ನವದೆಹಲಿ, (ಜುಲೈ 31): ಆಂಧ್ರಪ್ರದೇಶದ ಉತ್ತರ ಭಾಗದ ಅಭಿವೃದ್ಧಿಗೆ ಹೊಸ ಮೈಲಿಗಲ್ಲಾಗಲಿರುವ ಅಲ್ಲುರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಆಗಸ್ಟ್ 1ರಂದು ಉದ್ಘಾಟಿಸಲಿದ್ದಾರೆ. ವಿಜಯನಗರ ಜಿಲ್ಲೆಯ ಭೋಗಾಪುರಂನಲ್ಲಿ ಸುಮಾರು 5,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಅತ್ಯಾಧುನಿಕ ವಿಮಾನ ನಿಲ್ದಾಣವು ಉತ್ತರ ಆಂಧ್ರದ ಆರ್ಥಿಕ, ಕೈಗಾರಿಕಾ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೊಸ ಚೈತನ್ಯ ನೀಡುವ ನಿರೀಕ್ಷೆಯಿದೆ.
ಪ್ರಧಾನಿ ಮೋದಿ ಅವರು ಶನಿವಾರ ಬೆಳಗ್ಗೆ 10.45ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಭೋಗಾಪುರಂಗೆ ಆಗಮಿಸಲಿದ್ದು, ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಹಾಗೂ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಸ್ವಾಗತಿಸಲಿದ್ದಾರೆ. ಬಳಿಕ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿ, ಅದರ ವಿವಿಧ ಸೌಲಭ್ಯಗಳನ್ನು ವೀಕ್ಷಿಸಲಿದ್ದಾರೆ.
ಇದಾದ ನಂತರ ಪ್ರಧಾನಿ ಮೋದಿ ತೆರೆದ ವಾಹನದಲ್ಲಿ ಸಾರ್ವಜನಿಕ ಸಭೆಯ ಸ್ಥಳಕ್ಕೆ ತೆರಳಲಿದ್ದಾರೆ. ಈ ವೇಳೆ 13,500ಕ್ಕೂ ಹೆಚ್ಚು ಗಿರಿಜನ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸಾಂಪ್ರದಾಯಿಕ ‘ಧಿಂಸಾ’ ನೃತ್ಯದ ಮೂಲಕ ಪ್ರಧಾನಿಯನ್ನು ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ. ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ.
ವಿಮಾನ ನಿಲ್ದಾಣದ ವಿಶೇಷತೆಗಳು
ಭೋಗಾಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೊದಲ ಹಂತದಲ್ಲಿ ವರ್ಷಕ್ಕೆ 60 ಲಕ್ಷ ಪ್ರಯಾಣಿಕರ ಸಂಚಾರ ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಮುಂದಿನ ಹಂತಗಳಲ್ಲಿ ಇದರ ಸಾಮರ್ಥ್ಯವನ್ನು ವಾರ್ಷಿಕ 4 ಕೋಟಿ ಪ್ರಯಾಣಿಕರಿಗೆ ವಿಸ್ತರಿಸುವ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ GMR ವಿಶಾಖಪಟ್ಟಣಂ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಈ ಯೋಜನೆಯನ್ನು ಅಭಿವೃದ್ಧಿಪಡಿಸಿದೆ. ಒಟ್ಟು 2,703.26 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಯೋಜನೆಯಲ್ಲಿ 2,203 ಎಕರೆಯಲ್ಲಿ ವಿಮಾನ ನಿಲ್ದಾಣ, 500 ಎಕರೆಯಲ್ಲಿ ಏವಿಯೇಷನ್ ಹಬ್ ಹಾಗೂ 136 ಎಕರೆಯಲ್ಲಿ ಏವಿಯೇಷನ್ ಯುನಿವರ್ಸಿಟಿ ಮತ್ತು ಎಡುಸಿಟಿ ಅಭಿವೃದ್ಧಿಪಡಿಸಲಾಗುತ್ತಿದೆ.
ವಿಮಾನ ನಿಲ್ದಾಣದ ವಿನ್ಯಾಸವು ಬಂಗಾಳ ಕೊಲ್ಲಿ ಮತ್ತು ಉತ್ತರ ಆಂಧ್ರದ ಕಡಲ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ‘ಹಾರುವ ಮೀನಿನ’ ಆಕಾರದಿಂದ ಪ್ರೇರಿತವಾಗಿದೆ. ಟರ್ಮಿನಲ್ ಮೇಲ್ಛಾವಣಿಯಲ್ಲಿ ಸಾಂಪ್ರದಾಯಿಕ ರಂಗೋಲಿ ವಿನ್ಯಾಸವನ್ನು ಅಳವಡಿಸಲಾಗಿದ್ದು, ಆಧುನಿಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಮನ್ವಯವನ್ನು ಕಾಣಬಹುದು.
ಪರಿಸರ ಸ್ನೇಹಿ ತಂತ್ರಜ್ಞಾನಕ್ಕೂ ಇಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ನೀರಿನ ಅಗತ್ಯದ ಸುಮಾರು 30% ಮರುಬಳಕೆಯ ನೀರಿನಿಂದಲೇ ಪೂರೈಸಲಾಗುತ್ತಿದ್ದು, ಈ ವಿಮಾನ ನಿಲ್ದಾಣವು LEED Platinum ಪರಿಸರ ಪ್ರಮಾಣೀಕರಣಕ್ಕೆ ತಕ್ಕ ಗುಣಮಟ್ಟವನ್ನು ಹೊಂದಿದೆ.
ಈ ಯೋಜನೆಗೆ ಭೂಸ್ವಾಧೀನ, ರಸ್ತೆ, ನೀರು ಹಾಗೂ ವಿದ್ಯುತ್ ಮೂಲಸೌಕರ್ಯಕ್ಕಾಗಿ ಆಂಧ್ರಪ್ರದೇಶ ಸರ್ಕಾರ ₹1,583 ಕೋಟಿ ಹೂಡಿಕೆ ಮಾಡಿದೆ. ಈ ವಿಮಾನ ನಿಲ್ದಾಣ ಕಾರ್ಯಾರಂಭವಾದ ಬಳಿಕ ಅರಕು, ಲಂಬಸಿಂಗಿ, ವಿಶಾಖಪಟ್ಟಣಂ, ವಿಜಯನಗರ ಹಾಗೂ ಶ್ರೀಕಾಕುಳಂ ಸೇರಿದಂತೆ ಉತ್ತರ ಆಂಧ್ರ ಪ್ರದೇಶದ ಪ್ರವಾಸೋದ್ಯಮ, ಐಟಿ, ಔಷಧ, ಉತ್ಪಾದನೆ ಮತ್ತು ರಫ್ತು ಕ್ಷೇತ್ರಗಳಿಗೆ ಹೊಸ ಉತ್ತೇಜನ ಸಿಗಲಿದೆ.





