ನವದೆಹಲಿ, ಆಗಸ್ಟ್ 21: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಇದಕ್ಕೆ ಎಥೆನಾಲ್ ಉತ್ಪಾದನೆಗಾಗಿ ಸಕ್ಕರೆಯನ್ನು ಬಳಸುತ್ತಿರುವುದೇ ಕಾರಣ ಎಂಬ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಸಕ್ಕರೆ ಬೆಲೆ ಏರಿಕೆಗೆ ದೇಶೀಯ ಉತ್ಪಾದನೆಯಲ್ಲಿನ ಕುಸಿತ, ಹಬ್ಬದ ಋತುವಿನಲ್ಲಿ ಹೆಚ್ಚುತ್ತಿರುವ ಬೇಡಿಕೆ, ಜಾಗತಿಕ ಪೂರೈಕೆಯ ಬಿಗಿತ ಹಾಗೂ ದಾಸ್ತಾನು ಸಂಗ್ರಹಣೆ ಪ್ರಮುಖ ಕಾರಣಗಳಾಗಿವೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ತಿಳಿಸಿದೆ.
ಜುಲೈ 20ರಂದು ಕಿಲೋ ಸಕ್ಕರೆಗೆ ಸರಾಸರಿ 48.18 ರೂ. ಇದ್ದ ಬೆಲೆ, ಆಗಸ್ಟ್ 20ರ ವೇಳೆಗೆ ರೂ. 55.70ಕ್ಕೆ ಏರಿಕೆಯಾಗಿದೆ. ಅಂದರೆ, ಸುಮಾರು ಒಂದು ತಿಂಗಳ ಅವಧಿಯಲ್ಲಿ ಸಕ್ಕರೆ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
ಎಥೆನಾಲ್ನಿಂದ ಸಕ್ಕರೆ ಕೊರತೆ ಇಲ್ಲ
ಸಕ್ಕರೆ ಬೆಲೆ ಏರಿಕೆಗೆ ಎಥೆನಾಲ್ ಉತ್ಪಾದನೆಯನ್ನು ಕಾರಣವೆಂದು ಹೇಳುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಎಥೆನಾಲ್ ಉತ್ಪಾದನೆಗೆ ತಿರುಗಿಸಲಾಗುತ್ತಿರುವ ಸಕ್ಕರೆಯ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದೆ. 2022-23ರಲ್ಲಿ ಸುಮಾರು ಶೇ.12ರಷ್ಟಿದ್ದ ಈ ಪ್ರಮಾಣವು 2025-26ರ ಋತುವಿನಲ್ಲಿ ಶೇ.9ಕ್ಕೆ ಇಳಿಕೆಯಾಗಿದೆ.
ಇದಲ್ಲದೆ, ದೇಶದ ಎಥೆನಾಲ್ ಉತ್ಪಾದನೆಯ ಗಮನಾರ್ಹ ಭಾಗವು ಧಾನ್ಯಗಳಿಂದ, ವಿಶೇಷವಾಗಿ ಮೆಕ್ಕೆಜೋಳದಿಂದ ಬರುತ್ತಿದೆ. ಹೀಗಾಗಿ ಸಕ್ಕರೆ ಬೆಲೆ ಏರಿಕೆಯನ್ನು ಎಥೆನಾಲ್ ಮಿಶ್ರಣ ನೀತಿಗೆ ನೇರವಾಗಿ ಜೋಡಿಸುವುದು ತಪ್ಪು ಎಂದು ಸರ್ಕಾರ ಹೇಳಿದೆ.
ಉತ್ಪಾದನೆ ಕುಸಿತಕ್ಕೆ ಹಲವು ಕಾರಣ
ಈ ಋತುವಿನಲ್ಲಿ ದೇಶೀಯ ಸಕ್ಕರೆ ಉತ್ಪಾದನೆ ಸುಮಾರು 34.3 ದಶಲಕ್ಷ ಟನ್ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಉತ್ಪಾದನೆ ಸುಮಾರು 30.6 ದಶಲಕ್ಷ ಟನ್ಗೆ ಸೀಮಿತವಾಗಿದೆ.
ಕಬ್ಬಿನ ಬೆಳೆಗೆ ರೆಡ್ ರಾಟ್, ಟಾಪ್ ಬೋರರ್ನಂತಹ ಕೀಟ ಹಾಗೂ ರೋಗಬಾಧೆ, ಕೆಲವು ಪ್ರದೇಶಗಳಲ್ಲಿ ಅತಿಯಾದ ಮಳೆ ಮತ್ತು ನೀರು ನಿಲ್ಲುವಿಕೆ ಬೆಳೆ ಹಾನಿಗೆ ಕಾರಣವಾಗಿದೆ. ಪರಿಣಾಮವಾಗಿ ಕಬ್ಬಿನ ಲಭ್ಯತೆ ಕಡಿಮೆಯಾಗಿ ಸಕ್ಕರೆ ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ.
ಬೆಲೆ ನಿಯಂತ್ರಣಕ್ಕೆ ಸರ್ಕಾರದ ಕ್ರಮ
ಹಬ್ಬದ ಹಂಗಾಮಿನಲ್ಲಿ ಸಕ್ಕರೆ ಕೊರತೆಯಾಗದಂತೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಆಗಸ್ಟ್ 1ರಿಂದ ನವೆಂಬರ್ 30ರವರೆಗೆ ಸಕ್ಕರೆ ಡೀಲರ್ಗಳಿಗೆ 400 ಟನ್ ದಾಸ್ತಾನು ಮಿತಿ ವಿಧಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಸಕ್ಕರೆ ಬಳಸುವ ಗ್ರಾಹಕರಿಗೂ ದಾಸ್ತಾನು ನಿಯಂತ್ರಣ ಹೇರಲಾಗಿದೆ.
ಕೃತಕ ಅಭಾವ ಮತ್ತು ದಾಸ್ತಾನು ಸಂಗ್ರಹಣೆ ತಡೆಯಲು ಸಕ್ಕರೆ ಕಾರ್ಖಾನೆಗಳಲ್ಲಿ ಅಧಿಕಾರಿಗಳ ತಂಡಗಳು ಪರಿಶೀಲನೆ ನಡೆಸುತ್ತಿವೆ.
ಇದರ ಜೊತೆಗೆ ದೇಶೀಯ ಪೂರೈಕೆಯನ್ನು ಹೆಚ್ಚಿಸಲು 10 ಲಕ್ಷ ಟನ್ ಕಚ್ಚಾ ಸಕ್ಕರೆಯನ್ನು ಸುಂಕಮುಕ್ತವಾಗಿ ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಅಕ್ಟೋಬರ್ 15ರಿಂದ ಕಬ್ಬು ನುರಿಸುವ ಪ್ರಕ್ರಿಯೆ ಆರಂಭಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಲಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲೂ ಸಕ್ಕರೆ ಪೂರೈಕೆ ಬಿಗಿಯಾಗಿರುವುದರಿಂದ ಬೆಲೆಗಳ ಮೇಲೆ ಒತ್ತಡ ಹೆಚ್ಚಾಗಿದೆ. ಸದ್ಯ ದೇಶೀಯ ಅಗತ್ಯ ಪೂರೈಸಲು ಸಾಕಷ್ಟು ಸಕ್ಕರೆ ದಾಸ್ತಾನು ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.





