ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ರಾಜಕೀಯ ಪುನರಾಗಮನದ ಬಗ್ಗೆ ನಿರ್ಣಾಯಕ ಘೋಷಣೆ ಮಾಡಿದ್ದಾರೆ. ಪ್ರಾಣಭಯದಿಂದ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿರುವ ಅವರು, ಇದೇ ವರ್ಷ ಬಾಂಗ್ಲಾದೇಶಕ್ಕೆ ಮರಳಲಿದ್ದು, ಅಲ್ಲಿನ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಮತ್ತು ತಮ್ಮ ಅವಾಮಿ ಲೀಗ್ ಪಕ್ಷದ ಕಾರ್ಯಕರ್ತರಲ್ಲಿ ಧೈರ್ಯ ತುಂಬಲು ಸಿದ್ಧರಾಗಿದ್ದಾರೆ ಎಂದು ಘೋಷಿಸಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಶೇಖ್ ಹಸೀನಾ ಅವರು ತಮ್ಮ ಮುಂದಿನ ರಾಜಕೀಯ ಯೋಜನೆಯನ್ನು ಬಿಚ್ಚಿಟ್ಟಿದ್ದಾರೆ. “ನಾನೇನೂ ನನ್ನ ದೇಶದಿಂದ ಶಾಶ್ವತವಾಗಿ ಓಡಿಬಂದಿಲ್ಲ. ಬಾಂಗ್ಲಾದೇಶದಲ್ಲಿ ಮತ್ತೆ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಮತ್ತು ನನ್ನ ಅವಾಮಿ ಲೀಗ್ ಪಕ್ಷದ ಲಕ್ಷಾಂತರ ಕಾರ್ಯಕರ್ತರಲ್ಲಿ ಧೈರ್ಯ ತುಂಬಲು ಇದೇ ವರ್ಷ ನಾನು ಮತ್ತೆ ಸ್ವದೇಶಕ್ಕೆ ಮರಳಲಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿದೇಶಿ ಪಿತೂರಿ ಆರೋಪ
ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದ ವಿದ್ಯಾರ್ಥಿ ದಂಗೆ ಮತ್ತು ರಕ್ತಪಾತದ ಕುರಿತು ಮಾತನಾಡಿದ ಶೇಖ್ ಹಸೀನಾ, ಆ ಘಟನೆಗಳ ಹಿಂದೆ ವಿದೇಶಿ ಶಕ್ತಿಗಳ ವ್ಯವಸ್ಥಿತ ಪಿತೂರಿ ಇತ್ತು ಎಂದು ತೀವ್ರ ಆರೋಪ ಮಾಡಿದ್ದಾರೆ. “ಬಾಂಗ್ಲಾದೇಶದಲ್ಲಿ ಶಾಂತಿ ಕದಡಲು ಮತ್ತು ಅಸ್ಥಿರತೆ ಸೃಷ್ಟಿಸಲು ಹವಣಿಸುತ್ತಿರುವ ಆ ದುಷ್ಟ ಶಕ್ತಿಗಳ ವಿರುದ್ಧ ಧೃತಿಗೆಡದೆ ಮುಖಾಮುಖಿಯಾಗಿ ಹೋರಾಡಲು ನಾನು ಈಗ ಸಂಪೂರ್ಣವಾಗಿ ಸಿದ್ಧಳಾಗಿದ್ದೇನೆ” ಎಂದು ಅವರು ಗುಡುಗಿದ್ದಾರೆ. ತಮ್ಮ ವಿರುದ್ಧ ನಡೆದ ರಾಜಕೀಯ ಕುತಂತ್ರವನ್ನು ಅವರು “ಅತ್ಯಂತ ವ್ಯವಸ್ಥಿತ” ಎಂದು ಬಣ್ಣಿಸಿದ್ದಾರೆ.
ಭಾರತಕ್ಕೆ ಭಾವುಕ ಕೃತಜ್ಞತೆ
ತಮ್ಮ ರಾಜಕೀಯ ಜೀವನದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ರಾಜತಾಂತ್ರಿಕ ಆಶ್ರಯ ನೀಡಿ ಪ್ರಾಣ ರಕ್ಷಣೆ ಮಾಡಿದ್ದಾರೆ ಎಂದು ಶೇಖ್ ಹಸೀನಾ ಅವರು ಭಾವುಕ ಕೃತಜ್ಞತೆ ಸಲ್ಲಿಸಿದ್ದಾರೆ.
“ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಬಾಂಧವ್ಯ ಇವತ್ತಿನದಲ್ಲ, ಅದು ಐತಿಹಾಸಿಕ ಮತ್ತು ರಕ್ತದ ಸಂಬಂಧ ಹೊಂದಿರುವಂತದ್ದು. 1971ರ ವಿಮೋಚನಾ ಹೋರಾಟದಿಂದ ಹಿಡಿದು ಇಂದಿನವರೆಗೂ ಭಾರತದ ಬೆಂಬಲವು ನಮ್ಮ ದೇಶಕ್ಕೆ ಅಮೂಲ್ಯವಾಗಿದೆ. ಈ ಸ್ನೇಹದ ಕೊಂಡಿಯನ್ನು ಯಾರಿಂದಲೂ ಎಂದಿಗೂ ಮುರಿಯಲು ಸಾಧ್ಯವಿಲ್ಲ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಾರೀಖ್ ರೆಹಮಾನ್ ಸರ್ಕಾರಕ್ಕೆ ಸವಾಲು
ಬಾಂಗ್ಲಾದೇಶದ ಆಡಳಿತವನ್ನು ಟೀಕಿಸಿರುವ ಹಸೀನಾ, ತಾರೀಖ್ ರೆಹಮಾನ್ ಸರ್ಕಾರವು ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. “ದೇಶದಲ್ಲಿ ದಿನೇದಿನೆ ಅರಾಜಕತೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
“ಕಾಲಹರಣ ಮಾಡದೆ ತಕ್ಷಣವೇ ದೇಶದಲ್ಲಿ ಮುಕ್ತ, ಪಾರದರ್ಶಕ ಮತ್ತು ನ್ಯಾಯಸಮ್ಮತವಾದ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಬೇಕು. ಇದು ಸರ್ಕಾರದ ಕರ್ತವ್ಯ” ಎಂದು ಅವರು ಈಗಿನ ಆಡಳಿತಕ್ಕೆ ಗಡುವು ನೀಡಿದ್ದಾರೆ. ಬಾಂಗ್ಲಾದೇಶದ ಜನರ ನೈಜ ಇಚ್ಛೆಯನ್ನು ಪ್ರತಿಬಿಂಬಿಸುವ ಸರ್ಕಾರವನ್ನು ರಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಾಜಕೀಯ ಭವಿಷ್ಯದ ಪ್ಲಾನ್
ತಾವು ಭಾರತದಲ್ಲೇ ಸುರಕ್ಷಿತವಾಗಿ ನೆಲೆಸಿರುವ ಶೇಖ್ ಹಸೀನಾ, ಇಲ್ಲಿಂದಲೇ ತಮ್ಮ ಮುಂದಿನ ರಾಜಕೀಯ ಇನಿಂಗ್ಸ್ಗೆ ಮುನ್ನುಡಿ ಬರೆದಿದ್ದಾರೆ. ತಮ್ಮ ಅವಾಮಿ ಲೀಗ್ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಸಂಪರ್ಕಿಸಿ, ಮುಂಬರುವ ರಾಜಕೀಯ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ನನ್ನ ಪಕ್ಷದ ಕಾರ್ಯಕರ್ತರು ಅಮಾಯಕವಾಗಿ ಕಿರುಕುಳಕ್ಕೊಳಗಾಗುತ್ತಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ನಾನು ಅವರ ಧ್ವನಿಯಾಗಿದ್ದೇನೆ” ಎಂದು ಅವರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸಮುದಾಯದ ಪ್ರತಿಕ್ರಿಯೆ
ಶೇಖ್ ಹಸೀನಾ ಅವರ ಈ ಘೋಷಣೆಯು ಬಾಂಗ್ಲಾದೇಶ ಮತ್ತು ಅಂತಾರಾಷ್ಟ್ರೀಯ ಸಮುದಾಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸುತ್ತಮುತ್ತಲಿನ ದೇಶಗಳು ಈ ಬೆಳವಣಿಗೆಯನ್ನು ಆತಂಕದಿಂದ ವೀಕ್ಷಿಸುತ್ತಿವೆ. ಬಾಂಗ್ಲಾದೇಶದಲ್ಲಿ ತಕ್ಷಣ ಚುನಾವಣೆ ನಡೆಸುವಂತಹ ಸನ್ನಿವೇಶವೇನಿಲ್ಲ ಎಂದು ಪ್ರಸ್ತುತ ಆಡಳಿತ ತಿಳಿಸಿದೆ.
ಬಾಂಗ್ಲಾದೇಶದ ವಿದೇಷಾಂಗ ಸಚಿವಾಲಯವು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಶೇಖ್ ಹಸೀನಾ ಅವರು ಇನ್ನು ಮುಂದೆ ಬಾಂಗ್ಲಾದೇಶದ ರಾಜಕಾರಣಿ ಅಲ್ಲ. ಅವರ ಹೇಳಿಕೆಗಳಿಗೆ ನಾವು ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲ” ಎಂದು ತಿಳಿಸಿದೆ.





