ಪಂಜಾಬ್: ಯಾರಿಗೂ ಇಂಥಾ ಕಠಿಣ ಶಿಕ್ಷೆಯನ್ನು ದೇವರು ಕೊಡಬಾರದು. ಒಬ್ಬ ಬಾಲಕ, ತನ್ನ ತಾಯಿಯ ಮೃತದೇಹವನ್ನು ನೀರಿನಿಂದ ಎಳೆದು ತರುವ ದೃಶ್ಯವನ್ನು ಒಳಗೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯವು ಎಂಥಾ ಕಲ್ಲು ಹೃದಯವನ್ನೂ ಕರಗಿಸಿಬಿಡುವಂತಿದೆ.
ಆ ಬಾಲಕನ ತಾಯಿ ಅದಾಗಲೇ ಕೊನೆಯುಸಿರೆಳೆದಿದ್ದಾರೆ, ಆಕೆಯ ದೇಹ ಪ್ರವಾಹದ ನೀರಿನಲ್ಲಿ ತೇಲುತ್ತಿದೆ. ಆದರೆ, ಆ ಮಗುವಿಗೆ ತಾಯಿಯ ಸಾವನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಆಕೆ ಇನ್ನೂ ಬದುಕಿದ್ದಾಳೆ, ಎದ್ದು ತನ್ನೊಡನೆ ಮಾತನಾಡುತ್ತಾಳೆ ಎಂಬ ಭರವಸೆಯೊಂದಿಗೆ, ಆತ ಆಕೆಯ ದೇಹವನ್ನು ನೀರಿನಿಂದ ಎಳೆದು ತರುವ ದೃಶ್ಯ ಹೃದಯವನ್ನು ಭಾರವಾಗಿಸುತ್ತದೆ.
ಹೌದು, ಪಂಜಾಬ್ನಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ 2025ರಲ್ಲಿ ಭಾರೀ ಮಳೆಯಿಂದಾಗಿ ಭೀಕರ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಈ ಪ್ರವಾಹದಿಂದಾಗಿ ಸುಮಾರು 1,400 ಗ್ರಾಮಗಳು ಜಲಾವೃತವಾಗಿದ್ದು, 43ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಗುರದಾಸ್ಪುರ, ಅಮೃತಸರ, ಫಿರೋಜ್ಪುರ ಮತ್ತು ಫಾಜಿಲ್ಕಾ ಜಿಲ್ಲೆಗಳು ಅತೀ ಹೆಚ್ಚು ಹಾನಿಗೊಳಗಾಗಿವೆ. ಸುಮಾರು 1.71 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಮುಳುಗಡೆಯಾಗಿದ್ದು, ರೈತರಿಗೆ ಬಾರಿ ನಷ್ಟವಾಗಿದೆ. ಸರ್ಕಾರದ ವರದಿಗಳ ಪ್ರಕಾರ, 21,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ, ಮತ್ತು 159 ರಾಹತ ಶಿಬಿರಗಳಲ್ಲಿ 1,478 ಜನರು ಆಶ್ರಯ ಪಡೆದಿದ್ದಾರೆ.





