ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸದ ಒತ್ತಡ ಮತ್ತು ಗಡುವುಗಳು (Deadlines) ಉದ್ಯೋಗಿಗಳ ಜೀವವನ್ನೇ ಹಿಂಡುತ್ತಿವೆ. ಭಾರತೀಯ ಉದ್ಯೋಗಿ ತನ್ನ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲೂ ಬಾಸ್ ತೋರಿದ ಅಮಾನವೀಯ ವರ್ತನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಉದ್ಯೋಗಿಯ ತಿಳಿಸಿದಂತೆ, ಶಿಫ್ಟ್ ಮುಗಿಯಲು ಕೇವಲ 5 ನಿಮಿಷಗಳಿದ್ದಾಗ ಈ ಘಟನೆ ನಡೆದಿದೆ. ನನಗೆ ನಿಜ ಹೇಳಬೇಕೆಂದರೆ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ತಕ್ಷಣ ವೈದ್ಯರ ಬಳಿಗೆ ಹೋಗಬೇಕಿತ್ತು. ಆದರೆ ನನ್ನ ಸಹೋದ್ಯೋಗಿ ಬಂದು ಕೆಲಸದ ಗಡುವನ್ನು ನೆನಪಿಸಿದರು. ನಾನು ವೈದ್ಯರ ಬಳಿ ಹೋಗಬೇಕಿದೆ ಎಂದು ತಿಳಿಸಿ, ಬಾಸ್ಗೆ ಮಾಹಿತಿ ನೀಡಲು ಕೇಳಿದೆ ಎಂದು ಉದ್ಯೋಗಿ ಬರೆದುಕೊಂಡಿದ್ದಾರೆ.
ಉದ್ಯೋಗಿಯ ಅನಾರೋಗ್ಯದ ವಿಷಯ ತಿಳಿದ ಬಾಸ್, ಸಹಾನುಭೂತಿ ತೋರಿಸುವ ಬದಲು, ಆದರೆ ನಮಗೆ ಗಡುವು ಇದೆ. ಈಗ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ನಾಳೆ ಬೆಳಿಗ್ಗೆ ಬೇಗ ಬಂದು ಕೆಲಸ ಮುಗಿಸಿ ಎಂದು ಪ್ರತಿಕ್ರಿಯಿಸಿದ್ದಾರೆ. ಉಸಿರಾಟದ ಸಮಸ್ಯೆಯಂತಹ ಗಂಭೀರ ಪರಿಸ್ಥಿತಿಯಲ್ಲೂ ಕೆಲಸಕ್ಕೇ ಆದ್ಯತೆ ನೀಡಿದ ಬಾಸ್ನ ನಡೆಯಿಂದ ಉದ್ಯೋಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲವೊಮ್ಮೆ ನನ್ನ ಬಾಸ್ಗೆ ನೌಕರರು ಮನುಷ್ಯರು ಎಂದು ಅರ್ಥವಾಗುವುದಿಲ್ಲ ಅನಿಸುತ್ತದೆ. ನಾವೂ ಅನಾರೋಗ್ಯಕ್ಕೆ ಒಳಗಾಗಬಹುದು, ಏಕೆಂದರೆ ನಾವು ಯಂತ್ರಗಳಲ್ಲ ಎಂದು ಉದ್ಯೋಗಿ ತನ್ನ ಅಳಲು ತೋಡಿಕೊಂಡಿದ್ದಾರೆ.
Told my boss i couldn’t breathe and she says “But we have deadlines”
byu/OldishSoul inIndianWorkplace
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಬಾಸ್ ವಿರುದ್ಧ ಕೆಂಡಕಾರಿದ್ದಾರೆ.
ಆರೋಗ್ಯವೇ ಮುಖ್ಯ ಗೆಳೆಯರೇ. ನೀವು ಅನುಭವಿಸಲು ಸಾಧ್ಯವಾಗದಿದ್ದಾಗ ಆ ಸಂಬಳಕ್ಕೆ ಯಾವುದೇ ಬೆಲೆಯಿಲ್ಲ,” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕಾರ್ಪೊರೇಟ್ನಲ್ಲಿ ಎಲ್ಲವೂ ತುರ್ತು ಎಂದೇ ಬಿಂಬಿಸಲಾಗುತ್ತದೆ. ನಿಮ್ಮ ಆರೋಗ್ಯ ಸರಿಯಿದ್ದಾಗ ಮಾತ್ರ ಕೆಲಸ ಮಾಡಿ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ಅನ್ನಾ ಸೆಬಾಸ್ಟಿಯನ್ ಘಟನೆಯನ್ನು ನೆನಪಿಸಿದ ಹಲವರು ಕಂಪನಿಗಳು ಉದ್ಯೋಗಿಗಳನ್ನು ಮನುಷ್ಯರಂತೆ ಕಾಣುವುದನ್ನು ಕಲಿಯಬೇಕು ಎಂದು ಆಗ್ರಹಿಸಿದ್ದಾರೆ.
ದೀರ್ಘಕಾಲದ ಒತ್ತಡ ಮತ್ತು ಕೆಲಸದ ಸ್ಥಳದಲ್ಲಿ ಸಿಗದ ಬೆಂಬಲವು ಹೃದಯದ ತೊಂದರೆ ಮತ್ತು ಮಾನಸಿಕ ಖಿನ್ನತೆಗೆ ಕಾರಣವಾಗಬಹುದು. ಉದ್ಯೋಗದಾತರು ಕೆಲಸದ ಗಡುವಿಗಿಂತ ಉದ್ಯೋಗಿಗಳ ಕ್ಷೇಮಕ್ಕೆ ಆದ್ಯತೆ ನೀಡಿದಾಗ ಮಾತ್ರ ಉತ್ಪಾದಕತೆ ಹೆಚ್ಚಲು ಸಾಧ್ಯ. ಒಟ್ಟಾರೆ ಅನಾರೋಗ್ಯವಿದ್ದರೂ ಕೆಲಸು ಮಾಡಿ ಎಂದು ಒತ್ತಡ ಹೇರಿರುವುದು ತೀವ್ರ ನಚಿಕೆಗೇಡಿನ ಸಂಗತಿಯಾಗಿದೆ. ಕಂಪನಿಯ ಬಾಸ್ಗಳು ಉದ್ಯೋಗಿಗಳ ಆರೋಗ್ಯವನ್ನ ಗಮನದಲ್ಲಿಟ್ಟುಕೊಳ್ಳುವುದು ಉತ್ತಮವಾಗಿದೆ.





