ರಾಯಚೂರು: ಕನ್ನಡದ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಗೋಲ್ಡ್ ಸುರೇಶ್ ವಿರುದ್ಧ ಗಂಭೀರ ವಂಚನೆ ಆರೋಪ ಕೇಳಿಬಂದಿದೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬವರು, ಕೇಬಲ್ ಚಾನೆಲ್ ಸ್ಟುಡಿಯೋ ಸ್ಥಾಪನೆಗಾಗಿ 14 ಲಕ್ಷ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದ್ದು, ಸುರೇಶ್ 4 ಲಕ್ಷ ರೂಪಾಯಿಗಳನ್ನು ವಾಪಸ್ ಮಾಡದೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮೈನುದ್ದಿನ್ರವರ ಪ್ರಕಾರ, 2017ರಲ್ಲಿ ಗೋಲ್ಡ್ ಸುರೇಶ್ ಜೊತೆ ಸ್ಟುಡಿಯೋ ನಿರ್ಮಾಣ ಮತ್ತು ಉಪಕರಣ ಖರೀದಿಗಾಗಿ 14 ಲಕ್ಷ ರೂಪಾಯಿಗಳ ಒಪ್ಪಂದ ಮಾಡಲಾಗಿತ್ತು. ಈ ಒಪ್ಪಂದದ ಭಾಗವಾಗಿ, ಮೈನುದ್ದಿನ್ 4 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಮತ್ತು ನಂತರ ಹಂತಹಂತವಾಗಿ 7 ಲಕ್ಷ ರೂಪಾಯಿಗಳನ್ನು ಒಟ್ಟು 11 ಲಕ್ಷ ರೂಪಾಯಿಗಳನ್ನು ಸುರೇಶ್ಗೆ ಪಾವತಿಸಿದ್ದಾರೆ. ಆದರೆ, ಸುರೇಶ್ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ, ಯಾವುದೇ ಮಾಹಿತಿ ನೀಡದೆ ಸಂಪರ್ಕ ತಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಕಿ 4 ಲಕ್ಷ ರೂಪಾಯಿಗಳನ್ನು ಕೇಳಿದಾಗ, ಸುರೇಶ್ ‘ಮುಂಬೈಗೆ ಬಂದರೆ ಹಣ ಕೊಡುತ್ತೇನೆ’ ಎಂದು ಭರವಸೆ ನೀಡಿದ್ದರೂ, ಯಾವುದೇ ಪಾವತಿ ಮಾಡಿಲ್ಲ ಎಂದು ಮೈನುದ್ದಿನ್ ದೂರಿದ್ದಾರೆ. 2025ರ ಏಪ್ರಿಲ್ 29ರಂದು ಮೈನುದ್ದಿನ್ರವರ ಸ್ನೇಹಿತ ಬಸವರಾಜ್ ಖಾತೆಗೆ 50,000 ರೂಪಾಯಿಗಳನ್ನು ವರ್ಗಾಯಿಸಿದ್ದರೂ, ಉಳಿದ ಹಣವನ್ನು ಪಾವತಿಸಿಲ್ಲ.
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಗೋಲ್ಡ್ ಸುರೇಶ್, “2017ರಲ್ಲಿಯೇ ಆ ವ್ಯಕ್ತಿಗೆ ಎಲ್ಲಾ ಹಣವನ್ನು ವಾಪಸ್ ಮಾಡಿದ್ದೇನೆ. ಈಗ ನಾನು ಉದ್ಯಮಿಯಾಗಿ ಬೆಳೆದಿರುವ ಕಾರಣ ವಿನಾಕಾರಣ ಆರೋಪ ಮಾಡಲಾಗಿದೆ. ಮೈನುದ್ದಿನ್ರವರ ಸಾಲವನ್ನೂ ನಾನೇ ತೀರಿಸಿದ್ದೇನೆ. ಈ ಸುಳ್ಳು ಆರೋಪಗಳಿಗೆ ಕಾನೂನಾತ್ಮಕವಾಗಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿವಾದವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.