ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಸಹಕಾರ ನಗರದಲ್ಲಿ ಬೀದಿ ನಾಯಿಗಳ ಗುಂಪೊಂದು ಮೂರುವರೆ ವರ್ಷದ ಬಾಲಕಿಯ ಮೇಲೆ ಭೀಕರ ದಾಳಿ ನಡೆಸಿದ ಘಟನೆ ಭಾರೀ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಭಾನುವಾರ ನಡೆದ ಈ ಘಟನೆಯ ಬಳಿಕ ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳ ನಿಯಂತ್ರಣ ಮತ್ತು ಸಾರ್ವಜನಿಕರ ಸುರಕ್ಷತೆ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ. ಪದೇ ಪದೇ ಬೀದಿ ನಾಯಿಗಳ ದಾಳಿಯಿಂದ ಜನ ಭಯ ಭೀತರಾಗಿದ್ದಾರೆ. ರಸ್ತೆಗಿಳಿಯಲು ಜನ ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾಹಿತಿ ಪ್ರಕಾರ, ನಿರ್ಮಾಣ ಸ್ಥಳದ ಬಳಿಯ ಶೆಡ್ನಿಂದ ಬಾಲಕಿ ಹೊರಬಂದ ವೇಳೆ ಬೀದಿ ನಾಯಿಗಳ ಗುಂಪು ಆಕೆಯನ್ನು ಹಿಂಬಾಲಿಸಿ ದಾಳಿ ಮಾಡಿದೆ. ಬಾಲಕಿಯ ಕೂಗು ಕೇಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ನಾಯಿಗಳನ್ನು ಓಡಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ದಾಳಿಯಿಂದ ಬಾಲಕಿಯ ದೇಹದ ಐದು ಕಡೆ ಗಾಯಗಳಾಗಿದ್ದು, ಆಕೆಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಯಲಹಂಕ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಿ ಆಂಟಿ-ರೇಬಿಸ್ ಲಸಿಕೆ ನೀಡಲಾಗಿದೆ. ಸದ್ಯ ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ನಗರ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಅವರು ಅಧಿಕಾರಿಗಳಿಗೆ ಸಂಪೂರ್ಣ ಪರಿಶೀಲನೆ ನಡೆಸಿ ದಾಳಿ ಮಾಡಿದ ನಾಯಿಗಳನ್ನು ಪತ್ತೆಹಚ್ಚುವಂತೆ ಸೂಚಿಸಿದ್ದಾರೆ. ಪಶುವೈದ್ಯಕೀಯ ತಂಡ ನಾಯಿಗಳನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದು, ಸದ್ಯ ಅವುಗಳು ಪತ್ತೆಯಾಗಿಲ್ಲ.
ನಿಗಮದ ಅಧಿಕಾರಿಗಳ ಪ್ರಕಾರ, ಆಹಾರ ನೀಡುವವರು ಬಂದಾಗ ನಾಯಿಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಮತ್ತೆ ಶೋಧ ಕಾರ್ಯ ಮುಂದುವರಿಸಲಾಗುತ್ತಿದೆ. ಬಾಲಕಿಯ ಕುಟುಂಬಕ್ಕೆ ಚಿಕಿತ್ಸೆ ವೆಚ್ಚವನ್ನು ನಿಗಮದಿಂದ ಮರುಪಾವತಿ ಮಾಡುವ ಭರವಸೆ ನೀಡಲಾಗಿದೆ.
ಇದೇ ವೇಳೆ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಮೇಡಿ ಅಗ್ರಹಾರದಲ್ಲಿ 500 ನಾಯಿಗಳಿಗೆ ಆಶ್ರಯ ತಾಣ ನಿರ್ಮಿಸಲಾಗಿದ್ದು, ಪ್ರಾಣಿಗಳ ಜನನ ನಿಯಂತ್ರಣ ಕಾರ್ಯಕ್ರಮಕ್ಕೂ ವ್ಯವಸ್ಥೆ ಮಾಡಲಾಗಿದೆ. ಸುಮಾರು 25 ನಾಯಿಮರಿ ಕೇಂದ್ರಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಸಿದ್ಧಪಡಿಸಲಾಗಿದೆ.
ನಗರದ ಶಾಲೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿರುವ ಬೀದಿ ನಾಯಿಗಳನ್ನು ಗುರುತಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೀದಿ ನಾಯಿಗಳ ಆಶ್ರಯ
ಕೇಂದ್ರವನ್ನು ನಡೆಸಲು ಏಜೆನ್ಸಿಗಳಿಂದ ಟೆಂಡರ್ಗಳನ್ನು ಆಹ್ವಾನಿಸಲಾಗಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





