ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಸುಳ್ಳು ಮಾಹಿತಿಯನ್ನು ನಂಬಿ 16 ವರ್ಷದ ಬಾಲಕನನ್ನು ಹತ್ಯೆ ಮಾಡಿ, ಆತನ ವೃಷಣಗಳನ್ನು ಮಾರಾಟ ಮಾಡಲು ಯತ್ನಿಸಿದ ಆಘಾತಕಾರಿ ಪ್ರಕರಣ ಮಧ್ಯಪ್ರದೇಶದ ಭೋಪಾಲ್ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ವೇಳೆ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದ್ದು, ದೇಹದ ಖಾಸಗಿ ಅಂಗವನ್ನು ಮಾರಾಟ ಮಾಡುವ ಮೂಲಕ ದೊಡ್ಡ ಮೊತ್ತದ ಹಣ ಗಳಿಸಬಹುದು ಎಂಬ ಆಮಿಷವೊಡ್ಡಿ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಲ್ಲಿ ಇಬ್ಬರು ವಯಸ್ಕರನ್ನು ಆಮಿರ್ ಖುರೇಷಿ (18) ಮತ್ತು ಜೋಹೆಬ್ ಖಾನ್ (20) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಇಡೀ ಸಂಚಿನ ಪ್ರಮುಖ ರೂವಾರಿಯಾಗಿ ಜೋಹೆಬ್ ಖಾನ್ ಹೆಸರು ಕೇಳಿಬಂದಿದೆ. ಮಾನವ ದೇಹದ ಭಾಗಗಳನ್ನು ಮಾರಾಟ ಮಾಡಿದರೆ ದೊಡ್ಡ ಪ್ರಮಾಣದ ಹಣ ಗಳಿಸಬಹುದು ಎಂದು ಆತ ಇತರರಿಗೆ ಹೇಳಿದ್ದಾನೆ ಎನ್ನಲಾಗಿದೆ.
ಭೋಪಾಲ್ನ ಶ್ಯಾಮ್ಲಾ ಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟಾ ತಲಾಬ್ನ ಧೋಬಿಘಾಟ್ ಬಳಿ ಆಗಸ್ಟ್ 10ರಂದು ಅಪರಿಚಿತ ಶವ ಪತ್ತೆಯಾಗಿತ್ತು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ದೇಹದ ಮೇಲೆ ಚಾಕುವಿನಿಂದ ಇರಿದ ಗಾಯಗಳು ಕಂಡುಬಂದಿದ್ದವು. ಪ್ರಾಥಮಿಕ ತನಿಖೆಯಲ್ಲಿ ಇದು ಕೊಲೆ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಆರಂಭದಲ್ಲಿ ಮೃತನ ಗುರುತು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಬಳಿಕ ಮೃತನ ಕೈಯಲ್ಲಿದ್ದ ಹಚ್ಚೆಯ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಮೃತನ ತಾಯಿ ಪೊಲೀಸರನ್ನು ಸಂಪರ್ಕಿಸಿ, ಶವವನ್ನು ತಮ್ಮ ಮಗನದ್ದು ಎಂದು ಗುರುತಿಸಿದರು.
ಮೃತ ಬಾಲಕ ಇಕ್ಬಾಲ್ ಮೈದಾನದ ಸುತ್ತಮುತ್ತ ಪೆನ್ನುಗಳನ್ನು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ವೇಳೆ ಆತ ಆರೋಪಿಗಳ ಪೈಕಿ ಕೆಲವರ ಪರಿಚಯಸ್ಥನಾಗಿದ್ದ ಎಂಬುದು ಗೊತ್ತಾಗಿದೆ. ಪೊಲೀಸರ ಮಾಹಿತಿದಾರರ ಜಾಲದ ಮೂಲಕ ಮೂವರು ಅಪ್ರಾಪ್ತರು ಮತ್ತು ಒಬ್ಬ ವಯಸ್ಕ ಬಾಲಕನನ್ನು ಕೊಲೆ ಮಾಡಿರುವ ಬಗ್ಗೆ ಸುಳಿವು ಸಿಕ್ಕಿತ್ತು.
ತನಿಖೆಯ ಪ್ರಕಾರ, ಜೋಹೆಬ್ ಖಾನ್ ಓರ್ವ ಅಪ್ರಾಪ್ತ ಆರೋಪಿಗೆ ಮಾನವ ದೇಹದ ಅಂಗಗಳನ್ನು ಮಾರಾಟ ಮಾಡುವ ಬಗ್ಗೆ ಮಾಹಿತಿ ನೀಡಿದ್ದ. ದೇಹದ ನಿರ್ದಿಷ್ಟ ಖಾಸಗಿ ಅಂಗವನ್ನು ಮಾರಾಟ ಮಾಡಿದರೆ ಹೆಚ್ಚಿನ ಹಣ ಸಿಗಬಹುದು ಎಂದು ಹೇಳಿ, ಅದಕ್ಕೆ ಸಂಬಂಧಿಸಿದ ವೀಡಿಯೊವೊಂದನ್ನೂ ತೋರಿಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ನಂತರ ಅಪ್ರಾಪ್ತ ಆರೋಪಿ ಮತ್ತಿತರರೊಂದಿಗೆ ಸೇರಿ ಬಾಲಕನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆಯ ಬಳಿಕ ಜೋಹೆಬ್ನನ್ನು ಸಂಪರ್ಕಿಸಿದ ಆರೋಪಿಗಳು ದೇಹದಿಂದ ಅಂಗವನ್ನು ಹೇಗೆ ತೆಗೆಯಬೇಕು ಎಂಬುದರ ಕುರಿತು ಆತನಿಂದ ಮಾರ್ಗದರ್ಶನ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ದೇಹದ ಅಂಗವನ್ನು ಕೆಲವು ದಿನಗಳ ಕಾಲ ತಮ್ಮ ಬಳಿ ಇಟ್ಟುಕೊಂಡಿದ್ದರು. ಆದರೆ ಅದನ್ನು ಮಾರಾಟ ಮಾಡಲು ಸೂಕ್ತ ಮಾರ್ಗ ಸಿಗದ ಹಿನ್ನೆಲೆಯಲ್ಲಿ ಕೊನೆಗೆ ಅದನ್ನು ವಿಲೇವಾರಿ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಡಿಸಿಪಿ ಆಯುಷ್ ಗುಪ್ತಾ ಅವರ ಪ್ರಕಾರ, ಪ್ರಕರಣದಲ್ಲಿ ಇದುವರೆಗೆ ಐವರು ಆರೋಪಿಗಳ ಪಾತ್ರ ಬೆಳಕಿಗೆ ಬಂದಿದೆ. ಇವರಲ್ಲಿ ನಾಲ್ವರು ನೇರವಾಗಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಐದನೇ ಆರೋಪಿ ಅವರಿಗೆ ಮಾರ್ಗದರ್ಶನ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮಾನವ ದೇಹದ ಅಂಗ ಮಾರಾಟದ ಸಂಚಿನ ಹಿಂದೆ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.





