ಬೆಂಗಳೂರು: ಟ್ರೆಕ್ಕಿಂಗ್ಗೆಂದು ಶಿವಗಂಗೆ ಬೆಟ್ಟಕ್ಕೆ ತೆರಳಿ ಆಗಸ್ಟ್ 7ರಿಂದ ನಾಪತ್ತೆಯಾಗಿದ್ದ ಅದ್ವೈತ್ ಉಪಾಧ್ಯಾಯ ಅವರ ಮೃತದೇಹ ಕೊನೆಗೂ ಪತ್ತೆಯಾಗಿದೆ. ಶಿವಗಂಗೆ ಬೆಟ್ಟದ ತುತ್ತತುದಿಯಲ್ಲಿರುವ ಅತ್ಯಂತ ಅಪಾಯಕಾರಿ ಪ್ರದೇಶವಾದ ಶಾಂತಲಾ ಡ್ರಾಪ್ನಲ್ಲಿ ಮೃತದೇಹ ಪತ್ತೆಯಾಗಿದ್ದು, ಹಲವು ದಿನಗಳಿಂದ ನಡೆಯುತ್ತಿದ್ದ ಶೋಧ ಕಾರ್ಯಕ್ಕೆ ಅಂತ್ಯ ಕಂಡಿದೆ.
ಅದ್ವೈತ್ ಉಪಾಧ್ಯಾಯ ಅವರು ಆಗಸ್ಟ್ 7ರಂದು ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ಗೆ ತೆರಳಿದ್ದರು. ಬೆಟ್ಟ ಹತ್ತುವ ಸಂದರ್ಭದಲ್ಲಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಾಪ್ತಿ ಚೌಹಾಣ್ ಅವರಿಗೆ ಫೋಟೋವೊಂದನ್ನು ಕಳುಹಿಸಿದ್ದರು ಎನ್ನಲಾಗಿದೆ. ಇದಾದ ಬಳಿಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿದ್ದು, ಬಳಿಕ ವ್ಯಾಪಕ ಶೋಧ ಕಾರ್ಯ ಆರಂಭಿಸಲಾಗಿತ್ತು.
ಅದ್ವೈತ್ ಪತ್ತೆಗಾಗಿ ಪೊಲೀಸ್ ಇಲಾಖೆ, ಎಸ್ಡಿಆರ್ಎಫ್, ಎನ್ಡಿಆರ್ಎಫ್, ಅರಣ್ಯ ಇಲಾಖೆ ಸೇರಿದಂತೆ ವಿವಿಧ ತಂಡಗಳ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅನುಭವಿ ಚಾರಣಿಗರ ನೆರವಿನೊಂದಿಗೆ ಬೆಟ್ಟದ ತುದಿ, ಕಂದಕಗಳು ಹಾಗೂ ತಲುಪಲು ಕಷ್ಟವಾಗುವ ಪ್ರದೇಶಗಳಲ್ಲಿ ಶೋಧ ನಡೆಸಲಾಗಿತ್ತು. ಡ್ರೋನ್ ಕ್ಯಾಮೆರಾಗಳ ಮೂಲಕವೂ ಆಳವಾದ ಕಂದಕಗಳು, ಕಡಿದಾದ ಬಂಡೆಗಳು ಹಾಗೂ ಮರಗಿಡಗಳಿಂದ ಆವೃತವಾಗಿರುವ ಪ್ರದೇಶಗಳನ್ನು ಪರಿಶೀಲಿಸಲಾಗಿತ್ತು.
ಈ ನಡುವೆ, ಬೆಟ್ಟದ ತುತ್ತತುದಿಯಲ್ಲಿ ಇತರ ಚಾರಣಿಗರು ತೆಗೆದಿದ್ದ ಫೋಟೋಗಳಲ್ಲಿ ಅದ್ವೈತ್ ಕಾಣಿಸಿಕೊಂಡಿರುವುದು ತನಿಖಾಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಸುಳಿವಿನ ಆಧಾರದ ಮೇಲೆ ಪೊಲೀಸರು ಶಾಂತಲಾ ಡ್ರಾಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಕೊನೆಗೆ ಶಾಂತಲಾ ಡ್ರಾಪ್ನ ದುರ್ಗಮ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಶಾಂತಲಾ ಡ್ರಾಪ್ ಶಿವಗಂಗೆ ಬೆಟ್ಟದ ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಒಂದಾಗಿದೆ. ಆಳವಾದ ಕಂದಕಗಳು, ಕಡಿದಾದ ಬಂಡೆಗಳು ಹಾಗೂ ದಟ್ಟವಾದ ಮರಗಿಡಗಳಿಂದ ಕೂಡಿರುವ ಕಾರಣ ಇಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುವುದು ಸವಾಲಿನ ಕೆಲಸವಾಗಿದೆ. ಮೃತದೇಹವನ್ನು ಹೊರತೆಗೆಯಲು ಪೊಲೀಸರು ಹಾಗೂ ರಕ್ಷಣಾ ತಂಡಗಳು ಹರಸಾಹಸ ಪಟ್ಟಿದ್ದಾರೆ.
ಇದೀಗ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ತನಿಖೆಯ ಭಾಗವಾಗಿ ಅದ್ವೈತ್ ಅವರ ನಿವಾಸವನ್ನು ಪೊಲೀಸರು ಪರಿಶೀಲಿಸಿದ್ದು, ಅವರ ಲ್ಯಾಪ್ಟಾಪ್ ಕೂಡ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಲ್ಯಾಪ್ಟಾಪ್ನಲ್ಲಿದ್ದ ಕೆಲವು ಆನ್ಲೈನ್ ಹುಡುಕಾಟಗಳು ತನಿಖಾಧಿಕಾರಿಗಳ ಗಮನ ಸೆಳೆದಿವೆ. ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ಪ್ರದೇಶಕ್ಕೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ಅವರು ಹುಡುಕಿದ್ದರೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಅದ್ವೈತ್ ನಾಪತ್ತೆಯಾಗುವ ಕೆಲ ದಿನಗಳ ಹಿಂದೆಯೇ ಶಿವಗಂಗೆಗೆ ಭೇಟಿ ನೀಡಿ ಶಾಂತಲಾ ಡ್ರಾಪ್ ಸುತ್ತಮುತ್ತ ಓಡಾಡಿದ್ದರು ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ ಎನ್ನಲಾಗಿದೆ. ಹೀಗಾಗಿ ಅವರ ನಾಪತ್ತೆ ಆಕಸ್ಮಿಕವೇ, ಪೂರ್ವನಿಯೋಜಿತವೇ ಅಥವಾ ಬೇರೆ ಯಾವುದಾದರೂ ಕಾರಣದಿಂದ ಸಂಭವಿಸಿದೆಯೇ ಎಂಬ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





