ರಾಜ್ಯ ರಾಜಕಾರಣದಲ್ಲೀಗ ಮೀಟಿಂಗ್ ಮೇಲೆ ಮೀಟಿಂಗ್. ದೆಹಲಿ ಹೈಕಮಾಂಡ್ ಭೇಟಿ ಮಾಡಿ ರಾಜ್ಯಕ್ಕೆ ಆಗಮಿಸಿರುವ ನಾಯಕರು ಒಬ್ಬರ ನಂತರ ಮತ್ತೊಬ್ಬರನ್ನ ಭೇಟಿ ಮಾಡ್ತಿದ್ದಾರೆ. ದೆಹಲಿಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಆ ನಾಯಕರುಗಳೆಲ್ಲಾ ಸುದೀರ್ಘವಾದ ಚರ್ಚೆ ನಡೆಸುತ್ತಿದ್ದಾರೆ ನೋಡಿ. ಅಷ್ಟಕ್ಕೂ ಇಂದು ಯಾರು ಯಾರನ್ನ ಭೇಟಿ ಮಾಡಿ ಏನೆಲ್ಲಾ ಚರ್ಚೆ ಮಾಡಿದ್ರು ಅನ್ನೋದನ್ನ ನೋಡೋಣ ಬನ್ನಿ.
ರಾಜ್ಯ ಕಾಂಗ್ರೆಸ್ ನಲ್ಲೀಗ ದೆಹಲಿಯದ್ದೆ ಧ್ಯಾನ. ಕಳೆದ ವಾರ ದೆಹಲಿ ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದ ಸಿಎಂ-ಡಿಸಿಎಂ ಹಾಗೂ ಸಚಿವರು ದೆಹಲಿ ನಾಯಕರನ್ನ ಭೇಟಿ ಮಾಡಿ ರಾಜ್ಯಕ್ಕೆ ಮರಳಿ ಬಂದಿದ್ದಾರೆ. ಅದರಲ್ಲೂ ರಾಹುಲ್ ಗಾಂಧಿ ಜೊತೆ ಸಿಎಂ ಸಿದ್ದರಾಮಯ್ಯ ನಡೆಸಿದ ರಹಸ್ಯ ಮಾತುಕತೆ ಸಾಕಷ್ಟು ಸಂಚಲನ ಸೃಷ್ಠಿ ಮಾಡಿತ್ತು. ಡಿಕೆಶಿ ಭೇಟಿಗೆ ಅವಕಾಶ ಕೊಡದ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯರನ್ನ ಮಾತ್ರ ಭೇಟಿ ಮಾಡಿದ್ರು. ಹೀಗಾಗಿ ದೆಹಲಿ ನಾಯಕರ ಭೇಟಿ ವೇಳೆ ನಡೆದ ಚರ್ಚೆ ಬಗ್ಗೆ ಇದೀಗ ರಾಜ್ಯ ನಾಯಕರು ಮೀಟಿಂಗ್ ಮೇಲೆ ಮೀಟಿಂಗ್ ನಡೆಸುತ್ತಿದ್ದಾರೆ. ನಿನ್ನೆಯಷ್ಠೆ ಸಿಎಂ ಸಿದ್ದರಾಮಯ್ಯರನ್ನ ಸಚಿವ ಸತೀಶ ಜಾರಕಿಹೊಳಿ ಭೇಟಿ ಮಾಡಿ ಚರ್ಚೆ ನಡೆಸಿದ ಬೆನ್ನಲ್ಲೆ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಗೃಹ ಸಚಿವ ಜಿ ಪರಮೇಶ್ವರ ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು.
ದೆಹಲಿಗೆ ರಾಜ್ಯ ನಾಯಕರೆಲ್ಲಾ ತೆರಳಿದ್ರು ಗೃಹ ಸಚಿವ ಜಿ ಪರಮೇಶ್ವರ ಮಾತ್ರ ಹೈಕಮಾಂಡ್ ನಾಯಕರ ಭೇಟಿಗೆ ತೆರಳಿರಲಿಲ್ಲ. ಹೀಗಾಗೇ ಇಂದು ಬೆಂಗಳೂರಿನ ಸದಾಶಿವನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರನ್ನ ಭೇಟಿ ಮಾಡಿದ ಜಿ ಪರಮೇಶ್ವರ ಸುದೀರ್ಘವಾಗಿ ಚರ್ಚೆ ನಡೆಸಿದರು. ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ನಾಯಕರಿಬ್ಬರು ದೆಹಲಿ ಹೈಕಮಾಂಡ್ ಭೇಟಿ ವೇಳೆ ನಡೆದ ಚರ್ಚೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ಸಿಎಂ ಬದಲಾವಣೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ. ಪರಿಷತ್ ಗೆ ಸದಸ್ಯರ ನೇಮಕ ಸೇರಿದಂತೆ ದಲಿತ ಸಮಾವೇಶ ನಡೆಸುವ ಕುರಿತು ಸುದೀರ್ಘವಾಗಿ ಮಾತುಕತೆ ನಡೆಸಿದರು. ಅಲ್ಲದೇ ದಲಿತ ಸಚಿವರ ಡಿನ್ನರ್ ಮೀಟ್ ಗೆ ಬ್ರೇಕ್ ಹಾಕಿರುವುದು ಮತ್ತು ಸಮಾವೇಶಕ್ಕೆ ಬ್ರೇಕ್ ಹಾಕಿದ ಬಗ್ಗೆಯೂ ಚರ್ಚೆ ನಡೆಸಿದರು. ಆದ್ರೆ ಮಾಧ್ಯಮವರಿಗೆ ಮಾತ್ರ ಇದೊಂದು ಸೌಜನ್ಯಯುತ ಭೇಟಿ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಅಂತಾ ಪ್ರತಿಕ್ರೀಯೆ ನೀಡಿದ್ರು.
ದೆಹಲಿ ಭೇಟಿ ವೇಳೆ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ಭೇಟಿ ಮಾಡಿ ಚರ್ಚೆ ನಡೆಸಿದ್ರೆ. ರಾಜ್ಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರನ್ನ ಭೇಟಿ ಮಾಡಿ ರಾಜಕೀಯ ಚರ್ಚೆ ನಡೆಸಿರುವುದು ಕೈ ಪಡೆಯಲ್ಲಿ ಸಾಕಷ್ಟು ಕುತೊಹಲ ಮತ್ತು ಮಹತ್ವಕ್ಕೆ ಕಾರಣವಾಗಿರವುದು ಮಾತ್ರ ಸುಳ್ಳಲ್ಲ.