ರಾಕಿಂಗ್ ಸ್ಟಾರ್-ರಣ್ಬೀರ್ ರಾಮಾಯಣ ಸಿನಿಮಾ ಒಂದಲ್ಲ ಎರಡೆರಡು ಭಾಗಗಳಲ್ಲಿ ತಯಾರಾಗ್ತಿದೆ. ವಿಶ್ವ ಸಿನಿದುನಿಯಾದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಅವತಾರ್ ಸಿನಿಮಾದಂತೆ ಐಕಾನಿಕ್ ಮೂವಿಗೆ ಆಗಿ ಹೊರಹೊಮ್ಮಲಿದೆ ಎನ್ನಲಾಗಿದೆ. ಇಷ್ಟಕ್ಕೂ ಆ ಸ್ಟೇಟ್ಮೆಂಟ್ ನೀಡಿದ್ಯಾರು..? ಅಂಥದ್ದೇನಿದೆ ಸಿನಿಮಾದಲ್ಲಿ ಅನ್ನೋದ್ರ ಕಂಪ್ಲೀಟ್ ಕಹಾನಿ ನಿಮಗಾಗಿ ಕಾಯ್ತಿದೆ.
- ಅವತಾರ್ ರೀತಿ ಐಕಾನಿಕ್ ಮೂವಿ ಆಗುತ್ತಾ ರಾಮಾಯಣ?
- ನಿರ್ಮಾಪಕ ನಮಿತ್ ಮಲ್ಹೋತ್ರಾ ಬೋಲ್ಡ್ ಸ್ಟೇಟ್ಮೆಂಟ್..!
- 2 ಭಾಗದಲ್ಲಿ ರಾಕಿಭಾಯ್ ಯಶ್-ರಣ್ಬೀರ್ ರಾಮಾಯಣ
- ಹಾಲಿವುಡ್ ಮಾಸ್ಟರ್ಪೀಸ್ಗೆ ಹೋಲಿಸಿದ್ಯಾಕೆ ಪ್ರೊಡ್ಯೂಸರ್ ?
ಬಾಲಿವುಡ್ ಅಂಗಳದಲ್ಲಿ ತಯಾರಾಗ್ತಿರೋ ನೂತನ ರಾಮಾಯಣ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಇದೆ. ಅದಕ್ಕಿಂತ ಹೆಚ್ಚಾಗಿ ನಿರೀಕ್ಷೆಯೂ ಇದೆ. ಅದಕ್ಕೆ ಕಾರಣ ಆದಿಪುರುಷ್. ಹೌದು.. ಪ್ರಭಾಸ್ ನಟನೆಯ ಅದಿಪುರುಷ್ ಸಿನಿಮಾನ ತುಂಬಾ ಕೆಟ್ಟದಾಗಿ ತೆರೆಮೇಲೆ ಪ್ರೆಸೆಂಟ್ ಮಾಡಲಾಗಿತ್ತು. ಬ್ಯಾಡ್ ಎಕ್ಸಾಂಪಲ್ ಸೆಟ್ ಮಾಡಿರೋದ್ರಿಂದ, ದಿ ಬೆಸ್ಟ್ ಮಾಸ್ಟರ್ಪೀಸ್ ರಾಮಾಯಣ ಸಿನಿಮಾನ ಕಟ್ಟಿಕೊಡೋ ಯೋಜನೆಯಲ್ಲಿದೆ ರಾಕಿಭಾಯ್-ರಣ್ಬೀರ್ ಚಿತ್ರದ ಟೀಂ ರಾಮಾಯಣ.
ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ನಿರ್ದೇಶನದಲ್ಲಿ ನಮಿತ್ ಮಲ್ಹೋತ್ರಾ ಹಾಗೂ ಯಶ್ ಬಂಡವಾಳ ಹೂಡಿರುವ ರಾಮಾಯಣ ಸಿನಿಮಾ, ನಮ್ಮ ಹಿಂದುತ್ವದ ರಾಯಭಾರಿ ಆಗಲಿದೆ. ವಿಶ್ವ ಸಿನಿದುನಿಯಾದಲ್ಲಿ ಇದೊಂದು ಐತಿಹಾಸಿಕ ಮಹಾದೃಶ್ಯಕಾವ್ಯವಾಗಿ ಉಳಿಯಬೇಕು ಅಂತ ಪಣ ತೊಟ್ಟಂತೆ ಇದೆ. ಅದಕ್ಕೆ ಕಾರಣ ಸ್ಟಾರ್ಕಾಸ್ಟ್.. ಇತ್ತೀಚೆಗೆ ಸುಮಾರು 20ಕ್ಕೂ ಅಧಿಕ ಸ್ಟಾರ್ಗಳ ಪಾತ್ರಗಳನ್ನ ರಿವೀಲ್ ಮಾಡಿತ್ತು ಟೀಂ. ಇನ್ನು ಯಶ್, ರಣ್ಬೀರ್ ಕಪೂರ್ ಹಾಗೂ ಸಾಯಿಪಲ್ಲವಿ ಕಾಂಬೋ ಸದ್ಯ ಟಾಕ್ ಕ್ರಿಯೇಟ್ ಮಾಡಿದೆ.
ಒಂದಲ್ಲ ಎರಡೆರಡು ಭಾಗಗಳಲ್ಲಿ ರಾಮಾಯಣ ತಯಾರಾಗ್ತಿದ್ದು, 2026ರ ದೀಪಾವಳಿಗೆ ಮೊದಲ ಭಾಗ, 2027ರ ದೀಪಾವಳಿಗೆ ಎರಡನೇ ಭಾಗ ಬೆಳ್ಳಿತೆರೆ ಬೆಳಗಲಿವೆ. ಅಂದಹಾಗೆ ನಮ್ಮ ಯಶ್ ರಾವಣನ ಪಾತ್ರಕ್ಕಾಗಿ ಸೆಟ್ಗೆ ಎಂಟ್ರಿ ಕೊಟ್ಟಿದ್ದು, ಹಾಲಿವುಡ್ ಸ್ಟಂಟ್ ಮಾಸ್ಟರ್ ಜೊತೆ ಕಾಣಿಸಿಕೊಂಡಿದ್ರು. ಕಾಸ್ಟ್ಯೂಮ್ಸ್, ಕಥೆ, ಗ್ರಾಫಿಕ್ಸ್, ವಿಎಫ್ಎಕ್ಸ್, ಅಡ್ವಾನ್ಸ್ಡ್ ಕ್ಯಾಮೆರಾ ಸೇರಿದಂತೆ ಯಾವುದೇ ವಿಭಾಗದಲ್ಲಿ ಕಾಂಪ್ರಮೈಸ್ ಆಗ್ತಿಲ್ಲ ಟೀಂ. ಇಂಡಿಯಾದಲ್ಲಿರೋ ಬೆಸ್ಟ್ ಕಲಾವಿದರು, ವರ್ಲ್ಡ್ ನಲ್ಲಿರೋ ಬೆಸ್ಟ್ ಟೆಕ್ನಿಷಿಯನ್ಸ್ ಈ ಚಿತ್ರಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ರಾಮಾಯಣ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಬೋಲ್ಡ್ ಸ್ಟೇಟ್ಮೆಂಟ್ ಒಂದನ್ನ ನೀಡಿದ್ದಾರೆ. ನಮ್ಮ ರಾಯಾಯಣ ಸಿನಿಮಾ, ದಿ ಲಾರ್ಡ್ ಆಫ್ ದಿ ರಿಂಗ್ಸ್ ಹಾಗೂ ಅವತಾರ್ ಸಿನಿಮಾಗಳ ರೀತಿ ಐಕಾನಿಕ್ ಸಿನಿಮಾ ಆಗಲಿದೆ ಎಂದಿದ್ದಾರೆ. ಅಂದಹಾಗೆ ಇವೆರಡೂ ಸಿನಿಮಾಗಳು ವಿಶ್ವ ಸಿನಿದುನಿಯಾದಲ್ಲಿ ಮೇಕಿಂಗ್, ಕಥೆ, ಪಾತ್ರಗಳ ಪರ್ಫಾಮೆನ್ಸ್, ಟೆಕ್ನಿಕಲ್ ಪ್ರೆಸೆಂಟೇಷನ್ನಿಂದ ದಾಖಲೆ ಬರೆದ ಮಾಸ್ಟರ್ಪೀಸ್ ಚಿತ್ರಗಳು. ಜೇಮ್ಸ್ ಕ್ಯಾಮೆರಾನ್ ಚಿತ್ರಕ್ಕೆ ಹೋಲಿಸಿ ಹೇಳಿಕೆ ನೀಡ್ತಿದ್ದಾರೆ ಅಂದ್ರೆ, ಅದೇ ಲೆವೆಲ್ಗೆ ಸಿನಿಮಾ ಕೂಡ ತಯಾರಾಗ್ತಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಹಾಲಿವುಡ್ನ ಇವೆರಡೂ ಚಿತ್ರಗಳು ಸಾಕಷ್ಟು ಫ್ರಾಂಚೈಸ್ ಅಥ್ವಾ ಸೀರೀಸ್ ಆಫ್ ಮೂವೀಸ್ಗೆ ಬುನಾದಿ ಹಾಕಿಕೊಟ್ಟವು. ಅಷ್ಟೇ ಅಲ್ಲ, ಫಿಲ್ಮ್ ಮೇಕರ್ಗಳಿಗೆ ಸ್ಫೂರ್ತಿ ಆದವು. ಇದೀಗ ರಾಮಾಯಣ ಕೂಡ ಅದೇ ನಿಟ್ಟಿನಲ್ಲಿ ಸಿಕ್ಕಾಪಟ್ಟೆ ಬಿಗ್ ಸ್ಕೇಲ್ನಲ್ಲಿ ರೆಡಿ ಆಗ್ತಿದೆ. ಯಶ್ ಸದಾ ಕನ್ನಡದ ಕೀರ್ತಿ ಪತಾಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಬೇಕು ಅಂತ ಬಯಸುತ್ತಾರೆ. ಕೆಜಿಎಫ್ ಬಳಿಕ ಟಾಕ್ಸಿಕ್ ಹಾಗೂ ರಾಮಾಯಣದಿಂದ ಮಗದೊಮ್ಮೆ ಆ ಹೇಳಿಕೆಯನ್ನ ಗಟ್ಟಿಗೊಳಿಸಲಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್