ಧಾರವಾಡ : ಉತ್ತರ ಕರ್ನಾಟಕದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿರುವ ಯೂಟ್ಯೂಬರ್ ಮತ್ತು ಶಾರ್ಟ್ ವಿಡಿಯೋ ಸ್ಟಾರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ವಿರುದ್ಧ ಬಜರಂಗದಳ ಕಾರ್ಯಕರ್ತರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ, ಮುಕಳೆಪ್ಪ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಿಂದೂ ಯುವತಿಯನ್ನು ವಿವಾಹವಾಗಿದ್ದಾನೆ. ತನ್ನ ವಿಡಿಯೋಗಳ ಮೂಲಕ ಹಿಂದೂ ಧರ್ಮವನ್ನು ನಿರಂತರವಾಗಿ ಅವಮಾನಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಜೂನ್ 5, 2025ರಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮುಕಳೆಪ್ಪ ಹಿಂದೂ ಯುವತಿಯಾದ ಗಾಯತ್ರಿಯನ್ನು ವಿವಾಹವಾಗಿದ್ದಾನೆ. ಈ ವಿವಾಹಕ್ಕಾಗಿ ಆತ ತನ್ನ ವಿಳಾಸವನ್ನು ಶಿರಹಟ್ಟಿ ಗಾಂಧಿನಗರ ಎಂದು ನಮೂದಿಸಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾನೆ ಎಂದು ಬಜರಂಗದಳದ ಕಾರ್ಯಕರ್ತರು ಆರೋಪಿಸಿದ್ದಾರೆ. ಇದು ಕೇವಲ ವೈಯಕ್ತಿಕ ವಿವಾದವಲ್ಲ, ಬದಲಿಗೆ ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ವಂಚಿಸುವ ಯೋಜನೆಯ ಭಾಗವಾಗಿದೆ ಎಂದು ಅವರು ಹೇಳುತ್ತಾರೆ.
ಬಜರಂಗದಳದ ಸಂಚಾಲಕ ಸಿದ್ದು ಹಿರೇಮಠ ಮತ್ತು ಕಾರ್ಯಕರ್ತ ಶಂಕರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಮುಕಳೆಪ್ಪನಂತಹ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಂಡು ಯುವತಿಯರನ್ನು ಆಕರ್ಷಿಸುತ್ತಾರೆ. ಇದು ಲವ್ ಜಿಹಾದ್ನಂತಹ ಧಾರ್ಮಿಕ ಪರಿವರ್ತನೆಯ ಯೋಜನೆಗಳಿಗೆ ಕಾರಣವಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಕಳೆಪ್ಪನ ಯೂಟ್ಯೂಬ್ ಚಾನೆಲ್ ಮತ್ತು ಶಾರ್ಟ್ ವಿಡಿಯೋಗಳು ಉತ್ತರ ಕರ್ನಾಟಕದಲ್ಲಿ ಬಹಳ ಜನಪ್ರಿಯವಾಗಿವೆ. ಆತನ ವೀಡಿಯೊಗಳಲ್ಲಿ ಹಿಂದೂ ಯುವತಿಯರೊಂದಿಗೆ ಹೆಚ್ಚಿನ ಸಹಭಾಗಿತ್ವವಿದ್ದು, ಹಾಸ್ಯ, ನೃತ್ಯ ಮತ್ತು ದೈನಂದಿನ ಜೀವನದ ಕಥೆಗಳನ್ನು ತೋರಿಸುತ್ತವೆ. ಆದರೆ ದೂರಿನಲ್ಲಿ ಉಲ್ಲೇಖಿಸಿರುವಂತೆ, ಈ ವಿಡಿಯೋಗಳಲ್ಲಿ ಹಿಂದೂ ಧರ್ಮದ ಆಚರಣೆಗಳು, ಹಬ್ಬಗಳು ಮತ್ತು ಸಂಪ್ರದಾಯಗಳನ್ನು ಅವಮಾನಿಸುವ ಅಂಶಗಳಿವೆ.
ಉದಾಹರಣೆಗೆ, ಕೆಲವು ವಿಡಿಯೋಗಳಲ್ಲಿ ಹಿಂದೂ ದೇವರುಗಳನ್ನು ಹಾಸ್ಯಾಸ್ಪದವಾಗಿ ಚಿತ್ರಿಸಿ ಅಪಹಾಸ್ಯ ಮಾಡುತ್ತಾನೆ ಎಂದು ಆರೋಪಿಸಲಾಗಿದೆ. ಇದು ಕೇವಲ ಮನರಂಜನೆಯಲ್ಲ, ಬದಲಿಗೆ ಹಿಂದುತ್ವವನ್ನು ಟಾರ್ಗೆಟ್ ಮಾಡಿ ಧಾರ್ಮಿಕ ಅಶಾಂತಿಯನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ ಎಂದು ಬಜರಂಗದಳದ ಕಾರ್ಯಕರ್ತರು ಹೇಳುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ವಿಷಯಗಳು ಯುವಕರ ಮನಸ್ಸನ್ನು ಕಲುಷಿತಗೊಳಿಸುತ್ತವೆ. ಸಮಾಜದಲ್ಲಿ ವಿಭಜನೆಯನ್ನು ಉಂಟುಮಾಡುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ದೂರು ದಾಖಲಾದ ನಂತರ, ಧಾರವಾಡ ಗ್ರಾಮೀಣ ಪೊಲೀಸರು ತಕ್ಷಣ ಕ್ರಮಕ್ಕಿಳಿದ್ದಾರೆ. ಮುಕಳೆಪ್ಪ ಮತ್ತು ಆತನ ಪತ್ನಿ ಗಾಯತ್ರಿಯನ್ನು ವಿಚಾರಣೆಗಾಗಿ ಠಾಣೆಗೆ ಕರೆಸಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರು ಗಾಯತ್ರಿಯನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಆಕೆ ತನ್ನ ವಿವಾಹವು ಸ್ವಯಂ ಇಚ್ಛೆಯದ್ದು ಮತ್ತು ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿ ಅವರ ಮನವಿಯನ್ನು ತಿರಸ್ಕರಿಸಿದ್ದಾಳೆ.
ಗಾಯತ್ರಿಯ ಹೇಳಿಕೆಯು ಮುಕಳೆಪ್ಪನ ಪರವಾಗಿದ್ದರೂ, ಬಜರಂಗದಳದ ಕಾರ್ಯಕರ್ತರು ಇದನ್ನು ವಂಚನೆಯ ಭಾಗವೆಂದು ಪರಿಗಣಿಸಿದ್ದಾರೆ. “ಹಿಂದೂ ಹೆಣ್ಣು ಮಕ್ಕಳು ಇಂತಹ ಮತಾಂಧರಿಂದ ದೂರವಿರಬೇಕು. ಇದು ನಮ್ಮ ಸಂಸ್ಕೃತಿಯನ್ನು ರಕ್ಷಿಸುವ ಪ್ರಶ್ನೆ” ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪೊಲೀಸರು ಸದ್ಯ ತನಿಖೆಯನ್ನು ಮುಂದುವರೆಸಿದ್ದಾರೆ. ಮುಕಳೆಪ್ಪ ನೀಡಿದ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಬ್ ರಿಜಿಸ್ಟರ್ ಕಚೇರಿಯೊಂದಿಗೆ ಸಂಪರ್ಕಿಸಿದ್ದಾರೆ. ಇದರ ಜೊತೆಗೆ, ಆತನ ಯೂಟ್ಯೂಬ್ ವಿಡಿಯೋಗಳನ್ನು ವಿಶ್ಲೇಷಿಸಿ ಧಾರ್ಮಿಕ ಅವಮಾನದ ಆರೋಪಗಳನ್ನು ಪರಿಶೀಲಿಸುತ್ತಿದ್ದಾರೆ.





