ತುಮಕೂರು: ತುಮಕೂರಿನ ಜಯನಗರದ ಖಾಸಗಿ ಕಾಲೇಜಿನ ಪ್ರಾಂಶುಪಾಲನೊಬ್ಬ ಯುವತಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಮಂಚಕ್ಕೆ ಕರೆದ ಆರೋಪದ ಮೇಲೆ ತುಮಕೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಯೋಗೇಶ್ ಎಂದು ಗುರುತಿಸಲಾಗಿದೆ.
ಯೋಗೇಶ್ 2019ರಲ್ಲಿ ತುಮಕೂರಿನ ಬಾರ್ ಲೈನ್ ರಸ್ತೆಯ ಖಾಸಗಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದಾಗ, ಓರ್ವ ವಿದ್ಯಾರ್ಥಿನಿಯ ಮೊಬೈಲ್ ಸಂಖ್ಯೆಯನ್ನು ಪಡೆದು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಯುವತಿಯು ಕಾಲೇಜನ್ನು ತೊರೆದರೂ ಕಿರುಕುಳ ಮುಂದುವರಿಯಿತು. ಆಕೆ ಯೋಗೇಶ್ನ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರಿಂದ ಕಿರುಕುಳ ತಾತ್ಕಾಲಿಕವಾಗಿ ನಿಂತಿತ್ತು. ಆದರೆ, ಜುಲೈ 22, 2025ರಂದು ಯುವತಿಯನ್ನು ರಸ್ತೆಯಲ್ಲಿ ಕಂಡ ಯೋಗೇಶ್, ಬೇರೊಂದು ಸಂಖ್ಯೆಯಿಂದ ಮತ್ತೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ. “ನನಗೆ ನೀನು ಬೇಕು, 10,000 ರೂ. ಕೊಡುತ್ತೇನೆ, ಬಾ” ಎಂದು ಮಂಚಕ್ಕೆ ಕರೆದಿದ್ದಾನೆ.
ಕಿರುಕುಳದಿಂದ ಬೇಸತ್ತ ಯುವತಿ ತನ್ನ ತಂದೆಗೆ ವಿಷಯ ತಿಳಿಸಿದ್ದಾಳೆ. ಬಳಿಕ ತುಮಕೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿ ವಿರುದ್ಧ ಲೈಂಗಿಕ ಕಿರುಕುಳ (ಐಪಿಸಿ ಕಲಂ 354ಎ) ಮತ್ತು ಅಟ್ರಾಸಿಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಿ, ಯೋಗೇಶ್ನನ್ನು ಬಂಧಿಸಿದ್ದಾರೆ. ತನಿಖೆಯನ್ನು ತೀವ್ರಗೊಳಿಸಲಾಗಿದ್ದು, ಆರೋಪಿಯ ಫೋನ್ ಮತ್ತು ಸಂದೇಶಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.





