ರಾಜಸ್ಥಾನ (ಜುಲೈ 5): ದೇಶದಲ್ಲಿ ದಿನೇ ದಿನೇ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳ ಹೆಚ್ಚಾಗುತ್ತಿದೆ. ಅಪ್ರಾಪ್ತರು, ಚಿಕ್ಕಮಕ್ಕಳನ್ನೂ ಕೂಡಾ ಕಾಮುಕರು ಬಿಡುತ್ತಿಲ್ಲ ಎನ್ನವಷ್ಟರ ಮಟ್ಟಿಗೆ ಅತ್ಯಾಚಾರಗಳು ನಡೆಯುತ್ತಿದೆ. ಇಂತಹ ಕಾಮುಕರ ಕಠೋರ ಮನಸ್ಥಿತಿಯಿಂದ ಇಡೀ ದೇಶವೇ ತಲೆ ತಗ್ಗಿಸುವ ಹಾಗಾಗಿದೆ. ಹೆಣ್ಣು ಮಕ್ಕಳು ಹೊರಗಡೆ ಹೋದರೆ ಬರುತ್ತಾರೋ ಇಲ್ಲವೋ ಎಂದು ಹೆತ್ತವರು ಚಿಂತಿಸುವ ಮಟ್ಟಿಗೆ ಕಾಮುಕರ ಅಟ್ಟಹಾಸ ಮೀರಿದೆ. ಇಂತಹ ಕೃತ್ಯಕ್ಕೆ ಇದೀಗ ಮತ್ತೊಮ್ಮೆ ದೇಶವೇ ತಲೆತಗ್ಗಿಸುವಂತಾಗಿದೆ.
ರಾಜಸ್ಥಾನದ ಶ್ರೀಗಂಗಾನಗರದಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಜೂನ್ 18ರಂದು ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿಯನ್ನು ರಿಕ್ಷಾ ಚಾಲಕನೊಬ್ಬ ಅಪಹರಿಸಿ, ನಗರದ ಹೋಟೆಲ್ ಮಾಲೀಕರಿಗೆ ನೇರವಾಗಿ ಮಾರಾಟ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ತನಿಖೆಯಲ್ಲಿ ಹೊರಬಂದ ಮಾಹಿತಿಯ ಪ್ರಕಾರ, ಬಾಲಕಿಯನ್ನು ಹಲವು ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು, ವಿವಿಧ ಹೋಟೆಲ್ಗಳಿಗೆ ಕರೆದೊಯ್ದು ಅಮಾನುಷ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಪ್ರಾಥಮಿಕ ತನಿಖೆಯ ಪ್ರಕಾರ, ಹೋಟೆಲ್ ಮಾಲೀಕರು ಹಾಗೂ ಮ್ಯಾನೇಜರ್ಗಳು ವಾಟ್ಸಾಪ್ ಗುಂಪುಗಳ ಮೂಲಕ ಗ್ರಾಹಕರನ್ನು ಸಂಪರ್ಕಿಸಿ, ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಸುಮಾರು ಐದು ದಿನಗಳ ಕಾಲ ಬಾಲಕಿಯನ್ನು ವಿವಿಧ ಸ್ಥಳಗಳಿಗೆ ಸಾಗಿಸಿ, 30ಕ್ಕೂ ಹೆಚ್ಚು ಮಂದಿ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಹೊರಬಿದ್ದಿದೆ. ಬಾಲಕಿ ಕಿರುಚಾಡದಂತೆ ಹಾಗೂ ಪ್ರತಿರೋಧ ತಡೆಯಲು ಮದ್ಯ ಮತ್ತು ಮಾದಕ ವಸ್ತುಗಳನ್ನು ಬಲವಂತವಾಗಿ ನೀಡಲಾಗಿತ್ತು ಎಂಬ ಮಾಹಿತಿ ಕೂಡ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜೂನ್ 23ರಂದು ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 32 ಮಂದಿಯನ್ನು ಆರೋಪಿಗಳಾಗಿ ಗುರುತಿಸಲಾಗಿದ್ದು, ಹೋಟೆಲ್ ಮಾಲೀಕರು, ಮ್ಯಾನೇಜರ್ಗಳು ಸೇರಿ ಇದುವರೆಗೆ 14 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ಸಾಮೂಹಿಕ ಅತ್ಯಾಚಾರ, ಮಾನವ ಕಳ್ಳಸಾಗಣೆ ಹಾಗೂ ಪೋಕ್ಸೋ ಕಾಯ್ದೆಯಡಿ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ.
ಈ ಅಮಾನವೀಯ ಪ್ರಕರಣ ಬಹಿರಂಗವಾದ ಬೆನ್ನಲ್ಲೇ ರಾಜಸ್ಥಾನ ಸರ್ಕಾರ ಮತ್ತು ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಅಪರಾಧಕ್ಕೆ ಆಶ್ರಯ ನೀಡಿದ್ದರೆಂದು ಆರೋಪಿಸಲಾದ ಶ್ರೀಗಂಗಾನಗರದ ಡ್ರೀಮ್ ಹೋಟೆಲ್, ಜಾಯ್ ಇನ್ ಮತ್ತು ಸಫೈರ್ ಇನ್ ಹೋಟೆಲ್ ಕಟ್ಟಡಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಿಗೆ ತಾಣವಾಗುವ ಯಾವುದೇ ಸಂಸ್ಥೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಲಾಗುವುದು ಎಂದು ರಾಜಸ್ಥಾನ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಅಪ್ರಾಪ್ತೆಯ ಮೇಲಿನ ಈ ದೌರ್ಜನ್ಯ ಪ್ರಕರಣ ಕೇವಲ ಒಂದು ಅಪರಾಧ ಪ್ರಕರಣವಲ್ಲ; ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಕುರಿತು ದೇಶದ ಮುಂದೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ. ಮಾನವ ಕಳ್ಳಸಾಗಣೆ, ಲೈಂಗಿಕ ದೌರ್ಜನ್ಯ ಮತ್ತು ಸಂಘಟಿತ ಅಪರಾಧ ಜಾಲಗಳ ವಿರುದ್ಧ ಇನ್ನಷ್ಟು ಕಠಿಣ ಕ್ರಮ, ವೇಗದ ತನಿಖೆ ಮತ್ತು ತ್ವರಿತ ನ್ಯಾಯ ಒದಗಿಸುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
ಇಂತಹ ಅಮಾನುಷ ಕೃತ್ಯದಲ್ಲಿ ಭಾಗಿಯಾಗುವವರ ವಿರುದ್ದ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಈ ರೀತಿಯ ಕಾಮಕರಿಗೆ ಕಾನೂನು ಮೂಲಕ ಶಿಕ್ಷೆ ವಿಧಿಸಿ ಮುಂದೆದೂ ಇಂತಹ ಕೃತ್ಯ ನಡೆಯದಂತೆ ಸರ್ಕಾರ ಕಾನೂನು ರೂಪಿಸಬೇಕಾಗಿದೆ. ಹೆಣ್ಣು ಮಕ್ಕಳು ನಿರ್ಭಿತಿಯಿಂದ ಸಮಾಜದಲ್ಲಿ ಇರುವಂತೆ ಕಾನೂನು ಜಾರಿಗೆ ಬರಬೇಕಿದೆ.





