ಕೃತಕ ಬುದ್ಧಿಮತ್ತೆ (AI) ತ್ವರಿತವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕ್ಷೇತ್ರಕ್ಕೆ ಆತಂಕ ವ್ಯಕ್ತವಾಗುತ್ತಿದೆ. ಇದೀಗ ಸಿಟ್ರಿನಿ ರಿಸರ್ಚ್ ಸಂಸ್ಥೆಯು ಪ್ರಕಟಿಸಿರುವ ‘The 2028 Global Intelligence Crisis’ ಶೀರ್ಷಿಕೆಯ ವರದಿಯು ಭಾರತದ ವಿಶೇಷವಾಗಿ ಬೆಂಗಳೂರು ಮೂಲದ ಐಟಿ ವಲಯಕ್ಕೆ ಆಘಾತಕಾರಿ ಎಚ್ಚರಿಕೆ ನೀಡಿದೆ. ಈ ವರದಿಯು ಒಂದು ಊಹಾಪೋಹದ ಆಧಾರದ ಮೇಲೆ 2028ರ ವೇಳೆಗೆ ಎಐನಿಂದಾಗಿ ಸಾಮೂಹಿಕ ನಿರುದ್ಯೋಗ, ಆರ್ಥಿಕ ಅಸ್ಥಿರತೆ ಮತ್ತು ‘Ghost GDP’ (ಕಾಣದ ಜಿಡಿಪಿ) ಸ್ಥಿತಿ ಉಂಟಾಗಬಹುದು ಎಂದು ಭವಿಷ್ಯವಾಣಿ ಮಾಡಿದೆ.
ಕರ್ನಾಟಕಕ್ಕೆ ಏಕೆ ದೊಡ್ಡ ಆಪತ್ತು?
ಭಾರತದ ಐಟಿ ರಫ್ತು ವ್ಯಾಪಾರದಲ್ಲಿ ಬೆಂಗಳೂರು (ಸಿಲಿಕಾನ್ ಸಿಟಿ) ಪಾಲು ಸುಮಾರು 25% ಇದೆ. ಟಿಸಿಎಸ್, ಇನ್ಫೋಸಿಸ್, ವಿಪ್ರೋ ಮುಂತಾದ ದೈತ್ಯ ಕಂಪನಿಗಳು ಹೊರಗುತ್ತಿಗೆ ಸೇವೆಗಳ ಮೇಲೆ ಹೆಚ್ಚು ಅವಲಂಭಿತವಾಗಿವೆ. ಎಐ ಏಜೆಂಟ್ಗಳು ಕಡಿಮೆ ವೆಚ್ಚದಲ್ಲಿ ಕೋಡಿಂಗ್ ಮತ್ತು ಇತರ ಕೆಲಸಗಳನ್ನು ಮಾಡಲು ಸಾಧ್ಯವಾದರೆ, ಗ್ರಾಹಕರು ಮಾನವ ಕಾರ್ಮಿಕರನ್ನು ಬಿಟ್ಟು ಎಐಗೆ ಮೊರೆ ಹೋಗುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ.
ಭಾರತದ ವಾರ್ಷಿಕ ಐಟಿ ರಫ್ತು ಸುಮಾರು 18 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದು, ಕರ್ನಾಟಕದ ಪಾಲು ₹4.5 ಲಕ್ಷ ಕೋಟಿಗೂ ಹೆಚ್ಚು. ಈ ರಫ್ತು ಸಂಪೂರ್ಣವಾಗಿ ನಿಂತುಹೋದರೆ ಅಥವಾ ಭಾರಿ ಕುಸಿತವಾದರೆ, ಲಕ್ಷಾಂತರ ಉದ್ಯೋಗಗಳು ಕಳೆದುಹೋಗಬಹುದು ಮತ್ತು ರೂಪಾಯಿ ಮೌಲ್ಯ ಕುಸಿಯಬಹುದು ಎಂದು ಅಂದಾಜಿಸಲಾಗಿದೆ.
ವರದಿಯ ಮುಖ್ಯ ಅಂಶಗಳು:
- 2028ರ ವೇಳೆಗೆ ಎಐ ಏಜೆಂಟ್ಗಳ ಮಾರ್ಜಿನಲ್ ವೆಚ್ಚ ವಿದ್ಯುತ್ ದರಕ್ಕೆ ಸಮಾನವಾಗಿ ಕುಸಿಯುತ್ತದೆ.
- ಟಿಸಿಎಸ್, ಇನ್ಫೋಸಿಸ್, ವಿಪ್ರೋ ಮುಂತಾದ ಕಂಪನಿಗಳು ಹೊರಗುತ್ತಿಗೆ ಕಾಂಟ್ರಾಕ್ಟ್ಗಳನ್ನು ಕಳೆದುಕೊಳ್ಳುವ ಸಾಧ್ಯತೆ.
- ಸಾಮೂಹಿಕ ನಿರುದ್ಯೋಗದಿಂದಾಗಿ ಗ್ರಾಹಕ ಖರೀದಿ ಕಡಿಮೆಯಾಗಿ, ಆರ್ಥಿಕತೆಯಲ್ಲಿ ನಕಾರಾತ್ಮಕ ಫೀಡ್ಬ್ಯಾಕ್ ಲೂಪ್ ಉಂಟಾಗಬಹುದು.
- ಭಾರತದ ಐಟಿ ಸೇವಾ ವಲಯದ ಮೇಲೆ ದೊಡ್ಡ ಪರಿಣಾಮ. ರೂಪಾಯಿ ಕುಸಿತ, IMF ಚರ್ಚೆಗಳು ಸಹ ಸಾಧ್ಯ.
ಈ ವರದಿಯು ಕೇವಲ ಒಂದು ಊಹಾಪೋಹದ ಸನ್ನಿವೇಶ ಎಂದು ಸಿಟ್ರಿನಿ ರಿಸರ್ಚ್ ಸ್ಪಷ್ಟಪಡಿಸಿದ್ದರೂ, ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಆತಂಕ ಮತ್ತು ಐಟಿ ಷೇರುಗಳಲ್ಲಿ ಕುಸಿತಕ್ಕೆ ಕಾರಣವಾಗಿದೆ. ಭಾರತದ ಐಟಿ ಕ್ಷೇತ್ರವು ಎಐಯನ್ನು ಅಳವಡಿಸಿಕೊಂಡು ಹೊಸ ಅವಕಾಶಗಳನ್ನು ಸೃಷ್ಟಿಸಬೇಕು ಎಂಬ ಚರ್ಚೆಯೂ ಆರಂಭವಾಗಿದೆ.





