ಗಂಡ-ಹೆಂಡತಿಯ ಸಂಬಂಧದಲ್ಲಿ ಸಣ್ಣಪುಟ್ಟ ವಿಷಯಗಳು ದೊಡ್ಡ ದುರಂತಕ್ಕೆ ಕಾರಣವಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದಕ್ಕೊಂದು ಭಯಾನಕ ಉದಾಹರಣೆಯಾಗಿದೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪ್ರೊದ್ದುಟೂರು ಘಟನೆ.
ಘಟನೆ ವಿವರ :
ಪ್ರೊದ್ದುಟೂರು ನಿವಾಸಿ ಕಿರಣ್ ತನ್ನ ಹೆಂಡತಿ ಪದ್ಮಜಾ ಅವರನ್ನು “ದಪ್ಪ ಆಗಿದ್ದಾಳೆ, ಸುಂದರವಾಗಿಲ್ಲ” ಎಂಬ ಕಾರಣಕ್ಕೆ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಕಿರಣ್ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು. ದಂಪತಿಗೆ ಒಬ್ಬ ಹೆಣ್ಣು ಮಗಳಿದ್ದಾಳೆ.
ಹೆಂಡತಿ ತೂಕ ಇಳಿಸಿಕೊಳ್ಳದಿದ್ದಕ್ಕೆ ಆಕೆಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಕಿರಣ್, ಹೆಂಡತಿಯನ್ನು ಕೊಲ್ಲುವುದು ಹೇಗೆ ಎಂದು ಯೂಟ್ಯೂಬ್ನಲ್ಲಿ ಸರ್ಚ್ ಮಾಡಿದ್ದಾನೆ. ಅಲ್ಲಿ ಸಿಕ್ಕ ಫೋನ್ ನಂಬರ್ಗೆ ಕರೆ ಮಾಡಿ ಕೊರಿಯರ್ ಮೂಲಕ ವಿಷ ತರಿಸಿಕೊಂಡಿದ್ದಾನೆ.
ಕ್ರೂರ ಯೋಜನೆ ಪದ್ಮಜಾ ಕುಟುಂಬಕ್ಕೆ ಅನುಮಾನ ಬಾರದಂತೆ, ತನ್ನ ಸ್ವಂತ ಊರಾದ ಪ್ರೊದ್ದುಟೂರಿಗೆ “ತಂದೆ-ತಾಯಿಯನ್ನು ನೋಡಿ ಬರೋಣ” ಎಂದು ಹೇಳಿ ಕರೆದೊಯ್ದಿದ್ದಾನೆ. ಅಲ್ಲಿ ಪ್ರೀತಿಯಿಂದ ವರ್ತಿಸುತ್ತಾ, ಪಾಲ್ಕೋವಾ ತಂದು ಅದರಲ್ಲಿ ವಿಷ ಬೆರೆಸಿ ತಿನ್ನಿಸಿದ್ದಾನೆ. ವಿಷ ತಿಂದ ಪದ್ಮಜಾ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆದರೆ ಸಾಯದಿದ್ದಕ್ಕೆ ಆಕೆಯ ಮುಖದ ಮೇಲೆ ದಿಂಬು ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಕೊಲೆಯ ನಂತರ “ಹೃದಯಾಘಾತದಿಂದ ಸತ್ತಿದ್ದಾಳೆ” ಎಂದು ಎಲ್ಲರನ್ನೂ ನಂಬಿಸುವ ಪ್ರಯತ್ನ ಮಾಡಿದ್ದಾನೆ.
ಪೋಸ್ಟ್ಮಾರ್ಟಂನಲ್ಲಿ ಬಯಲಾದ ಸತ್ಯ ಪದ್ಮಜಾ ಕುಟುಂಬಸ್ಥರು ಮೊದಲು ನಂಬಿದ್ದರೂ, ಪೊಲೀಸರು ಅನುಮಾನಿಸಿ ಪೋಸ್ಟ್ಮಾರ್ಟಂ ಮಾಡಿಸಿದರು. ದೇಹದಲ್ಲಿ ವಿಷದ ಅಂಶ ಪತ್ತೆಯಾದ ನಂತರ ಕಿರಣ್ನನ್ನು ವಿಚಾರಿಸಲಾಗಿ ಆತ ಸತ್ಯ ಬಾಯ್ಬಿಟ್ಟಿದ್ದಾನೆ.
ಪೊಲೀಸರು ಕಿರಣ್ ಅವರನ್ನು ಬಂಧಿಸಿ ರಿಮಾಂಡ್ಗೆ ಕಳುಹಿಸಿದ್ದಾರೆ. ಈ ಘಟನೆಯು ಸ್ಥಳೀಯವಾಗಿ ತೀವ್ರ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.





