ಮಸ್ಕತ್: ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಸದ ಅಂಗವಾಗಿ ಓಮನ್ ದೇಶಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಭಾರತ–ಓಮನ್ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿದ ಅವರ ಮಹತ್ವದ ಪಾತ್ರವನ್ನು ಗೌರವಿಸಿ, ಓಮನ್ನ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಗ್ರೇಟ್ ಆರ್ಡರ್ ಆಫ್ ಓಮನ್’ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ಮಸ್ಕತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ, ಓಮನ್ನ ರಕ್ಷಣಾ ವ್ಯವಹಾರಗಳ ಉಪ ಪ್ರಧಾನಮಂತ್ರಿ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಅವರು ಆತ್ಮೀಯ ಸ್ವಾಗತ ಕೋರಿದರು. ಬಳಿಕ ಅಧಿಕೃತ ಕಾರ್ಯಕ್ರಮದಲ್ಲಿ ಸುಲ್ತಾನ ಹೈತಮ್ ಬಿನ್ ತಾರಿಕ್ ಅವರು ಗೌರವ ಪ್ರದಾನ ಮಾಡಿ, ಭಾರತ–ಓಮನ್ ಸ್ನೇಹ ಸಂಬಂಧಗಳಲ್ಲಿ ಪ್ರಧಾನಿ ಮೋದಿಯವರ ಪಾತ್ರವನ್ನು ಶ್ಲಾಘಿಸಿದರು.
ಗ್ರೇಟ್ ಆರ್ಡರ್ ಆಫ್ ಓಮನ್ ಎಂಬುದು ಒಮಾನ್ ದೇಶದ ಅತ್ಯುನ್ನತ ನಾಗರಿಕ ಗೌರವವಾಗಿದ್ದು, ವಿದೇಶಿ ರಾಷ್ಟ್ರಗಳ ಮುಖ್ಯಸ್ಥರು, ರಾಜಮನೆತನದ ಗಣ್ಯರು ಹಾಗೂ ಒಮಾನ್ನೊಂದಿಗೆ ಸ್ನೇಹ ಸಂಬಂಧಗಳನ್ನು ಬಲಪಡಿಸಿದ ಅಂತರರಾಷ್ಟ್ರೀಯ ನಾಯಕರಿಗೆ ಮಾತ್ರ ಈ ಗೌರವ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 1970ರಲ್ಲಿ ಒಮಾನ್ನ ಮಾಜಿ ಸುಲ್ತಾನ್ ಕಬೂಸ್ ಬಿನ್ ಸೈದ್ ಅವರು ಸ್ಥಾಪಿಸಿದ್ದರು. ಇದು ಒಮಾನ್ನ ಶ್ರೇಷ್ಠ ನಾಗರಿಕ ಗೌರವವಾಗಿದೆ.
ಈ ಗೌರವವನ್ನು ಇದುವರೆಗೆ ಬ್ರಿಟನ್ನ ಮಾಜಿ ರಾಣಿ ಎಲಿಜಬೆತ್ II, ನೆದರ್ಲ್ಯಾಂಡ್ಸ್ನ ರಾಣಿ ಮ್ಯಾಕ್ಸಿಮಾ, ಜಪಾನ್ನ ಚಕ್ರವರ್ತಿ ಅಕಿಹಿಟೊ, ದಕ್ಷಿಣ ಆಫ್ರಿಕಾದ ನಾಯಕ ನೆಲ್ಸನ್ ಮಂಡೇಲಾ, ಜೋರ್ಡಾನ್ನ ರಾಜ ಅಬ್ದುಲ್ಲಾ ಸೇರಿದಂತೆ ಹಲವು ವಿಶ್ವದ ಗಣ್ಯರಿಗೆ ಪ್ರದಾನ ಮಾಡಲಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಈ ಗೌರವ ಪಡೆದ ವಿಶ್ವದ ಪ್ರಮುಖ ನಾಯಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಇದರೊಂದಿಗೆ ಪ್ರಧಾನಿ ಮೋದಿ ಅವರಿಗೆ ದೊರಕಿದ ಒಟ್ಟು ಅಂತರರಾಷ್ಟ್ರೀಯ ಗೌರವಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಒಮಾನ್ಗೆ ಆಗಮಿಸುವ ಒಂದು ದಿನ ಮುನ್ನವೇ ಇಥಿಯೋಪಿಯಾ ದೇಶವು ತನ್ನ ಅತ್ಯುನ್ನತ ನಾಗರಿಕ ಗೌರವವಾದ ‘ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’ ಪ್ರಶಸ್ತಿಯನ್ನು ಪ್ರಧಾನಿ ಮೋದಿಗೆ ಪ್ರದಾನ ಮಾಡಿತ್ತು. ಅಡಿಸ್ ಅಬಾಬಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರು ಈ ಗೌರವವನ್ನು ನೀಡಿ ಸನ್ಮಾನಿಸಿದ್ದರು.
ಭಾರತ ಮತ್ತು ಓಮನ್ ನಡುವಿನ ರಾಜತಾಂತ್ರಿಕ ಸಂಬಂಧಗಳ 70ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಈ ಭೇಟಿ ನಡೆಯುತ್ತಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ. ಈ ಭೇಟಿಯ ವೇಳೆ ವ್ಯಾಪಾರ, ಹೂಡಿಕೆ, ಇಂಧನ, ರಕ್ಷಣೆ, ಸಮುದ್ರ ಭದ್ರತೆ ಮತ್ತು ಸಾಂಸ್ಕೃತಿಕ ವಿನಿಮಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಚರ್ಚೆಗಳು ನಡೆಯಲಿವೆ.
ಓಮನ್ನಲ್ಲಿ ವಾಸಿಸುತ್ತಿರುವ ಲಕ್ಷಾಂತರ ಭಾರತೀಯ ಸಮುದಾಯದ ಪಾತ್ರವನ್ನು ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದು, ಎರಡು ರಾಷ್ಟ್ರಗಳ ನಡುವಿನ ಸ್ನೇಹ ಸೇತುವೆಯಾಗಿ ಭಾರತೀಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಭಾರತ ಮತ್ತು ಓಮನ್ ನಡುವಿನ ಇತಿಹಾಸ ಪ್ರಸಿದ್ಧ ಸ್ನೇಹ ಸಂಬಂಧಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಠವಾಗಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.





