ರೋಗಿಯ ವೇಷದಲ್ಲಿ ಸರ್ಕಾರಿ ಆಸ್ಪತ್ರೆ ದುರ್ವ್ಯವಸ್ಥೆ ಬಯಲಿಗೆ ಎಳೆದ ಮಹಿಳಾ IAS ಅಧಿಕಾರಿ

Shn (41)

ಉತ್ತರ ಪ್ರದೇಶದ ಫಿರೋಜಾಬಾದ್‌ನ ದೀದಿ ಮಾಯಿ ಸರ್ಕಾರಿ ಆರೋಗ್ಯ ಕೇಂದ್ರದ ಬಗ್ಗೆ ಹಲವು ದೂರುಗಳು ಬಂದಿದ್ದವು. ಈ ದೂರುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮಹಿಳಾ ಉಪ ಜಿಲ್ಲಾಧಿಕಾರಿ ಕೃತಿ ರಾಜ್ ರೋಗಿಯಂತೆ ಮಾರುವೇಷದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಆಸ್ಪತ್ರೆಯ ಕರಾಳ ಸ್ಥಿತಿಗತಿಗಳು ಒಂದೊಂದೇ ಬೆಳಕಿಗೆ ಬಂದಿವೆ.

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಸಿಬ್ಬಂದಿಗಳ ನಿರ್ಲಕ್ಷ್ಯ, ಅವಧಿ ಮುಗಿದ ಔಷಧಿಗಳು, ಗಲೀಜಿನಿಂದ ಕೂಡಿದ ವಾತಾವರಣ, ಶೌಚಾಲಯಗಳ ಕೊಳಕು ಸ್ಥಿತಿ ಮತ್ತು ರೋಗಿಗಳಿಗೆ ಸೂಕ್ತ ಆರೈಕೆ ಇಲ್ಲದಿರುವುದು ಕಂಡುಬಂದಿತು. ಆಡಳಿತಾಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ತೋರಿಸಲಾಗುತ್ತದೆ ಎಂಬ ಗೊತ್ತಿರುವ ಸತ್ಯವನ್ನು ಮೀರಿ, ಕೃತಿ ರಾಜ್ ರೋಗಿಯಂತೆ ಆಸ್ಪತ್ರೆಗೆ ತೆರಳಿ ವಾಸ್ತವಾಂಶವನ್ನು ತಿಳಿದುಕೊಂಡಿದ್ದಾರೆ.

ನಾಯಿ ಕಡಿತಕ್ಕೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸಿದ ರೀತಿಯಲ್ಲಿ, ಮುಖಕ್ಕೆ ಮಾಸ್ಕ್ ಧರಿಸಿ ತೆರಳಿದ ಕೃತಿ ರಾಜ್‌ಗೆ ಆಸ್ಪತ್ರೆಯ ದುರ್ವ್ಯವಸ್ಥೆ ಗಾಬರಿಯುಂಟು ಮಾಡಿತು. ವೈದ್ಯರಿಲ್ಲದೆ ರೋಗಿಗಳು ಕಾಯುತ್ತಿದ್ದರು, ಸಿಬ್ಬಂದಿಗಳು ಗೈರು, ಔಷಧಿಗಳು ಕಾಲಾವಧಿ ಮೀರಿದ್ದವು. ತಾನು ಉಪ ಜಿಲ್ಲಾಧಿಕಾರಿ ಎಂದು ಬಹಿರಂಗಪಡಿಸಿದಾಗ ಸಿಬ್ಬಂದಿಗಳು ಗಾಬರಿಗೊಂಗಿದರು. ಹಾಜರಾತಿಯಲ್ಲಿ ಎಲ್ಲರೂ ಇದ್ದರೂ, ಆಸ್ಪತ್ರೆಯಲ್ಲಿ ಯಾರೂ ಕರ್ತವ್ಯದಲ್ಲಿರಲಿಲ್ಲ. “ಎರಡು ದಿನದಿಂದ ಸಿಬ್ಬಂದಿ ರಜೆಯಲ್ಲಿದ್ದಾರೆ, ಇಲ್ಲದಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ” ಎಂದು ಸಿಬ್ಬಂದಿಗಳು ಸಮಜಾಯಿಷಿ ನೀಡಲು ಯತ್ನಿಸಿದರಾದರೂ, ಕೃತಿ ರಾಜ್ ಎಲ್ಲರನ್ನೂ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಘಟನೆಯ ವೀಡಿಯೊ ಈಗ ವೈರಲ್ ಆಗಿದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version