ನವದೆಹಲಿ: ಭಾರತದಲ್ಲಿ ವಾಸಿಸುತ್ತಾ ಪಾಕಿಸ್ತಾನ ಪರ ಭಾವನೆಗಳನ್ನು ವ್ಯಕ್ತಪಡಿಸುವವರು ಇಲ್ಲಿ ಉಳಿಯಲು ಅರ್ಹರಾಗಿಲ್ಲ ಎಂದು ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಭಾರತವು ಭಯೋತ್ಪಾದನೆಯಂತಹ ಬಿಕ್ಕಟ್ಟಿನ ಸನ್ನಿವೇಶಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ದೇಶದ ಆಂತರಿಕ ಭದ್ರತೆಗೆ ಧಕ್ಕೆಯಾಗುವ ರೀತಿಯಲ್ಲಿ ಪಾಕಿಸ್ತಾನ ಪರ ಹೇಳಿಕೆಗಳನ್ನು ನೀಡುವುದು ಖಂಡನೀಯವೆಂದು ಅವರು ತೀವ್ರ ಎಚ್ಚರಿಕೆ ನೀಡಿದ್ದಾರೆ.
ಪವನ್ ಕಲ್ಯಾಣ್ ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, “ಯಾರು ಪಾಕಿಸ್ತಾನವನ್ನು ಪ್ರೀತಿಸುತ್ತಾರೋ ಅವರು ನೇರವಾಗಿ ಅಲ್ಲಿಗೆ ಹೋಗಬೇಕು. ಇಲ್ಲಿ ಉಳಿಯುವ ಅಗತ್ಯವಿಲ್ಲ. ಭಾರತದಲ್ಲಿ ವಾಸಿಸುತ್ತಾ ದೇಶದ ಶತ್ರು ರಾಷ್ಟ್ರವನ್ನು ಬೆಂಬಲಿಸುವುದು ಸರಿಯಲ್ಲ. ಅಂತವರು ದೇಶವನ್ನು ಬಿಟ್ಟುಬಿಡಬೇಕು,” ಎಂದು ಹೇಳಿದ್ದಾರೆ.
ಈ ಹಿಂದಿನ ಕೆಲ ದೂರದರ್ಶನ ಚರ್ಚೆಗಳಲ್ಲಿ ಭಾರತದ ವಿರುದ್ಧವಾಗಿ ಮತ್ತು ಪಾಕಿಸ್ತಾನದ ಪರವಾಗಿ ನೀಡಲಾದ ಹೇಳಿಕೆಗಳ ಬಗ್ಗೆ ಮಾತನಾಡಿದ ಅವರು, ಕೆಲ ಕಾಂಗ್ರೆಸ್ ನಾಯಕರು, ವಿಶೇಷವಾಗಿ ದಕ್ಷಿಣ ಭಾರತದವರು, ಟಿವಿ ಚರ್ಚೆಗಳ ವೇಳೆ ಪಾಕಿಸ್ತಾನ ಪರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತದಲ್ಲಿ ಪ್ರಜಾಪ್ರಭುತ್ವವಿದೆ, ಪ್ರತಿಯೊಬ್ಬನಿಗೂ ಅಭಿಪ್ರಾಯ ನೀಡುವ ಸ್ವಾತಂತ್ರ್ಯವಿದೆ ಎಂಬುದು ನಿಜ. ಆದರೆ ರಾಷ್ಟ್ರ ಭದ್ರತೆ ಮತ್ತು ಏಕತೆಗೆ ಧಕ್ಕೆಯಾಗುವ ರೀತಿಯಲ್ಲಿ ಅಂತರಾಷ್ಟ್ರೀಯ ಹಿನ್ನಲೆಯಲ್ಲಿ, ತೀರಾ ವಿರೋಧಿ ನಿಲುವುಗಳನ್ನು ತಾಳುವುದು ಅಪರಾಧ ಎಂದು ಅವರು ಅಭಿಪ್ರಾಯಪಟ್ಟರು.
ಈ ವಿವಾದಾತ್ಮಕ ಹೇಳಿಕೆಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಏಪ್ರಿಲ್ 22 ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯ ಹಿನ್ನಲೆಯಲ್ಲಿ ಬಂದಿವೆ. ಈ ದಾಳಿಯಲ್ಲಿ 26 ಅಮಾಯಕ ನಾಗರಿಕರು ಮೃತಪಟ್ಟಿದ್ದು, ದೇಶದಾದ್ಯಂತ ತೀವ್ರ ಆಕ್ರೋಶದ ಅಲೆ ಎದ್ದಿದೆ.
ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಜನಸೇನಾ ಪಕ್ಷದ ಸಕ್ರಿಯ ಕಾರ್ಯಕರ್ತ ಮಧುಸೂದನ್ ರಾವ್ ಅವರ ಕುಟುಂಬಕ್ಕೆ 50 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುವುದಾಗಿ ಪಕ್ಷದ ಅಧಿಕೃತ ಎಕ್ಸ್ ಖಾತೆ (ಹಿಂದಿನ ಟ್ವಿಟರ್) ಮೂಲಕ ಪ್ರಕಟಣೆ ನೀಡಲಾಗಿದೆ.