ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸುವ ಕ್ರಮ ಕೈಗೊಳ್ಳಲಾಗಿದೆ. ಗೋಕರ್ಣದ ಪವಿತ್ರ ಮಹಾಬಲೇಶ್ವರ ದೇವಸ್ಥಾನದಲ್ಲಿ ಈಗಾಗಲೇ ವಸ್ತ ಸಂಹಿತೆ ಜಾರಿಗೊಳಿಸಲಾಗಿದ್ದು, ಇದೀಗ ಭಟ್ಕಳ ತಾಲೂಕಿನ ವಿಶ್ವಪ್ರಸಿದ್ಧ ಶಿವ ಕ್ಷೇತ್ರವಾದ ಮುರುಡೇಶ್ವರ ಶಿವಾಲಯದಲ್ಲೂ ಈ ನಿಯಮವನ್ನು ಜಾರಿಗೆ ತರಲಾಗಿದೆ.
ಮುರುಡೇಶ್ವರವು ಧಾರ್ಮಿಕ ಕೇಂದ್ರವಾಗಿರುವುದರ ಜೊತೆಗೆ ಪ್ರಮುಖ ಪ್ರವಾಸಿ ತಾಣವಾಗಿದೆ. ಲಕ್ಷಾಂತರ ಪ್ರವಾಸಿಗರು ವರ್ಷವಿಡೀ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಜಲಕ್ರೀಡೆಗಳು, ಸ್ಕೂಬಾ ಡ್ರೈವಿಂಗ್, ಮತ್ತು 123 ಅಡಿ ಎತ್ತರದ ಬೃಹತ್ ಶಿವನ ಪ್ರತಿಮೆ ವಿಶ್ವದಾದ್ಯಂತ ಜನಪ್ರಿಯವಾಗಿವೆ. ಕಡಲತೀರದಲ್ಲಿ ಸಮಯ ಕಳೆದ ನಂತರ, ಭಕ್ತರು ಶಿವನ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆದರೆ, ಕೆಲವು ಪುರುಷರು ಚಡ್ಡಿ, ಬನಿಯನ್ನಂತಹ ಅನುಚಿತ ಉಡುಗೆಯಲ್ಲಿ ಮತ್ತು ಮಹಿಳೆಯರು ಧಾರ್ಮಿಕ ಸ್ಥಳಕ್ಕೆ ತಕ್ಕಂತಹ ಸಭ್ಯ ಉಡುಗೆ ಧರಿಸದೇ ದೇವಾಲಯಕ್ಕೆ ಬರುತ್ತಿದ್ದರು. ಇದರಿಂದ ಆಸ್ತಿಕ ಭಕ್ತರು ಆಕ್ಷೇಪ ವ್ಯಕ್ತಪಡಿಸಿ, ಆಡಳಿತ ಮಂಡಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಮನವಿ ಸಲ್ಲಿಸಿದ್ದರು.
ಈ ಮನವಿಗೆ ಸ್ಪಂದಿಸಿರುವ ದೇವಾಲಯದ ಆಡಳಿತ ಮಂಡಳಿಯು ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ, ಪುರುಷರು ಪಂಚೆ, ಧೋತಿ, ಅಥವಾ ಸಾಂಪ್ರದಾಯಿಕ ಉಡುಗೆಯೊಂದಿಗೆ ಶರ್ಟ್ ಧರಿಸಬೇಕು. ಮಹಿಳೆಯರಿಗೆ ಸೀರೆ, ಚೂಡಿದಾರ, ಅಥವಾ ಸಾಂಪ್ರದಾಯಿಕ ಉಡುಗೆ ಕಡ್ಡಾಯವಾಗಿದೆ. ಈ ನಿಯಮವನ್ನು ಉಲ್ಲಂಘಿಸಿದವರಿಗೆ ದೇವಾಲಯಕ್ಕೆ ಪ್ರವೇಶ ನಿರಾಕರಿಸಲಾಗುವುದು. ದೇವಾಲಯದ ಮುಂಭಾಗದಲ್ಲಿ ಸೂಚನಾ ಫಲಕವನ್ನು ಸ್ಥಾಪಿಸಲಾಗಿದ್ದು, ಅಗತ್ಯವಾದ ಉಡುಗೆಯ ವಿವರಗಳನ್ನು ಅದರಲ್ಲಿ ನಮೂದಿಸಲಾಗಿದೆ.
ಮುರುಡೇಶ್ವರ ದೇವಸ್ಥಾನವು ಖಾಸಗಿ ಆಡಳಿತ ಮಂಡಳಿಯಿಂದ ನಿರ್ವಹಿಸಲ್ಪಡುತ್ತಿದ್ದು, ಉದ್ಯಮಿ ಆರ್.ಎನ್.ಶೆಟ್ಟಿ ಅವರ ಕುಟುಂಬವು ಇದರ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಈ ಕ್ರಮವು ದೇವಾಲಯದ ಪವಿತ್ರತೆಯನ್ನು ಕಾಪಾಡುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.