ಗುಜರಾತ್:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್ನ ಗಿರ್ ಸೋಮನಾಥ ಜಿಲ್ಲೆಯಲ್ಲಿ ಐತಿಹಾಸಿಕ ಸೋಮನಾಥ ದೇವಾಲಯದ ಅಮೃತಮಹೋತ್ಸವದಲ್ಲಿ ಭಾಗಿಯಾಗಿ, ವಿಶೇಷ ಧಾರ್ಮಿಕ ವಿಧಿವಿಧಾನಗಳು ಮತ್ತುಕುಂಭಾಭಿಷೇಕವನ್ನು ಭವ್ಯವಾಗಿ ನೆರವೇರಿಸಿದರು. 75 ವರ್ಷಗಳನ್ನು ಪೂರೈಸುತ್ತಿರುವ ಈ ದೇಗುಲದ ಪುನರ್ ಪ್ರತಿಷ್ಠಾಪನಾ ಸ್ಮರಣಾರ್ಥ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ಪ್ರಧಾನಿ ಸ್ವತಃ ಮುಂದಾಳತ್ವ ವಹಿಸಿದ್ದರು.
1.5 ಕಿ.ಮೀ ರೋಡ್ ಶೋ ಮೂಲಕ ಜನರ ಸಂಗಮ
ಭಾನುವಾರ ರಾತ್ರಿಯೇ ಜಾಮ್ನಗರಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಸೋಮನಾಥ ದೇವಾಲಯದಲ್ಲಿ ಪೂಜೆಗೂ ಮುನ್ನ ಸೋಮವಾರ ಬೆಳಿಗ್ಗೆ ಹೆಲಿಪ್ಯಾಡ್ನಿಂದ ಸುಪ್ರಸಿದ್ಧ ಸೋಮನಾಥ ದೇವಾಲಯದ ಸಮೀಪವಿರುವ ವೀರ ಹಮೀರ್ಜಿ ಸರ್ಕಲ್ ವರೆಗೆ ಸುಮಾರು 1.5 ಕಿ.ಮೀ ಮಾರ್ಗದಲ್ಲಿ ಭವ್ಯ ರೋಡ್ ಶೋ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಧ್ವಜಗಳನ್ನು ಬೀಸುತ್ತಾ, “ವಂದೇ ಮಾತರಂ”, “ಹರ ಹರ ಮಹಾದೇವ” ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರಧಾನಿಯನ್ನು ಬರಮಾಡಿಕೊಂಡರು. ಈ ಜನಸಾಗರದ ನಡುವೆ ಮೋದಿ ಅವರು ಕೈ ಬೀಸುತ್ತಾ ಅಭಿಮಾನಿಗಳಿಗೆ ಸ್ಪಂದಿಸಿದರು.
ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನೀಡುವ ಮೂಲಕ ಈ ಸಂದರ್ಭಕ್ಕೆ ಸಾಂಸ್ಕೃತಿಕ ಮೆರುಗು ನೀಡಿದರು. ಇದರೊಂದಿಗೆ ಸೋಮನಾಥ ದೇವಾಲಯದ ಆವರಣ ಸಂಪೂರ್ಣವಾಗಿ ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಲಾಗಿತ್ತು.
ದೇವಾಲಯದಲ್ಲಿ ವಿಶೇಷ ಪೂಜೆಗಳು
ಸೋಮನಾಥ ದೇವಾಲಯದಲ್ಲಿ ಪ್ರಧಾನಿ ಮೋದಿ ಅವರು ವಿಶೇಷ ಪೂಜೆ, ಅಭಿಷೇಕ ಮತ್ತು ಧ್ವಜ ಪೂಜೆ ನೆರವೇರಿಸಿದರು. ನಂತರ ಕುಂಭಾಭಿಷೇಕ ವಿಧಿವಿಧಾನದಲ್ಲಿ ಭಾಗವಹಿಸಿ ದೇವಾಲಯದ ಪವಿತ್ರತೆಯನ್ನು ಗೌರವಿಸಿದರು.
75 ವರ್ಷದ ಇತಿಹಾಸದ ಸ್ಮರಣೆ
1951ರ ಮೇ 11ರಂದು ಭಾರತದ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಪುನರ್ ಪ್ರತಿಷ್ಠಾಪಿತ ಸೋಮನಾಥ ದೇವಾಲಯವನ್ನು ಉದ್ಘಾಟಿಸಿದ್ದರು. ಆ ಐತಿಹಾಸಿಕ ಘಟನೆಯ 75ನೇ ವರ್ಷವನ್ನು ಸ್ಮರಿಸುವ ಸಲುವಾಗಿ ಈ ಅಮೃತ ಮಹೋತ್ಸವವನ್ನು ಆಯೋಜಿಸಲಾಗಿದೆ.
ಪ್ರಧಾನಿಯ ಮುಂದಿನ ಕಾರ್ಯಕ್ರಮಗಳು
ಸೋಮನಾಥದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಪ್ರಧಾನಿ ಮೋದಿ ಅವರು ಸದ್ಭಾವನಾ ಮೈದಾನದಲ್ಲಿ ಆಯೋಜಿಸಲಾದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ವಡೋದರಾದಲ್ಲಿ ಸರ್ದಾರ್ ಧಾಮ್ ವಿದ್ಯಾರ್ಥಿನಿಲಯವನ್ನು ಉದ್ಘಾಟಿಸುವ ಕಾರ್ಯಕ್ರಮವೂ ನಿಗದಿಯಾಗಿದೆ.





