ಬೆಂಗಳೂರು (ಜೂನ್ 30): ರಾಜ್ಯದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳು ಮತ್ತೊಮ್ಮೆ ಬಸ್ ಟಿಕೆಟ್ ದರ ಏರಿಕೆಗೆ ಸರ್ಕಾರದ ಅನುಮತಿ ಕೋರಿವೆ. ಡೀಸೆಲ್ ಬೆಲೆ ಏರಿಕೆ, ನೌಕರರ ವೇತನ ಪರಿಷ್ಕರಣೆ ಹಾಗೂ ಶಕ್ತಿ ಯೋಜನೆಯ ಬಾಕಿ ಅನುದಾನ ಸೇರಿದಂತೆ ಹಲವು ಆರ್ಥಿಕ ಒತ್ತಡಗಳಿಂದ ನಿಗಮಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿವೆ.
- 4 ಸಾರಿಗೆ ನಿಗಮಗಳಿಂದ ಬಸ್ ದರ ಏರಿಕೆ ಪ್ರಸ್ತಾವನೆ.
- ಡೀಸೆಲ್, ಬೆಲೆ ಏರಿಕೆ, ವೇತನ ಹೆಚ್ಚಳ ಹಾಗೂ ಶಕ್ತಿ ಯೋಜನೆಯ ಬಾಕಿಯಿಂದ ಆರ್ಥಿಕ ಸಂಕಷ್ಟ.
- ಕೆಎಸ್ಆರ್ಟಿಸಿ ಶೇ.33 ಮತ್ತು ಬಿಎಂಟಿಸಿ ಶೇ.44 ದರ ಏರಿಕೆಗೆ ಅನುಮತಿ ಕೋರಿವೆ.
- ಸಚಿವ ಬೈರತಿ ಸುರೇಶ್ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕ್ಯಾಬಿನೆಟ್ನಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ.
- ಪ್ರಸ್ತಾವನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತ.
ಸಾರಿಗೆ ನಿಗಮಗಳ ಮಾಹಿತಿಯ ಪ್ರಕಾರ, ಕಳೆದ ಆರು ತಿಂಗಳಲ್ಲಿ ಡೀಸೆಲ್ ಬೆಲೆ ನಾಲ್ಕು ಬಾರಿ ಏರಿಕೆಯಾಗಿದ್ದು, ಇದರಿಂದ ಪ್ರತಿ ತಿಂಗಳು ಸುಮಾರು 40 ಕೋಟಿ ರೂಪಾಯಿ ಹೆಚ್ಚುವರಿ ವೆಚ್ಚ ಉಂಟಾಗುತ್ತಿದೆ. ಇದರ ಜೊತೆಗೆ ಜುಲೈ ತಿಂಗಳಿಂದ ನೌಕರರಿಗೆ ಶೇಕಡಾ 12.5ರಷ್ಟು ವೇತನ ಹೆಚ್ಚಳ ಜಾರಿಗೊಳಿಸಬೇಕಿದ್ದು, ಸುಮಾರು 1,271 ಕೋಟಿ ರೂಪಾಯಿ ವೇತನ ಹಿಂಬಾಕಿಯನ್ನೂ ಪಾವತಿಸಬೇಕಾಗಿದೆ.
ಇನ್ನೊಂದೆಡೆ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಸರ್ಕಾರದಿಂದ ಸುಮಾರು 5,000 ಕೋಟಿ ರೂಪಾಯಿ ಪರಿಹಾರ ಮೊತ್ತ ಇನ್ನೂ ಬಿಡುಗಡೆಯಾಗಬೇಕಿದೆ ಎಂದು ನಿಗಮಗಳು ತಿಳಿಸಿವೆ. ಈ ಆರ್ಥಿಕ ಒತ್ತಡಗಳಿಂದ ಸಾರಿಗೆ ಸೇವೆಗಳನ್ನು ಸುಗಮವಾಗಿ ನಿರ್ವಹಿಸುವುದು ಸವಾಲಾಗಿರುವ ಕಾರಣ ಬಸ್ ಟಿಕೆಟ್ ದರ ಏರಿಕೆ ಅಗತ್ಯವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತಾವನೆಯಂತೆ, ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರವನ್ನು ಶೇಕಡಾ 33ರಷ್ಟು ಹಾಗೂ ಬಿಎಂಟಿಸಿ ಶೇಕಡಾ 44ರಷ್ಟು ಹೆಚ್ಚಿಸಲು ಅನುಮತಿ ಕೋರಿದೆ. ಈ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಮುಖ್ಯಮಂತ್ರಿ ಡಿಕೆ ಶಿವಕಮಾರ್ ಅವರೊಂದಿಗೆ ಚರ್ಚೆ ನಡೆಸಲಿದ್ದು, ನಿಗಮಗಳ ಆರ್ಥಿಕ ಸ್ಥಿತಿ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರಯಾಣಿಕರ ಮೇಲೆ ಹೆಚ್ಚುವರಿ ಹೊರೆ ಬೀಳದಂತೆ ಹಾಗೂ ಸಾರಿಗೆ ನಿಗಮಗಳ ಆರ್ಥಿಕ ಸ್ಥಿರತೆಯನ್ನು ಕಾಪಾಡುವ ರೀತಿಯಲ್ಲಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಆದರೆ ಬಸ್ ದರ ಏರಿಕೆ ಕುರಿತ ಪ್ರಸ್ತಾವನೆ ಈಗಾಗಲೇ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ದೈನಂದಿನ ಪ್ರಯಾಣಿಕರು ಹಾಗೂ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರತ್ತ ಇದೀಗ ಸಾರ್ವಜನಿಕರ ಗಮನ ನೆಟ್ಟಿದೆ.





