ಬೆಂಗಳೂರು: ಭುವನ ಎಂಬ 9 ವರ್ಷದ ಬಾಲಕಿ ಶಾಲೆ ಮುಗಿಸಿ ಮನೆಗೆ ತೆರಳುವ ವೇಳೆ, BMTC ಎಲೆಕ್ಟ್ರಿಕ್ ಬಸ್ಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಜಾಜಿನಗರ 1ನೇ ಬ್ಲಾಕ್ನಲ್ಲಿ ನಡೆದಿದೆ.
ರಾಜಾಜಿನಗರ 1ನೇ ಬ್ಲಾಕ್ನ ಸಿಗ್ನಲ್ನಲ್ಲಿ ನಿಂತಿದ್ದ ಭುವನ, ಪಾಂಚಜನ್ಯ ಸ್ಕೂಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದ 9 ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಶಾಲೆ ಮುಗಿಸಿಕೊಂಡು ಮನೆಗೆ ತೆರಳುವ ವೇಳೆ BMTC ಎಲೆಕ್ಟ್ರಿಕ್ ಬಸ್ ಒಂದು ಆಕೆಯ ಮೇಲೆ ಹರಿದಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಭುವನಳನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆಯ ಜೀವ ಉಳಿಸಲು ಸಾಧ್ಯವಾಗಲಿಲ್ಲ. ದುರ್ಘಟನೆಯ ನಂತರ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ
ಈ ಘಟನೆಯಿಂದ ಭುವನಳ ಕುಟುಂಬವು ಆಘಾತಕ್ಕೆ ಒಳಗಾಗಿದ್ದು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. BMTC ಬಸ್ಗಳ ಚಾಲಕರ ನಿರ್ಲಕ್ಷ್ಯದ ಚಾಲನೆ ಮತ್ತು ಸುರಕ್ಷತಾ ಕ್ರಮಗಳ ಕೊರತೆಯಿಂದ ಇಂತಹ ದುರ್ಘಟನೆಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ಆಸ್ಪತ್ರೆಯ ಬಳಿ ಭುವನಳ ಪೋಷಕರು ಮತ್ತು ಸ್ಥಳೀಯರು ಜಮಾಯಿಸಿದ್ದು, ಚಾಲಕನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸ್ಥಳೀಯ ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. CCTV ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಪರಾರಿಯಾದ BMTC ಚಾಲಕನನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.