ಚಿಕ್ಕಬಳ್ಳಾಪುರ: ಉದ್ಯೋಗದ ಕನಸು ಕಂಡ ಯುವತಿಯರನ್ನೇ ಗುರಿಯಾಗಿಸಿಕೊಂಡು, ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ ಕಿಲಾಡಿ ಕಪಲ್ನ ಕಥೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಅಂಕಣಗುಂದಿ ಗ್ರಾಮದಲ್ಲಿ ಈ ವಂಚನೆ ನಡೆದಿದೆ. ಅನುಷಾ ಎಂಬ ಯುವತಿ ತನ್ನ ಬಾಯ್ಫ್ರೆಂಡ್ ಅರುಣ್ ಜೊತೆಗೂಡಿ ಈ ವಂಚನಾ ಜಾಲವನ್ನು ರೂಪಿಸಿದ್ದಾಳೆ ಎನ್ನಲಾಗಿದೆ. ಅನುಷಾ ತನ್ನದೇ ಸ್ನೇಹಿತೆಯರನ್ನು ಗುರಿಯಾಗಿಸಿಕೊಂಡು, ಅವರಿಗೆ ಉತ್ತಮ ಸಂಬಳದ ಖಾಸಗಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದಾಳೆ. ಆಕೆಯ ಮಾತುಗಳಿಗೆ ನಂಬಿಕೆ ಇಟ್ಟುಕೊಂಡ ಸ್ನೇಹಿತೆಯರು, ಹಂತ ಹಂತವಾಗಿ ಹಣ ನೀಡಿದ್ದು, ನಂತರ ವಂಚನೆಯ ಬಲೆಗೆ ಬಿದ್ದಿದ್ದಾರೆ.
ಪ್ರಕರಣದ ಮತ್ತೊಬ್ಬ ಆರೋಪಿ ಅರುಣ್ ತನ್ನನ್ನು ಬೆಂಗಳೂರಿನ ‘ಸಾಯಿ ಸೇಲ್ಸ್ ಡ್ರೈವ್’ ಎಂಬ ಖಾಸಗಿ ಸಂಸ್ಥೆಯ ಸಿಇಒ ಎಂದು ಪರಿಚಯಿಸಿಕೊಂಡಿದ್ದಾನೆ. ದೊಡ್ಡ ಕಂಪನಿಯಲ್ಲಿ ಉನ್ನತ ಹುದ್ದೆ ಹೊಂದಿದ್ದೇನೆ, ನನ್ನ ಮೂಲಕ ಕೆಲಸ ಸಿಕ್ಕರೆ ಕೈ ತುಂಬಾ ಹಣ ಸಂಪಾದಿಸಬಹುದು ಎಂದು ಯುವತಿಯರನ್ನು ನಂಬಿಸಿದ್ದಾನೆ. ಉದ್ಯೋಗಕ್ಕೆ ಸಂಬಂಧಿಸಿದ ದಾಖಲೆಗಳು, ತರಬೇತಿ, ಪ್ರೊಸೆಸಿಂಗ್ ಫೀಸ್ ಎಂಬ ಹೆಸರಿನಲ್ಲಿ ಸಾವಿರ ರೂಪಾಯಿಗಳಿಂದ ಲಕ್ಷಾಂತರ ರೂಪಾಯಿವರೆಗೆ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಆರಂಭದ ಕೆಲ ದಿನಗಳಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಕಾಲಹರಣ ಮಾಡುತ್ತಿದ್ದ ಆರೋಪಿಗಳು, ನಂತರ ಸಂಪರ್ಕವೇ ಕಡಿದುಕೊಂಡಿದ್ದಾರೆ ಎನ್ನಲಾಗಿದೆ. ಕೆಲಸ ಕೇಳಿದರೆ ಒಂದೊಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಕೊನೆಗೆ ಹಣ ಕೇಳಿದಾಗಲೂ ಮರುಪಾವತಿ ಮಾಡದೆ ವಂಚನೆ ನಡೆಸಿದ್ದಾರೆ ಎಂದು ಸಂತ್ರಸ್ತ ಯುವತಿಯರು ದೂರಿದ್ದಾರೆ.
ಸಂತ್ರಸ್ತರ ಹೇಳಿಕೆ ಪ್ರಕಾರ, ಆರೋಪಿಗಳು ಪಡೆದ ಹಣವನ್ನು ಯಾವುದೇ ಉದ್ಯೋಗ ವ್ಯವಸ್ಥೆಗೆ ಬಳಸದೆ, ತಮ್ಮ ಮೋಜು-ಮಸ್ತಿಗೆ, ವೈಯಕ್ತಿಕ ಖರ್ಚುಗಳಿಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ವಂಚನೆ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದಂತೆ, ಸಂತ್ರಸ್ತರು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಣದ ವಹಿವಾಟು, ಬ್ಯಾಂಕ್ ದಾಖಲೆಗಳು ಹಾಗೂ ಮೊಬೈಲ್ ಸಂಭಾಷಣೆಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.





