ್ದಾರೆ. ಒಟ್ಟಾರೆಯಾಗಿ, ಪ್ರತಾಪ್ ಸಿಂಹ ಅವರ ಈ ನಡೆ ಮೈಸೂರು ಭಾಗದ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿರುವುದಂತೂ ನಿಜ.





