ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಸಿಗುತ್ತಿದ್ದ ಐಷಾರಾಮಿ ಸೌಲಭ್ಯಗಳ ವೀಡಿಯೊಗಳು ವೈರಲ್ ಆದ ಪ್ರಕರಣ ರಾಜ್ಯ ಸರ್ಕಾರಕ್ಕೆ ಭಾರಿ ಮುಜುಗರ ತಂದಿತ್ತು. ಈಗ ಆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಖತರ್ನಾಕ್ ರೌಡಿ ಶೀಟರ್ ‘ಕುದುರೆ ಮಂಜ’ ಎಂಬ ಮಂಜುನಾಥ್ ಪೊಲೀಸ್ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಾಯಿಬಿಟ್ಟಿದ್ದಾನೆ.
ಜೈಲಿನೊಳಗೆ ಡ್ಯಾನ್ಸ್-ಪಾರ್ಟಿ ನಡೆಸಿದ್ದ ವೀಡಿಯೊವನ್ನು ಆತನೇ ರೆಕಾರ್ಡ್ ಮಾಡಿ, ಬಿಡುಗಡೆಯಾದ ಬಳಿಕ ವಿಲ್ಸನ್ ಗಾರ್ಡನ್ ನಾಗ ಮತ್ತು ಗುಬ್ಬಚ್ಚಿ ಸೀನ ಎಂಬ ಇಬ್ಬರು ರೌಡಿಗಳಿಗೆ ಕುದುರೆ ಮಂಜ ಕಳಿಸಿಕೊಟ್ಟಿರುವುದಾಗಿ ಸತ್ಯ ಒಪ್ಪಿಕೊಂಡಿದ್ದಾನೆ. ಇವರಿಬ್ಬರು ಈಗ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿದೆ. ಈ ಹೇಳಿಕೆಯಿಂದ ವಿಜಯಲಕ್ಷ್ಮೀ ದರ್ಶನ್ ಕುರಿತು ಹರಿದಾಡುತ್ತಿದ್ದ ಹಲವು ಊಹಾಪೋಹಗಳಿಗೆ ತೆರೆಬಿದ್ದಂತಾಗಿದೆ.
ವಿಲ್ಸನ್ ಗಾರ್ಡನ್ ನಾಗ, ನಟ ದರ್ಶನ್ ಜೊತೆಗಿದ್ದ ಫೋಟೋ ವೈರಲ್ ಆಗಿ, ಅದೇ ಹಿನ್ನೆಲೆಗೆ ಅವನನ್ನು ಹಿಂಡಲಗಾ ಜೈಲಿಗೆ ವರ್ಗಾಯಿಸಲಾಗಿತ್ತು. ಇದೇ ರೀತಿಯಾಗಿ, ಗುಬ್ಬಚ್ಚಿ ಸೀನ ಕೂಡ ಜೈಲಿನೊಳಗಿನ ತನ್ನ ಬರ್ತಡೇ ಆಚರಣೆಯ ವಿಡಿಯೋ ಹೊರಗೆ ಬಿದ್ದ ನಂತರ ಶಿಫ್ಟ್ ಆಗಿದ್ದ. ಈ ಎಲ್ಲಾ ಘಟನೆಗಳು ಅವರಿಬ್ಬರ ನಡುವೆ ಅಸಮಾಧಾನವನ್ನು ಹೆಚ್ಚಿಸಿತ್ತು ಎಂಬ ಮಾಹಿತಿ ಹೊರಬಿದ್ದಿದೆ.
ಹಿಂಡಲಗಾ ಜೈಲಿನಲ್ಲಿ ಒಟ್ಟಾಗಿ ಬಂದ ನಾಗ ಮತ್ತು ಗುಬ್ಬಚ್ಚಿ ಸೀನ ತಮ್ಮ ಬಳಿ ಇದ್ದ ಹಳೆಯ ವೀಡಿಯೊಗಳನ್ನು ಒಂದೇ ಸಮಯದಲ್ಲಿ ವೈರಲ್ ಮಾಡುವ ಪ್ಲಾನ್ ಹಾಕಿಕೊಂಡಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ ಪರಪ್ಪನ ಅಗ್ರಹಾರದ ಒಳಗಿನ ಐಷಾರಾಮಿ ಜೀವನ, ಡ್ಯಾನ್ಸ್ ಪಾರ್ಟಿ, ಫೈವ್-ಸ್ಟಾರ್ ಆಹಾರ, ಮೊಬೈಲ್ ಬಳಕೆ ಎಲ್ಲವೂ ಸರ್ಕಾರವನ್ನು ಭಾರೀ ಮುಜುಗರಕ್ಕಿಡುಮಾಡಿತ್ತು.
ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ವಿಲ್ಸನ್ ಗಾರ್ಡನ್ ನಾಗ ಹಾಗೂ ಗುಬ್ಬಚ್ಚಿ ಸೀನನ ವಿಚಾರಣೆಗೆ ಮುಂದಾಗಿದ್ದಾರೆ. ಕೋರ್ಟ್ ಅನುಮತಿ ಪಡೆದು ಇಬ್ಬರನ್ನೂ ಪರಪ್ಪನ ಅಗ್ರಹಾರಕ್ಕೆ ಕರೆತಂದು ಗ್ರಿಲ್ ಮಾಡುವ ಅಥವಾ ಹಿಂಡಲಗಾ ಜೈಲಿಗೇ ತಂಡ ಕಳಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಕೈದಿಗಳ ರಾಜಾತಿಥ್ಯ ವಿಡಿಯೋ ಲೀಕ್ ಕೇಸ್: ವಿಜಯಲಕ್ಷ್ಮೀ ಹೆಸರು ಬಾಯ್ಬಿಟ್ಟ ಧನ್ವೀರ್
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮದ್ಯ ಸೇವಿಸುತ್ತಾ, ಸಿಗರೇಟ್ ಸೇದುತ್ತಾ ಪಾರ್ಟಿ ಮಾಡುತ್ತಿರುವ ವಿಡಿಯೋ ವೈರಲ್ ಆದ ಪ್ರಕರಣಕ್ಕೆ ಇದೀಗ ಭಾರೀ ತಿರುವು ಸಿಕ್ಕಿದೆ. ಈ ವಿಡಿಯೋ ಲೀಕ್ ಆರೋಪ ಎದುರಿಸುತ್ತಿರುವ ನಟ ದರ್ಶನ್ ಆಪ್ತ ಸ್ನೇಹಿತ ಧನ್ವೀರ್, ಎರಡನೇ ಬಾರಿಯ ವಿಚಾರಣೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಇದರಿಂದ ವಿಜಯಲಕ್ಷ್ಮೀ ಅವರನ್ನೂ ತನಿಖಾಧಿಕಾರಿಗಳು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.
ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ದರ್ಶನ್ ಸೇರಿದಂತೆ ಹಲವು ಕೈದಿಗಳು ಜೈಲಿನಲ್ಲೇ ಮದ್ಯಪಾನ, ಸಿಗರೇಟ್ ಸೇದುತ್ತಾ ಆನಂದದಲ್ಲಿರುವ ದೃಶ್ಯಗಳಿದ್ದವು. ಇದು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಜೈಲು ಆಡಳಿತದ ತಪ್ಪಿಗೆ ಈ ವಿಡಿಯೋ ಸಾಕ್ಷಿಯಾಗಿತ್ತು. ಈ ವಿಡಿಯೋ ಯಾರು ಲೀಕ್ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಸಂಬಂಧ ದರ್ಶನ್ ಆಪ್ತ ಧನ್ವೀರ್ ಮೇಲೆ ಆರೋಪ ಬಂದಿತ್ತು.
ಮೊದಲ ಬಾರಿಗೆ ನೋಟಿಸ್ ನೀಡಿದಾಗ ಧನ್ವೀರ್ ವಿಚಾರಣೆಗೆ ಹಾಜರಾಗಿದ್ದರು. ಆದರೆ ಅವರು ಯಾವುದೇ ಮಾಹಿತಿ ನೀಡಿರಲಿಲ್ಲ. ಆ ನಂತರ ಎರಡನೇ ನೋಟಿಸ್ ನೀಡಲಾಯಿತು. ಈ ಬಾರಿ ಧನ್ವೀರ್ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ. “ನಾನು ಆ ವಿಡಿಯೋವನ್ನು ವೈರಲ್ ಮಾಡಿಲ್ಲ. ಅದು ಹೇಗೆ ವೈರಲ್ ಆಯ್ತು ಅಂತ ನನಗೆ ಗೊತ್ತಿಲ್ಲ. ಆದ್ರೆ ಒಬ್ಬ ವಕೀಲರಿಂದ ಆ ವಿಡಿಯೋ ನನ್ನ ಬಳಿ ಬಂದಿತ್ತು. ನಾನು ಅದನ್ನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ ಮಾತ್ರ ಫಾರ್ವರ್ಡ್ ಮಾಡಿದ್ದೆ” ಎಂದು ಧನ್ವೀರ್ ಹೇಳಿಕೊಂಡಿದ್ದಾರೆ.
ಧನ್ವೀರ್ ಹೇಳಿಕೆಯಲ್ಲಿ ವಿಜಯಲಕ್ಷ್ಮೀ ಹೆಸರು ಬರುತ್ತಿದ್ದಂತೆ ತನಿಖಾಧಿಕಾರಿಗಳು ತಕ್ಷಣ ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಜಯಲಕ್ಷ್ಮೀ ಅವರನ್ನು ವಿಚಾರಣೆಗೆ ಕರೆಸಬೇಕೆ ಎಂಬ ಚರ್ಚೆ ಪೊಲೀಸ್ ಇಲಾಖೆಯಲ್ಲಿ ನಡೆದಿದೆ. ಧನ್ವೀರ್ ಮತ್ತಷ್ಟು ಸಹಕಾರ ನೀಡದಿದ್ದರೆ ವಿಜಯಲಕ್ಷ್ಮೀ ಅವರನ್ನು ಖಂಡಿತಾ ಕರೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇನ್ನು ವಿಡಿಯೋ ಯಾವ ಅಕೌಂಟ್ನಿಂದ ಅಪ್ಲೋಡ್ ಆಗಿದೆ, ಯಾರು ಮೊದಲು ಪೋಸ್ಟ್ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮೆಟಾ ಕಂಪನಿಗೆ ಈಗಾಗಲೇ ಇಮೇಲ್ ಕಳುಹಿಸಿ ಮಾಹಿತಿ ಕೋರಿದ್ದಾರೆ. ಇದಲ್ಲದೆ ಜೈಲಿನಲ್ಲಿದ್ದ ಕೈದಿಗಳನ್ನೂ ವಿಚಾರಣೆ ಮಾಡಲಾಗುತ್ತಿದೆ.
ಜೈಲಿನ ರಾಜಾತಿಥ್ಯ ವಿಡಿಯೋ ಲೀಕ್ ಪ್ರಕರಣ ಇದೀಗ ದರ್ಶನ್ ಕುಟುಂಬದತ್ತ ತಿರುಗಿದ್ದು, ಧನ್ವೀರ್ ಹೇಳಿಕೆಯಿಂದ ವಿಜಯಲಕ್ಷ್ಮೀ ಅವರು ತನಿಖೆ ಎದುರಿಸುವ ಸಾಧ್ಯತೆ ಹೆಚ್ಚಾಗಿದೆ.





