ಕರಾಚಿ: ಗಣೇಶ ಚತುರ್ಥಿ ಸಂಭ್ರಮ ಮನೆಮಾಡಿರುವ ಬೆನ್ನಲ್ಲೇ, ಪಾಕಿಸ್ತಾನದ ಕರಾಚಿಯಿಂದ ಹೊರಬಂದಿರುವ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆಯುತ್ತಿದೆ. ಮರಾಠಿ ಕುಟುಂಬವೊಂದು ನಡೆಸುತ್ತಿರುವ ಗಣೇಶ್ ಮಠ್ ಮಂದಿರದಲ್ಲಿ ಮುಸ್ಲಿಂ ಕಲಾವಿದರೊಬ್ಬರು ಗಣಪತಿ ವಿಗ್ರಹಕ್ಕೆ ಬಣ್ಣ ಹಚ್ಚುತ್ತಿರುವ ದೃಶ್ಯಗಳು ಇದೀಗ ವೈರಲ್ ಆಗಿದ್ದು, ಧಾರ್ಮಿಕ ಸಾಮರಸ್ಯ ಮತ್ತು ಮಾನವೀಯತೆಯ ಸಂದೇಶಕ್ಕಾಗಿ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕರಾಚಿಯಲ್ಲಿ ವಾಸಿಸುತ್ತಿರುವ ಮಹಾರಾಷ್ಟ್ರ ಮೂಲದ ಕುಟುಂಬವೊಂದು ಗಣೇಶ್ ಮಠ್ ಮಂದಿರದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ಗಣಪತಿ ವಿಗ್ರಹಕ್ಕೆ ಬಣ್ಣ ಹಚ್ಚುವ ಕಾರ್ಯವನ್ನು ಮುಸ್ಲಿಂ ಕಲಾವಿದರೊಬ್ಬರು ಕೈಗೊಂಡಿದ್ದಾರೆ. ಅತ್ಯಂತ ಶ್ರದ್ಧೆ ಹಾಗೂ ನೈಪುಣ್ಯದಿಂದ ಅವರು ವಿಗ್ರಹಕ್ಕೆ ವಿವಿಧ ಬಣ್ಣಗಳನ್ನು ಹಚ್ಚುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ಕರಾಚಿಯಲ್ಲಿ ವಾಸಿಸುವ ಮರಾಠಿ ಸಮುದಾಯದ ಅಮರ್ ಪ್ರಕಾಶ್ ಎಂಬುವವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಕರಾಚಿಯಲ್ಲಿರುವ ಮಹಾರಾಷ್ಟ್ರದ ಕುಟುಂಬವೊಂದು ನಡೆಸುತ್ತಿರುವ ಗಣೇಶ್ ಮಠ್ ಮಂದಿರದಲ್ಲಿ ಮುಸ್ಲಿಂ ಕಲಾವಿದರೊಬ್ಬರು ಗಣಪತಿ ಬಪ್ಪನಿಗೆ ಬಣ್ಣ ಹಚ್ಚುತ್ತಿದ್ದಾರೆ ಎಂದು ಅವರು ವಿಡಿಯೋಗೆ ವಿವರಣೆ ನೀಡಿದ್ದಾರೆ.
ವಿಡಿಯೋ ಆರಂಭದಲ್ಲಿ ಬಿಳಿ ಬಣ್ಣದಲ್ಲಿರುವ ಗಣಪತಿ ವಿಗ್ರಹ ಕಾಣಿಸುತ್ತದೆ. ಕಲಾವಿದ ಮೊದಲು ಸ್ಪ್ರೇ ಪೇಂಟ್ ಬಳಸಿ ವಿಗ್ರಹಕ್ಕೆ ಬಣ್ಣ ಹಚ್ಚಲು ಆರಂಭಿಸುತ್ತಾರೆ. ನಂತರ ಬ್ರಷ್ ಬಳಸಿಕೊಂಡು ಗಣಪತಿಯ ವಿವಿಧ ಭಾಗಗಳಿಗೆ ಅತ್ಯಂತ ಸೂಕ್ಷ್ಮವಾಗಿ ಬಣ್ಣಗಳನ್ನು ತುಂಬುತ್ತಾರೆ. ಬಂಗಾರ ಮತ್ತು ಬೆಳ್ಳಿ ಬಣ್ಣಗಳ ಬಳಕೆಯ ಮೂಲಕ ವಿಗ್ರಹಕ್ಕೆ ಮತ್ತಷ್ಟು ಆಕರ್ಷಕ ರೂಪ ನೀಡುತ್ತಾರೆ.
ಈ ವೇಳೆ ಕಲಾವಿದನ ಕೈಚಳಕ ಹಾಗೂ ವಿಗ್ರಹದ ಅಲಂಕಾರ ನೋಡುಗರ ಗಮನ ಸೆಳೆಯುತ್ತದೆ. ಗಣಪತಿ ವಿಗ್ರಹಕ್ಕೆ ಅಂತಿಮ ರೂಪ ನೀಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ.
ವಿಡಿಯೋದಲ್ಲಿ “ಕೌನ್ ಹಿಂದು, ಕೌನ್ ಮುಸ್ಲಿಂ? ದಿ ಪವರ್ ಆಫ್ ಬಪ್ಪಾ ಅಂಡ್ ಬ್ಯೂಟಿ ಆಫ್ ಕರಾಚಿ” ಎಂಬ ಬರಹವೂ ಕಾಣಿಸಿಕೊಂಡಿದೆ. ಅಂದರೆ, “ಯಾರು ಹಿಂದೂ? ಯಾರು ಮುಸ್ಲಿಂ? ಇದೇ ಬಪ್ಪನ ಶಕ್ತಿ, ಇದೇ ಕರಾಚಿಯ ಸೌಂದರ್ಯ” ಎಂಬ ಸಂದೇಶವನ್ನು ಈ ವಿಡಿಯೋ ಸಾರುತ್ತದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಹಾರ್ಟ್ ಎಮೋಜಿಗಳ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಮುಸ್ಲಿಂ ಕಲಾವಿದನ ಕಲಾ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.
“ಮಾನವೀಯತೆಯೇ ಶ್ರೇಷ್ಠ ಧರ್ಮ”, “ಪ್ರತಿಯೊಂದು ಧರ್ಮವೂ ಒಳ್ಳೆಯದೇ; ಅದನ್ನು ಕೆಟ್ಟದಾಗಿ ಬದಲಿಸುವವರು ಮನುಷ್ಯರು” ಎಂಬಂತಹ ಕಾಮೆಂಟ್ಗಳು ವಿಡಿಯೋಗೆ ಬಂದಿವೆ. ಮತ್ತೊಂದೆಡೆ, ಪಾಕಿಸ್ತಾನದ ಕರಾಚಿಯಲ್ಲೂ ಗಣೇಶ ಚತುರ್ಥಿ ಆಚರಣೆ ನಡೆಯುತ್ತಿರುವುದನ್ನು ಕಂಡು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
“ಅವರು ಅತ್ಯಂತ ಪ್ರತಿಭಾವಂತ ಕಲಾವಿದ”, “ಗಣಪತಿ ವಿಗ್ರಹ ಅದ್ಭುತವಾಗಿ ಮೂಡಿಬಂದಿದೆ” ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಧರ್ಮದ ಗಡಿಗಳನ್ನು ಮೀರಿ ಕಲೆ, ಭಕ್ತಿ ಮತ್ತು ಮಾನವೀಯತೆ ಒಂದಾಗಬಹುದು ಎಂಬ ಸಂದೇಶವನ್ನು ಈ ವೈರಲ್ ವಿಡಿಯೋ ಸಾರುತ್ತಿರುವುದಾಗಿ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.





