ಮಂಗಳೂರಿನ ಉಳ್ಳಾಲದ ದೇರಳಕಟ್ಟೆ ಮೊಂಟೆಪದವು ಕೋಡಿಯಲ್ಲಿ ಭಾರೀ ಮಳೆಯಿಂದ ಗುಡ್ಡ ಕುಸಿದು ಕಾಂತಪ್ಪ ಪೂಜಾರಿ ಅವರ ಮನೆಯ ಮೇಲೆ ಬಿದ್ದ ಪರಿಣಾಮ, ಒಂದೇ ಕುಟುಂಬದ ಐವರು ಅವಶೇಷಗಳಡಿ ಸಿಲುಕಿದ್ದವರ ಪೈಕಿ ಈ ದುರಂತದಲ್ಲಿ ಈಗಾಗಲೇ ಮೂವರು ಸಾವನ್ನಪ್ಪಿದ್ದು, ಅವಶೇಷದಡಿ ಸಿಲುಕಿದ ತಾಯಿಯನ್ನು ರಕ್ಷಿಸಲಾಗಿದೆ.
ಮೃತರು ಪ್ರೇಮ ಪೂಜಾರಿ (60), ಮತ್ತು ಆರುಷ್ (1.5), ಆರ್ಯನ್ (2.5) ಎಂದು ಗುರುತಿಸಲಾಗಿದೆ. ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಕಾನಕೆರೆ ಮತ್ತು ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ ಸಂಭವಿಸಿತು. ಕಾಂತಪ್ಪ ಪೂಜಾರಿ (65) ಮತ್ತು ಅಶ್ವಿನಿ (31) ಅವರನ್ನು ರಕ್ಷಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಆದರೆ, ಆರ್ಯನ್ (2.5) ಮತ್ತು ಆರುಷ್(1.5)ರನ್ನು ರಕ್ಷಣಾ ಕಾರ್ಯದ ಸಮಯದಲ್ಲಿ ರಕ್ಷಿಸಲಾಗಿತ್ತಾದರೂ, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾನೆ. ಅಶ್ವಿನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಕ್ಸಿಜನ್ ವ್ಯವಸ್ಥೆಯೊಂದಿಗೆ ಬದುಕುಳಿದಿದ್ದಾಳೆ.
ಕಾನಕೆರೆಯಲ್ಲಿ ನೌಶಾದ್ರ ಮನೆಯ ಕಾಂಪೌಂಡ್ ಗೋಡೆ ಕುಸಿದು, ಕಿಟಕಿ ಬಿದ್ದ ಪರಿಣಾಮ ಬಾಲಕಿ ನಯೀಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಳು.
ಭಾರೀ ಮಳೆಯಿಂದ ದಕ್ಷಿಣ ಕನ್ನಡದಲ್ಲಿ ಜಲಾವೃತ, ಭೂಕುಸಿತ, ಮತ್ತು ರಸ್ತೆ ಸಂಪರ್ಕ ಕಡಿತಗೊಂಡಿದೆ.





