ರಾಮನಗರ, ಏಪ್ರಿಲ್ 19 : ರಿಯಲ್ ಎಸ್ಟೇಟ್ ಮಾಫಿಯಾ ಹಿನ್ನೆಲೆ ಹೊಂದಿದ್ದ ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಫೈರಿಂಗ್ ನಡೆಸಿದ ಘಟನೆ, ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಾಮನಗರ ಜಿಲ್ಲೆಯ ಬಿಡದಿ ಬಳಿಯ ಫಾರ್ಮ್ಹೌಸ್ನಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ದಾಳಿಯಲ್ಲಿ ರಿಕ್ಕಿ ರೈಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದ ತನಿಖೆ ಚುರುಕುಗೊಂಡಿದೆ.
₹2000 ಕೋಟಿ ಆಸ್ತಿ ವಿಚಾರವೇ ಹಿನ್ನೆಲೆ
ಮುತ್ತಪ್ಪ ರೈ ಅವರು ಬೆಂಗಳೂರಿನಿಂದ ಮಂಗಳೂರು, ಗೋವಾ, ಮೈಸೂರಿನವರೆಗೆ ವ್ಯಾಪಕ ಜಮೀನು, ಹೋಟೆಲ್, ಕಚೇರಿ, ವ್ಯಾಪಾರ ಚಟುವಟಿಕೆಗಳನ್ನು ಹೊಂದಿದ್ದವರು. ಅವರ ನಿಧನದ ಬಳಿಕ ಈ ಎಲ್ಲಾ ಆಸ್ತಿ ಮತ್ತು ವ್ಯವಹಾರಗಳನ್ನು ರಿಕ್ಕಿ ರೈ ನಿರ್ವಹಿಸುತ್ತಿದ್ದಾರೆ. ಈ ಆಸ್ತಿ ಹಂಚಿಕೆಯಲ್ಲಿ ಉಂಟಾದ ಮನಸ್ತಾಪ ಮತ್ತು ಕಾನೂನು ವಿವಾದಗಳು ಈಗ ಗಂಭೀರ ತಿರುವು ಪಡೆದಿವೆ. ಪೊಲೀಸರು ಇದನ್ನೂ ತನಿಖೆ ನಡೆಸುತ್ತಿದ್ದಾರೆ.
ಶಂಕಿತರಾದ ಮಿಥುನ್ ರೈ ಮತ್ತು ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾ
ಈ ಪ್ರಕರಣದ ತನಿಖೆಯಲ್ಲಿ ಮುತ್ತಪ್ಪ ರೈನ ಆಪ್ತ ಸಹಾಯಕನಾಗಿದ್ದ ಮಿಥುನ್ ರೈ ಹೆಸರು ಎದುರಾಗಿದ್ದು, ಆಸ್ತಿ ಹಂಚಿಕೆಯಲ್ಲಿ ಉಂಟಾದ ವೈಷಮ್ಯದಿಂದಾಗಿ ದಾಳಿ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಿಥುನ್ ರೈ, ಮುತ್ತಪ್ಪ ರೈ ಅವರ ಜೊತೆಗೆ ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ, ಮದುವೆ ನಂತರದ ಆಸ್ತಿ ತಕರಾರುಗಳಿಂದ ದೂರಾಗಿದ್ದ ಎನ್ನಲಾಗಿದೆ.
ಇದೇ ರೀತಿಯಾಗಿ, ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧಾ ಹಾಗೂ ಅವರ ಜೊತೆಗಿನ ಸಂಬಂಧಿತ ವ್ಯಕ್ತಿಗಳು ರಾಕೇಶ್ ಮಲ್ಲಿ (A1), ನಿತೇಶ್ ಶೆಟ್ಟಿ (A3), ವೈದ್ಯನಾಥನ್ (A4) ವಿರುದ್ಧ FIR ದಾಖಲಾಗಿದೆ. ಈ ನಾಲ್ವರು ಆರೋಪಿಗಳ ವಿರುದ್ಧ ಸುಪಾರಿ ಕೊಟ್ಟಿರುವ ಶಂಕೆ ಎದುರಾಗಿದ್ದು, ಈ ದಾಳಿ ಒಂದು ಯೋಜಿತ ಕೃತ್ಯವಾಗಿರುವ ಬಗ್ಗೆ ಅನುಮಾನವಿದೆ.
ಆಸ್ತಿ ವಿವಾದದ ಹಿನ್ನೆಲೆ
ಮುತ್ತಪ್ಪ ರೈ ಸಾವನ್ನಪ್ಪುವ ಮುನ್ನ ಅವರ ಮಕ್ಕಳಿಗೆ ವಿಲ್ ಬರೆದು ಆಸ್ತಿ ಹಂಚಿಕೆ ಮಾಡಿದ್ರು. ಆದರೆ ಅನುರಾಧಾ ತಮ್ಮ ಪಾಲಿನ ಆಸ್ತಿಯನ್ನು ನಿತೇಶ್ ಎಸ್ಟೇಟ್ಗೆ ಮಾರಾಟ ಮಾಡಿದ್ದರು. ಈ ಕುರಿತು ರಿಕ್ಕಿ ರೈ ನ್ಯಾಯಾಲಯದಲ್ಲಿ ದಾವೆ ಹಾಕಿದ್ದು, ಕೋರ್ಟ್ ಅವರು ಆಸ್ತಿಯಲ್ಲಿ ಹಕ್ಕು ಹೊಂದಿರುವುದಾಗಿ ತೀರ್ಮಾನಿಸಿದೆ. ಈ ತೀರ್ಮಾನದ ನಂತರವೇ ಈ ದಾಳಿ ನಡೆದಿದೆ ಎನ್ನುವ ಬಗ್ಗೆ ಅನುಮಾನ ಹೆಚ್ಚಿಸಿದೆ.
ಘಟನೆಯ ತನಿಖೆ: ಐದು ವಿಶೇಷ ತಂಡಗಳ ರಚನೆ
ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಈ ಶೂಟೌಟ್ ಪ್ರಕರಣದ ತನಿಖೆಗೆ ಐದು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ, ಫಾಮ್ಹೌಸ್ ಸುತ್ತಲಿನ ಸಿಡಿಆರ್ ಡೇಟಾ ಸಂಗ್ರಹ, ಹಳೆಯ ಶತ್ರುಗಳ ಪತ್ತೆ, ಕುಟುಂಬದ ಸದಸ್ಯರಿಂದ ಮಾಹಿತಿ ಸಂಗ್ರಹ, ಸ್ಥಳೀಯ ಮಾನಿಟರಿಂಗ್ ತಂಡಗಳನನ್ಉ ರಚಿಸಲಾಗಿದೆ.
ಅಲ್ಲದೇ ಶ್ವಾನದಳ ಘಟನಾ ಸ್ಥಳದಿಂದ ಸುಮಾರು 2 ಕಿ.ಮೀ ದೂರದ ಹೆಗ್ಗಡಗೆರೆವರೆಗೆ ಗಮಿಸಿಕೊಂಡಿದ್ದು, ಶೂಟರ್ಗಳು ವಾಹನದಲ್ಲಿ ಬಂದಿರಬಹುದೆಂದು ಶಂಕಿಸಲಾಗಿದೆ. ಇನ್ನು ದಾಳಿಯ ಉದ್ದೇಶ ಮತ್ತು ಸುಪಾರಿ ಕೊಟ್ಟವರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ.