ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ಗಳು ಮತ್ತು ಕಿರುಕುಳಕ್ಕೆ ಒಳಗಾಗಿರುವ ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು, ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಆದರೆ ತಮ್ಮ ದೂರಿನ ಮೇಲೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ತಮ್ಮ ನೋವು ಮತ್ತು ಆಕ್ರೋಶವನ್ನು ಹೊರಹಾಕಿರುವ ವಿಜಯಲಕ್ಷ್ಮಿ, “ನಮ್ಮ ದೇಶದಲ್ಲಿ ಕಾನೂನು ಮತ್ತು ವ್ಯವಸ್ಥೆ ಎಲ್ಲರಿಗೂ ಒಂದೇ ಎಂಬ ನಂಬಿಕೆ ನನಗಿತ್ತು. ಆದರೆ ಈ ಅನುಭವ ಆ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ” ಎಂದು ಬರೆದುಕೊಂಡಿದ್ದಾರೆ.
“ಬೇರೊಬ್ಬ ಮಹಿಳೆಯ ದೂರಿನ ಮೇಲೆ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆದರೆ ನನ್ನ ದೂರಿಗೆ ದಿನಗಳಾದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ನನ್ನ ದೂರು ಕಡಿಮೆ ಮುಖ್ಯವೇ ಅಥವಾ ಮಾನ್ಯವೇ?” ಎಂದು ಪ್ರಶ್ನಿಸಿದ್ದಾರೆ.
ತಮ್ಮ ವಕೀಲರ ಮೂಲಕ ನಿರಂತರವಾಗಿ ವಿಚಾರಿಸಿದರೂ ಕೂಡ ಪೊಲೀಸರು ಸ್ಪಷ್ಟ ಉತ್ತರ ನೀಡಿಲ್ಲ. “ನನ್ನ ದೂರಿನ ಬಗ್ಗೆ ಗಮನ ಹರಿಸಲು ಇಂದು ನಾನು ವೈಯಕ್ತಿಕವಾಗಿ ಹೋಗಿ ಪೊಲೀಸರಿಗೆ ನೆನಪಿಸಬೇಕಾಯಿತು. ಇಷ್ಟು ವಿಳಂಬವಾಗಿರುವುದಕ್ಕೆ ಯಾವುದೇ ಬಾಹ್ಯ ಒತ್ತಡ ಅಥವಾ ಪ್ರಭಾವ ಕಾರಣವಾಗಿರಬಾರದು ಎಂದು ನಾನು ಆಶಿಸುತ್ತೇನೆ” ಎಂದು ಅವರು ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಈ ಘಟನೆಯು ಕೇವಲ ವೈಯಕ್ತಿಕ ಸಮಸ್ಯೆಯಲ್ಲ, ಮಹಿಳೆಯರ ಸುರಕ್ಷತೆ ಮತ್ತು ಗೌರವದ ವಿಚಾರವಾಗಿದೆ ಎಂಬ ಅಭಿಪ್ರಾಯವನ್ನು ವಿಜಯಲಕ್ಷ್ಮಿ ವ್ಯಕ್ತಪಡಿಸಿದ್ದಾರೆ. “ನ್ಯಾಯವು ಯಾರು ಭಾಗಿಯಾಗಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರಬಾರದು. ಅಶ್ಲೀಲ ನಡವಳಿಕೆಯನ್ನು ಬೆಂಬಲಿಸುವವರೂ, ಆಶ್ರಯ ನೀಡುವವರೂ ತಮ್ಮ ಶಕ್ತಿಯನ್ನು ಇಂತಹ ಕಾರ್ಯಗಳನ್ನು ಕುರುಡಾಗಿ ಬೆಂಬಲಿಸುವ ಬದಲು ಉತ್ತಮ ಜೀವನ ನಿರ್ಮಾಣಕ್ಕೆ ಬಳಸಬೇಕು” ಎಂದು ಅವರು ಹೇಳಿದ್ದಾರೆ.
“ನಾನು ಇನ್ನೂ ಕಾಯುತ್ತಿದ್ದೇನೆ. ಆದರೆ ನಾನು ಇದನ್ನು ಸುಮ್ಮನೆ ಬಿಡುವುದಿಲ್ಲ” ಎಂಬ ಮಾತುಗಳನ್ನಾಡಿದ ಅವರು, ಈ ಹೋರಾಟವನ್ನು ಕೊನೆಯವರೆಗೂ ಮುಂದುವರಿಸುವ ದೃಢ ನಿರ್ಧಾರವನ್ನು ಮಾಡಿದ್ದಾರೆ.
ಡಿಸೆಂಬರ್ 31ರಂದು ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ವಕೀಲರೊಂದಿಗೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಅವರು ತಮ್ಮ ದೂರಿನ ಕುರಿತು ಸ್ಪಷ್ಟನೆ ಕೇಳಿದ್ದು, ಪೊಲೀಸರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಆಯುಕ್ತರ ಕಚೇರಿಯಲ್ಲಿ ನಡೆದ ಈ ಭೇಟಿಯ ಬಳಿಕವೇ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾಗಿ ಭಾವುಕ ಹಾಗೂ ಕಠಿಣ ಪೋಸ್ಟ್ ಮಾಡಿದ್ದಾರೆ.





