ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೇಂದ್ರ ಭಾಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ನಗರದ ಅತಿದೊಡ್ಡ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ತುಮಕೂರು ರಸ್ತೆಯಿಂದ ಹಳೇ ಮದ್ರಾಸ್ ರಸ್ತೆಯನ್ನು ನೇರವಾಗಿ ಸಂಪರ್ಕಿಸುವ ಸುಮಾರು 28 ಕಿ.ಮೀ ಉದ್ದದ ‘ಶುಲ್ಕ ಸಹಿತ’ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ ಸ್ಮೈಲ್) ಮುಂದಾಗಿದೆ.
ಸುಮಾರು 3,500 ಕೋಟಿ ರೂ. ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ (PPP) ‘ನಿರ್ಮಾಣ, ಮಾಲೀಕತ್ವ, ನಿರ್ವಹಣೆ ಮತ್ತು ವರ್ಗಾವಣೆ’ (BOOT) ಮಾದರಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಯೋಜನಾ ವೆಚ್ಚದ ಶೇ.40ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿದ್ದು, ಉಳಿದ ಶೇ.60ರಷ್ಟು ಹಣವನ್ನು ಗುತ್ತಿಗೆದಾರ ಸಂಸ್ಥೆ ಹೂಡಿಕೆ ಮಾಡಲಿದೆ.
ಕಾರಿಡಾರ್ ನಿರ್ಮಾಣ ಪೂರ್ಣಗೊಂಡ ಬಳಿಕ 30 ವರ್ಷಗಳ ಕಾಲ ವಾಹನಗಳಿಂದ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲು ಗುತ್ತಿಗೆದಾರ ಸಂಸ್ಥೆಗೆ ಅವಕಾಶ ನೀಡಲಾಗುತ್ತದೆ. ಆದರೆ, ವಾಹನಗಳಿಗೆ ವಿಧಿಸಬೇಕಾದ ಶುಲ್ಕದ ಪ್ರಮಾಣವನ್ನು ಸರ್ಕಾರವೇ ಅಂತಿಮಗೊಳಿಸಲಿದೆ ಎಂದು ಬಿ ಸ್ಮೈಲ್ ಅಧಿಕಾರಿಗಳು ತಿಳಿಸಿದ್ದಾರೆ.
30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ
ಮೂಲ ಯೋಜನೆಯ ಪ್ರಕಾರ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನು 30 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಯಶವಂತಪುರ ಫ್ಲೈಓವರ್ ಬಳಿಯಿಂದ ಆರಂಭವಾಗುವ ಈ ನಾಲ್ಕು ಪಥಗಳ ಕಾರಿಡಾರ್ನಲ್ಲಿ 12 ಕಡೆ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಇರಲಿದೆ.
ಈ ಪ್ರವೇಶ ಮತ್ತು ನಿರ್ಗಮನ ಪಾಯಿಂಟ್ಗಳ ಮೂಲಕ ವಾಹನ ಸವಾರರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಕಾರಿಡಾರ್ಗೆ ಪ್ರವೇಶಿಸಬಹುದು ಅಥವಾ ಹೊರಬರಬಹುದು. ಕಾರಿಡಾರ್ನಲ್ಲಿ ವಾಹನಗಳು ಗರಿಷ್ಠ 60ರಿಂದ 80 ಕಿ.ಮೀ ವೇಗದಲ್ಲಿ ಸಂಚರಿಸುವಂತೆ ರಸ್ತೆ ವಿನ್ಯಾಸಗೊಳಿಸಲಾಗುತ್ತದೆ.
ಸಂಚಾರ ದಟ್ಟಣೆಗೆ ಕಡಿವಾಣ
ಬೆಂಗಳೂರಿನ ಪ್ರಮುಖ ಜಂಕ್ಷನ್ಗಳು ಹಾಗೂ ಸಂಚಾರ ದಟ್ಟಣೆ ಹೆಚ್ಚಿರುವ ಪ್ರದೇಶಗಳನ್ನು ತಪ್ಪಿಸಿಕೊಂಡು ಸಾಗುವ ವ್ಯವಸ್ಥೆ ಇರುವುದರಿಂದ ಈ ಕಾರಿಡಾರ್ ನಗರ ಸಂಚಾರಕ್ಕೆ ವೇಗ ನೀಡುವ ನಿರೀಕ್ಷೆಯಿದೆ. ಸಿಗ್ನಲ್ಗಳು ಮತ್ತು ಹಲವು ಜಂಕ್ಷನ್ಗಳನ್ನು ದಾಟುವ ಅಗತ್ಯ ಕಡಿಮೆಯಾಗುವುದರಿಂದ ವಾಹನಗಳ ಪ್ರಯಾಣ ಸಮಯವೂ ತಗ್ಗಲಿದೆ.
ಎಲಿವೇಟೆಡ್ ಕಾರಿಡಾರ್ನಲ್ಲಿ ಸಂಚರಿಸಲು ಇಚ್ಛಿಸದ ವಾಹನ ಸವಾರರು ಈಗಿರುವ ಸಾಮಾನ್ಯ ರಸ್ತೆಗಳನ್ನು ಎಂದಿನಂತೆ ಬಳಸಬಹುದಾಗಿದೆ. ಹೀಗಾಗಿ ಹೊಸ ಕಾರಿಡಾರ್ ನಿರ್ಮಾಣವಾದರೂ ನಗರದ ಪ್ರಸ್ತುತ ರಸ್ತೆ ಸಂಚಾರ ವ್ಯವಸ್ಥೆ ಮುಂದುವರಿಯಲಿದೆ.
90 ನಿಮಿಷದ ಪ್ರಯಾಣ 28-30 ನಿಮಿಷಕ್ಕೆ
ಪ್ರಸ್ತುತ ತುಮಕೂರು ರಸ್ತೆ ಭಾಗದ ಯಶವಂತಪುರ ಫ್ಲೈಓವರ್ನಿಂದ ಕೆ.ಆರ್.ಪುರ ಸಿಗ್ನಲ್ ಬಳಿಯ ಹೂವಿನ ಮಾರುಕಟ್ಟೆ ಪ್ರದೇಶ ತಲುಪಲು ಪೀಕ್ ಅವಧಿಯಲ್ಲಿ ಸುಮಾರು 90 ನಿಮಿಷಗಳವರೆಗೆ ಸಮಯ ಬೇಕಾಗುತ್ತಿದೆ. ನಗರ ಕೇಂದ್ರದ ಮೂಲಕ ಸಾಗುವುದು ಅಥವಾ ರಿಂಗ್ ರಸ್ತೆಯನ್ನು ಬಳಸುವುದು ಪ್ರಮುಖ ಪರ್ಯಾಯ ಮಾರ್ಗಗಳಾಗಿವೆ.
ಈ ಮಾರ್ಗಗಳಿಗೆ ಪರ್ಯಾಯವಾಗಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾದರೆ, ತಡೆರಹಿತ ಸಂಚಾರದ ಮೂಲಕ ಇದೇ ಪ್ರಯಾಣವನ್ನು ಸುಮಾರು 28ರಿಂದ 30 ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು ಎಂಬ ನಿರೀಕ್ಷೆ ಇದೆ. ಇದರಿಂದ ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಪ್ರತಿನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ವಾಹನ ಸವಾರರಿಗೆ ಸಮಯ ಉಳಿತಾಯವಾಗುವ ಸಾಧ್ಯತೆಯಿದೆ.
ಯಾವ ಮಾರ್ಗದಲ್ಲಿ ಕಾರಿಡಾರ್?
ಯಶವಂತಪುರ ಫ್ಲೈಓವರ್ ಸರ್ಕಲ್ನಿಂದ ಆರಂಭವಾಗುವ ಎಲಿವೇಟೆಡ್ ಕಾರಿಡಾರ್ ಐಐಎಸ್ಸಿ, ಮೇಕ್ರಿ ಸರ್ಕಲ್, ಜಯಮಹಲ್, ಸೇಂಟ್ ಜಾನ್ಸ್ ಚರ್ಚ್ ರಸ್ತೆ ಹಾಗೂ ಹಲಸೂರು ಕೆರೆ ಮಾರ್ಗವಾಗಿ ಸಾಗಲಿದೆ. ಬಳಿಕ ಹಳೇ ಮದ್ರಾಸ್ ರಸ್ತೆಯನ್ನು ಸಂಪರ್ಕಿಸಿ ಕೆ.ಆರ್.ಪುರ ಸಿಗ್ನಲ್ ನಂತರ ಕಾರಿಡಾರ್ ಮುಕ್ತಾಯಗೊಳ್ಳಲಿದೆ.





