ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಭಾರೀ ಸಂಚಲನ ಮೂಡಿಸಿದೆ. ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ಜುಟ್ಟು ಹಿಡಿದು ಎಳೆದಾಡುತ್ತಾ, ಥಳಿಸುತ್ತಾ ಹಲ್ಲೆ ನಡೆಸುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ವಿಚ್ಛೇದನ ಪ್ರಕರಣದಲ್ಲಿ ಜೀವನಾಂಶ (ಅಲಿಮನಿ) ನಿರಾಕರಣೆಯಿಂದ ಕೆರಳಿದ ಪತ್ನಿ, ಪತಿಯ ಜುಟ್ಟನ್ನು ಹಿಡಿದು ಎಳೆದಾಡುತ್ತಾ, ಕಪಾಳಮೋಕ್ಷ ಮಾಡಿದ್ದಾಳೆ. ಆದರೆ ಈ ಹಲ್ಲೆಯ ನಡುವೆಯೂ ಪತಿ ಶಾಂತವಾಗಿ ನಗುತ್ತಾ ನಿಂತಿರುವುದು ನೆಟ್ಟಿಗರ ಗಮನ ಸೆಳೆದಿದೆ.
ಈ ದಂಪತಿಗಳ ವಿಚ್ಛೇದನ ಪ್ರಕರಣ ಅಂತಿಮ ಹಂತಕ್ಕೆ ಬಂದಿತ್ತು. ಪತ್ನಿ ಭಾರೀ ಮೊತ್ತದ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಳು. ಆದರೆ ನ್ಯಾಯಾಲಯ ಅದನ್ನು ನಿರಾಕರಿಸಿತ್ತು. ಇದರಿಂದ ಕೋಪಗೊಂಡ ಮಹಿಳೆ, ಕೋರ್ಟ್ನಿಂದ ಹೊರಬಂದ ತಕ್ಷಣ ಪತಿಯ ಮೇಲೆ ಹಲ್ಲೆ ಮಾಡಿದ್ದಾಳೆ. ವಿಡಿಯೋದಲ್ಲಿ ಆಕೆ ಪತಿಯ ಜುಟ್ಟು ಎಳೆದು, ಥಳಿಸುತ್ತಾ, ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.
ಜೀವನಾಂಶ ನಿರಾಕರಣೆಗೆ ಮುಖ್ಯ ಕಾರಣವೇನು?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಈ ವ್ಯಕ್ತಿ ತನ್ನ ಹೆಸರಿನಲ್ಲಿ ಇದ್ದ ಎಲ್ಲಾ ಆಸ್ತಿಗಳನ್ನು ವಿಚ್ಛೇದನದ ಅಂತಿಮ ತೀರ್ಪು ಬರುವ ಮುನ್ನವೇ ತನ್ನ ತಾಯಿಯ ಹೆಸರಿಗೆ ವರ್ಗಾಯಿಸಿದ್ದಾನೆ ಎನ್ನಲಾಗಿದೆ. ಇದರಿಂದ ಕಾನೂನು ದೃಷ್ಟಿಯಲ್ಲಿ ಪತಿಯ ಬಳಿ ಯಾವುದೇ ಆಸ್ತಿ ಇಲ್ಲದಂತಾಗಿದ್ದು, ನ್ಯಾಯಾಲಯವು ಜೀವನಾಂಶ ನೀಡಲು ನಿರಾಕರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪತಿಯ ಈ ಚಾಣಾಕ್ಷತನದಿಂದ ನಿರಾಶಗೊಂಡ ಪತ್ನಿ, ಹತಾಶೆಯಿಂದ ಹಾಗೂ ಆಕ್ರೋಶದಿಂದ ಈ ರೀತಿ ವರ್ತಿಸಿದ್ದಾಳೆ ಎನ್ನಲಾಗುತ್ತಿದೆ. ಆದರೆ ಈ ಆರೋಪಗಳ ಸತ್ಯಾಸತ್ಯತೆ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.
ಇಷ್ಟೊಂದು ಹಲ್ಲೆ ನಡೆಯುತ್ತಿದ್ದರೂ ಆಕೆಯ ಪತಿ ಆಕ್ರೋಶಗೊಳ್ಳದೆ, ಶಾಂತವಾಗಿ ನಗುತ್ತಾ ನಿಂತಿದ್ದಾನೆ. ಇದು ನೆಟ್ಟಿಗರಲ್ಲಿ ಮೆಚ್ಚುಗೆಗೆ ಕಾರಣವಾಗಿದೆ. “ಇದೇ ನಿಜವಾದ ಗೆಲುವು” ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋ ವೈರಲ್ ಆದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಭಾರೀ ಚರ್ಚೆಗಳು ಶುರುವಾಗಿದೆ.
ಕೆಲವರು, “ಕಾನೂನಿನ ಅಡಿಯಲ್ಲಿ ಆಸ್ತಿ ವರ್ಗಾವಣೆ ಮಾಡಿರುವುದು ತಪ್ಪೇನು?” ಎಂದು ಪತಿಯ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನೂ ಕೆಲವರು, “ಸಾರ್ವಜನಿಕವಾಗಿ ಪುರುಷನ ಮೇಲೆ ಹಲ್ಲೆ ನಡೆದರೂ ಯಾರೂ ಕ್ರಮ ಕೈಗೊಳ್ಳುವುದಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಇನ್ನೊಂದು ಕೆಲ ನೆಟ್ಟಿಗರು, “ಜೀವನಾಂಶ ಪಡೆಯುವುದು ಈಗ ವ್ಯವಹಾರವಾಗುತ್ತಿದೆ” ಎಂಬ ಕಟು ಟೀಕೆಯನ್ನು ಮುಂದಿಟ್ಟಿದ್ದಾರೆ. ಆದರೆ ಮಹಿಳೆಯ ಹಲ್ಲೆಯನ್ನು ಖಂಡಿಸುವವರೂ ಸಾಕಷ್ಟು ಮಂದಿ ಇದ್ದಾರೆ.
