ಕನ್ನಡಿಗರ ದೊಡ್ಡ ಮನಸ್ಸು ಮತ್ತು ಆತಿಥ್ಯದ ಗುಣವನ್ನು ತೋರಿಸುವ ಹೃದಯಸ್ಪರ್ಶಿ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ದೆಹಲಿಯಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬನಿಗೆ ಬೆಂಗಳೂರಿನ ಕುಟುಂಬವೊಂದು ಊಟದ ಆತಿಥ್ಯ ನೀಡಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಕನ್ನಡಿಗರ ಸಂಸ್ಕಾರ ಮತ್ತು ಔದಾರ್ಯವನ್ನು ಎತ್ತಿ ತೋರಿಸುತ್ತದೆ.
ದೆಹಲಿ ಮೂಲದ ಸದೀವ್ ಸಿಂಗ್ ಎಂಬ ಇನ್ಫ್ಲುಯೆನ್ಸರ್ ಮತ್ತು ಸ್ಟಾರ್ಟ್ಅಪ್ ಸಂಸ್ಥಾಪಕ ಬೆಂಗಳೂರಿನಲ್ಲಿ ಸ್ಥಳೀಯ ಮನೆಯ ಊಟದ ರುಚಿಯನ್ನು ಸವಿಯಲು ಬಯಸಿದ್ದರು. ಇದಕ್ಕಾಗಿ ಅವರು ಬೆಂಗಳೂರಿನ ಒಂದು ಕುಟುಂಬದ ಮನೆಯ ಮುಂದೆ ನಿಂತು, “ನಿಮ್ಮ ಮನೆಯಲ್ಲಿ ಬೆಳಗಿನ ಉಪಹಾರವನ್ನು ಮಾಡಬಹುದೇ?” ಎಂದು ಕೇಳಿದ್ದಾರೆ. ಆ ಮನೆಯ ಮಹಿಳೆ ಒಂದು ಕ್ಷಣ ಯೋಚಿಸಿ, ಒಳಗೆ ಹೋಗಿ ಕೇಳಿ ಬಂದು ಸದೀವ್ಗೆ ಆಹ್ವಾನ ನೀಡಿದ್ದಾರೆ.
ಸದೀವ್ ಸಿಂಗ್ ಮತ್ತು ಅವರ ಜೊತೆಗಿದ್ದ ಮಹಿಳೆಯನ್ನು ಕುಟುಂಬದವರು ಮನೆಯೊಳಗೆ ಕರೆದುಕೊಂಡು, ಪ್ರೀತಿಯಿಂದ ರಾಗಿ ಮುದ್ದೆ ಮತ್ತು ಚಿಕನ್ ಸಾಂಬಾರ್ ಬಡಿಸಿದ್ದಾರೆ. ಊಟವನ್ನು ಆನಂದಿಸಿದ ಸದೀವ್ ಮತ್ತು ಅವರ ಸಹಚರಿ, ಕುಟುಂಬದವರಿಗೆ ಕೃತಜ್ಞತೆಯಿಂದ ಪಾದ ಮುಟ್ಟಿ ನಮಸ್ಕಾರ ಮಾಡಿದ್ದಾರೆ. “ಬೆಂಗಳೂರಿನ ಜನರು ನಿಜಕ್ಕೂ ಒಳ್ಳೆಯವರು, ಊಟ ತುಂಬಾ ರುಚಿಕರವಾಗಿತ್ತು” ಎಂದು ಸದೀವ್ ಹೇಳಿದ್ದಾರೆ.
‘saadeevxsingh’ ಎಂಬ ಖಾತೆಯಲ್ಲಿ ಶೇರ್ ಆಗಿರುವ ಈ ವಿಡಿಯೋ 33 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ಈ ಹೃದಯಸ್ಪರ್ಶಿ ಘಟನೆಯನ್ನು ಮೆಚ್ಚಿಕೊಂಡಿದ್ದಾರೆ. ಕೆಲವರು “ರಾಗಿ ಮುದ್ದೆ ಆರೋಗ್ಯಕರ ಆಹಾರ, ನಿಜವಾದ ಕನ್ನಡಿಗರ ಸಂಸ್ಕಾರ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಅತಿಥಿ ದೇವೋ ಭವ, ಇದು ನಿಜವಾದ ಬೆಂಗಳೂರಿಗರ ಗುಣ” ಎಂದು ಬರೆದಿದ್ದಾರೆ.
ಈ ಘಟನೆಯು ಕನ್ನಡಿಗರು ಮತ್ತು ಪರಭಾಷಿಕರ ನಡುವಿನ ಒಡನಾಟವನ್ನು ಗಟ್ಟಿಗೊಳಿಸುವ, ಸಾಮರಸ್ಯವನ್ನು ಸಾರುವ ವಿಡಿಯೋ ಎಂದು ಗುರುತಿಸಲಾಗಿದೆ. ಇಂತಹ ಕೃತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಧನಾತ್ಮಕ ಸಂದೇಶವನ್ನು ಹರಡುತ್ತವೆ.