ಬೆಂಗಳೂರು (ಏಪ್ರಿಲ್ 01): ಕನ್ನಡ ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ‘ವಸುದೇವ ಕುಟುಂಬ’ ಧಾರಾವಾಹಿ ಈಗ ಸಂಭಾವನೆ ವಿವಾದದಲ್ಲಿ ಸಿಲುಕಿಕೊಂಡಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ನಟಿ ಹಂಸ ಪ್ರತಾಪ್, ನಟಿ ಚೈತ್ರಾ ಮತ್ತು ಹಿರಿಯ ನಟ ಅವಿನಾಶ್ ಅವರಂತಹ ಪ್ರಮುಖ ಕಲಾವಿದರು ನಟಿಸುತ್ತಿರುವ ಈ ಧಾರಾವಾಹಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿರ್ಮಾಪಕರು ಸಂಭಾವನೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದೀಗ ನಡುರಸ್ತೆಯಲ್ಲಿ ಅಡ್ಡಿಗಟ್ಟಿ ನಿರ್ಮಾಪಕರನ್ನು ಪೆಮೇಂಟ್ ಮಾಡುವಂತೆ ನಟಿ ಹಂಚ ಕೇಳಿದ್ದು, ನಿರ್ಮಾಪಕರು ಕೈಗೆ ಸಿಗದೇ ಸ್ಥಳದಿಂದ ಪರಾರಿಯಾಗಿದ್ದಾರೆ.
ಧಾರಾವಾಹಿಯ ನಿರ್ಮಾಪಕರಾದ ಕೋರಮಂಗಲ ಅನಿಲ್ ಮತ್ತವರ ಪತ್ನಿ ಅವರನ್ನು ನಾಗರಬಾವಿಯಲ್ಲಿರುವ ಅವರ ಹೊಸ ಹೋಟೆಲ್ ‘ತತ್ಸವಿ’ ಎದುರಿಗೆ ಇಂದು ನಟಿ ಹಂಸ, ಚೈತ್ರಾ ಮತ್ತು ಧಾರಾವಾಹಿಯ ಯೂನಿಟ್ ಸದಸ್ಯರು ಅಡ್ಡಹಾಕಿದ್ದಾರೆ. ಸಂಭಾವನೆ ಪಡೆಯದೇ ಕಂಗಾಲಾಗಿದ್ದ ಕಲಾವಿದರು, ನಿರ್ಮಾಪಕರಿಗೆ ಬಾಕಿ ಹಣ ಕೂಡಲೇ ನೀಡುವಂತೆ ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಹಂಸ , ನಿರ್ಮಾಪಕರ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದೊಂದು ಕಚಡಾ ನಿರ್ಮಾಣ ಸಂಸ್ಥೆ. ನನಗೆ ಸುಮಾರು 3 ಲಕ್ಷ ರೂಪಾಯಿ ಬಾಕಿ ಇದೆ. ಚೈತ್ರಾಗೂ ದೊಡ್ಡ ಮೊತ್ತ ಬಾಕಿ ಇದೆ. ಕಳೆದ 5 ತಿಂಗಳಿಂದ ಸಂಭಾವನೆ ಕೊಟ್ಟಿಲ್ಲ. ಬರೀ ನಾವೇ ಅಲ್ಲ, ಹತ್ತಾರು ಕಲಾವಿದರು, ತಂತ್ರಜ್ಞರಿಗೆ ಹಣ ಕೊಟ್ಟಿಲ್ಲ. ನಮ್ಮ ನಟನೆಯಿಂದಲೇ ಧಾರಾವಾಹಿ ಯಶಸ್ವಿಯಾಗುತ್ತಿದೆ, ಆದರೆ ನಮ್ಮ ಬದುಕಿಗೆ ಅನ್ನವೇ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ನಿರ್ಮಾಪಕರು ಹಣ ಕೊಡದಿರುವುದು ಮಾತ್ರವಲ್ಲದೆ ಹಣ ಕೇಳಿದ ನಟ-ನಟಿಯರನ್ನೇ ಬದಲಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಂಸ ಅವರು, “ಹಣ ಕೇಳಿದರೆ ‘ರೌಡಿಸಂ ಮಾಡ್ತೀರಾ?’ ಅಂತ ಕೇಳ್ತಾರೆ. ಅದಕ್ಕಿಂತ ಕೆಟ್ಟದ್ದು, ಸೆಟ್ನಲ್ಲಿ ಹಳಸಿದ ಅನ್ನ ಹಾಕಿದ್ದಾರೆ, ಕಲಾವಿದರನ್ನು ಕ್ಷುಲ್ಲಕವಾಗಿ ಕಾಣುತ್ತಾರೆ. ನಾವು ಇವರಿಗಾಗಿ 200ಕ್ಕೂ ಹೆಚ್ಚು ಎಪಿಸೋಡ್ಗಳಲ್ಲಿ ನಟಿಸಿದ್ದೇವೆ. ಇವರು ಹೊಸ ಹೋಟೆಲ್ ಶುರು ಮಾಡಿದ್ದಾರೆ, ಆದರೆ ನಮ್ಮ ಸಂಭಾವನೆಯನ್ನಂತೂ ಕೊಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಟಿಯರು ಸಿಕ್ಕಾಪಟ್ಟೆ ಕೇಳಿದಾಗ, ನಿರ್ಮಾಪಕ ದಂಪತಿ ‘ಸ್ಟೇಷನ್ಗೆ ಬನ್ನಿ, ನಿಂಗೆ ಗೊತ್ತಾ ನಾನು ಯಾರು’ ಎಂಬಂತೆ ಉಡಾಫೆ ಮಾತನಾಡಿ, ಕೂಡಲೇ ಅಲ್ಲಿಂದ ವಾಹನದಲ್ಲಿ ಪರಾರಿಯಾಗಿದ್ದಾರೆ. ಇದೀಗ ಹಂಸ ಅವರು, ಪೊಲೀಸ್ ದಾಖಲು ಮಾಡಲೂ ಮುಂದಾಗಿದ್ದಾರೆ.





