ಬೆಂಗಳೂರು: ರಾಜಧಾನಿಯ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ನವವಿವಾಹಿತೆ ಗಾನವಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ಕಂಡಿದೆ. ಗಾನವಿ ಅವರ ಸಾವಿನ ಬೆನ್ನಲ್ಲೇ ಅವರ ಪತಿ ಸೂರಜ್ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟಕ್ಕೇ ನಿಲ್ಲದ ಈ ಸಾವಿನ ಸರಣಿ, ಮಹಾರಾಷ್ಟ್ರದ ನಾಗ್ಪುರದಲ್ಲಿ ಸೂರಜ್ ಅವರ ತಾಯಿ (ಅತ್ತೆ) ಜಯಂತಿ ಅವರೂ ಸಹ ಆತ್ಮಹತ್ಯೆಗೆ ಯತ್ನಿಸಿದ್ದಾತರೆ.
ಕೆಲವೇ ದಿನಗಳ ಹಿಂದೆ ಬೆಂಗಳೂರಿನಲ್ಲಿ ಗಾನವಿ ಎಂಬ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯ ಬಳಿಕ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಾನವಿ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದವು ಮತ್ತು ಸಾಮಾಜಿಕವಾಗಿ ಈ ಕುಟುಂಬದ ಮೇಲೆ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದ ಸೂರಜ್ ಕುಟುಂಬವು ಬೆಂಗಳೂರು ಬಿಟ್ಟು ಮಹಾರಾಷ್ಟ್ರದ ನಾಗ್ಪುರಕ್ಕೆ ತೆರಳಿತ್ತು.
ಪತ್ನಿಯ ಸಾವಿನ ನಂತರ ಸೂರಜ್ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಗಾನವಿ ಅವರ ಸಾವಿಗೆ ಪತಿ ಮತ್ತು ಅವರ ಕುಟುಂಬದವರೇ ಕಾರಣ ಎಂಬ ಆರೋಪಗಳು ತಾಳಲಾರದೆ ಸೂರಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ನಾಗ್ಪುರದಲ್ಲಿದ್ದಾಗಲೇ ಸೂರಜ್ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.
ಮಗ ಸೂರಜ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತಗೊಂಡ ತಾಯಿ ಜಯಂತಿ ಅವರು ಕೂಡ ನಾಗ್ಪುರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಜಯಂತಿ ಅವರನ್ನು ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಮಮೂರ್ತಿನಗರ ಪೊಲೀಸರು ಮೊದಲು ಗಾನವಿ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದರು. ಈಗ ಪತಿ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಪ್ರಕರಣದ ಸ್ವರೂಪ ಬದಲಾಗಿದೆ. ಗಾನವಿ ಅವರ ಮನೆಯವರು ಸೂರಜ್ ಕುಟುಂಬದ ಮೇಲೆ ನೀಡಿದ್ದ ದೂರು ಮತ್ತು ಈಗ ಸಂಭವಿಸಿರುವ ಈ ಸರಣಿ ಆತ್ಮಹತ್ಯೆಗಳ ನಡುವೆ ಏನಾದರೂ ಸಂಬಂಧವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತಿಚಿಗೆ ಪತ್ನಿ ಆತ್ಮಹತ್ಯೆ ಜೊತೆಗೆ ಇತರೆ ಆರೋಪ ಮತ್ತು ಅವಮಾನಗಳಿಂದ ನೋದ ಸೂರಜ್ ಈ ಕ್ರಮ ಕೈಗೊಂಡಿದ್ದಾರೆ. ಗಾನವಿ ಮನೆಯವರು ಮಾಡಿದ ಆರೋಪಗೂ ನಿಜ್ಜಕ್ಕೂ ಸತ್ಯವೇ ..? ಈ ಬಗ್ಗೆ ಸೂರಜ್ ತಾಯಿ ಜಯಂತಿ ಏನು ಹೇಳುತ್ತಾರೆ ಕಾದುನೋಡಬೇಕಿದೆ.





