ಅಯೋಧ್ಯೆಯ ರಾಮಮಂದಿರ ದೇಣಿಗೆ ಅಕ್ರಮ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ಮತ್ತಷ್ಟು ಆಘಾತಕಾರಿ ಮಾಹಿತಿಗಳನ್ನು ಬಯಲು ಮಾಡಿವೆ. ರಾಮನ ಹೆಸರಿನಲ್ಲಿ ಸಂಗ್ರಹವಾದ ದೇಣಿಗೆ ಹಣವನ್ನು ಅಕ್ರಮವಾಗಿ ಬಳಸಿಕೊಂಡು ಆರೋಪಿಗಳು ಬಿಂದಾಸ್ ಜೀವನ (Lavish Life) ನಡೆಸಿದ್ದಾರೆ ಎಂದು ವಿಶೇಷ ತನಿಖಾ ತಂಡ (Special Investigation Team – SIT) ತನಿಖೆಯಲ್ಲಿ ಬಯಲಾಗಿದೆ.
ತನಿಖೆಯ ಪ್ರಕಾರ, ಆರೋಪಿಗಳಲ್ಲಿ ಒಬ್ಬನಾಗಿರುವ ಲವ್ಕುಶ್ ಎಂಬ ವ್ಯಕ್ತಿಯ ಹಿನ್ನೆಲೆ ಹಾಗೂ ಆರ್ಥಿಕ ಏರಿಕೆ ಕುರಿತು ಅಧಿಕಾರಿಗಳು ಗಮನ ಹರಿಸುತ್ತಿದ್ದಾರೆ. ಕೆಲವೇ ವರ್ಷಗಳ ಹಿಂದೆ 18 ಸಾವಿರ ರೂಪಾಯಿ ಸಂಬಳಕ್ಕೆ ಹುಂಡಿ ಎಣಿಕೆ ನೌಕರನಾಗಿ ಕೆಲಸಕ್ಕೆ ಸೇರಿದ್ದ ಲವ್ಕುಶ್, ನಂತರ ಕಾರ್ ಮೆಕ್ಯಾನಿಕ್ ಆಗಿಯೂ ಕೆಲಸ ಮಾಡಿದ್ದ ಎಂಬ ಮಾಹಿತಿ ಹೊರಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವನ ಆಸ್ತಿ ಮತ್ತು ಆರ್ಥಿಕ ಸ್ಥಿತಿ ವೇಗವಾಗಿ ಏರಿರುವುದು ತನಿಖಾಧಿಕಾರಿಗಳಿಗೆ ಅನುಮಾನಕ್ಕೆ ಕಾರಣವಾಗಿದೆ.
SIT ಮೂಲಗಳ ಪ್ರಕಾರ, ಲವ್ಕುಶ್ ಹಾಗೂ ಇತರ ಆರೋಪಿಗಳ ಮೇಲೆ ಹಣಕಾಸು ವ್ಯವಹಾರಗಳ ಕುರಿತು ಸಂಪೂರ್ಣ ಪರಿಶೀಲನೆ ನಡೆಯುತ್ತಿದೆ. ಅವರ ಬ್ಯಾಂಕ್ ಖಾತೆಗಳು, ಹೂಡಿಕೆಗಳು ಹಾಗೂ ಆಸ್ತಿ ಖರೀದಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಅಯೋಧ್ಯೆಯ ಶಹಾದತ್ ಗುಂಜ್ ಪ್ರದೇಶದಲ್ಲಿ ಲವ್ಕುಶ್ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕೂಡ ತನಿಖೆಯಲ್ಲಿ ಬಯಲಾಗಿದೆ. ನಿರ್ಮಾಣ ಹಂತದ ಎರಡು ಕಟ್ಟಡಗಳ ಮೇಲೆ ಪೊಲೀಸರು ರೇಡ್ ನಡೆಸಿದ್ದು, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂರು-ನಾಲ್ಕು ತಿಂಗಳ ಅಂತರದಲ್ಲೇ ವೇಗವಾಗಿ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುತ್ತಿರುವುದು ಸಹ ಅಧಿಕಾರಿಗಳಿಗೆ ಅನುಮಾನ ಮೂಡಿಸಿದೆ. ಈ ಹಣದ ಮೂಲ ಯಾವುದು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ದೊರೆತಿಲ್ಲ. SIT ಈ ಹಿನ್ನೆಲೆ ಹಣದ ವ್ಯವಹಾರ ಮತ್ತು ಹೂಡಿಕೆ ಮಾರ್ಗಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ.
ಇನ್ನು ಮತ್ತೊಬ್ಬ ಆರೋಪಿ ಅನುಕಲ್ಪ್ ಜೊತೆ ಲವ್ಕುಶ್ ಸಂಬಂಧ ಹೊಂದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಅನುಕಲ್ಪ್ ಕಳೆದ ಏಪ್ರಿಲ್ನಲ್ಲಿ ಅದ್ಧೂರಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದ್ದನು. ಈ ಕಾರ್ಯಕ್ರಮದಲ್ಲಿ ಕಥಾವಾಚನ, ಧಾರ್ಮಿಕ ಆಚರಣೆಗಳು ನಡೆದಿದ್ದು, ಹಲವು ಪ್ರಮುಖರು ಭಾಗವಹಿಸಿದ್ದರೆಂದು ತಿಳಿದುಬಂದಿದೆ. ಚಂಪತ್ ರಾಯ್ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಅದೇ ಅವಧಿಯಲ್ಲಿ ಅನುಕಲ್ಪ್ ಅಯೋಧ್ಯೆಯಲ್ಲಿ ಸುಮಾರು 65 ಲಕ್ಷ ರೂಪಾಯಿ ಮೌಲ್ಯದ ಮನೆ ಖರೀದಿಸಿದ್ದಾನೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಜೊತೆಗೆ ಗ್ರಾಮದ ಹೊರವಲಯದಲ್ಲಿ ಫಾರ್ಮ್ಹೌಸ್ ಹೊಂದಿರುವುದೂ ದಾಖಲಾಗಿದೆ. ಇವೆಲ್ಲವುಗಳ ಹಿನ್ನೆಲೆ ಆರೋಪಿಗಳ ಆರ್ಥಿಕ ಸ್ಥಿತಿಯ ಏರಿಕೆ ಅತೀ ವೇಗವಾಗಿ ನಡೆದಿದೆ ಎಂಬುದು ತನಿಖಾಧಿಕಾರಿಗಳ ಅನುಮಾನವಾಗಿದೆ.
SIT ಈಗ ಎಲ್ಲಾ ಆರೋಪಿಗಳ ಆಸ್ತಿ, ಆದಾಯ ಮೂಲ ಹಾಗೂ ಹಣದ ಹರಿವು ಕುರಿತು ಸಮಗ್ರ ವರದಿ ತಯಾರಿಸುತ್ತಿದೆ. ಬ್ಯಾಂಕ್ ಲಾಕರ್ಗಳು, ಡಿಜಿಟಲ್ ಟ್ರಾನ್ಸಾಕ್ಷನ್ಗಳು ಹಾಗೂ ಹೂಡಿಕೆ ದಾಖಲೆಗಳ ಮೇಲೂ ನಿಗಾ ಇಡಲಾಗಿದೆ. ತನಿಖೆಯ ಮುಂದಿನ ಹಂತದಲ್ಲಿ ಇನ್ನಷ್ಟು ದೊಡ್ಡ ಹೆಸರುಗಳು ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ.





