ಬೆಂಗಳೂರು: ಐಪಿಎಲ್ನ ಅತ್ಯಂತ ಜನಪ್ರಿಯ ಮತ್ತು 2025ರ ಚಾಂಪಿಯನ್ ತಂಡ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (RCB) ಮಾಲೀಕತ್ವ ಬದಲಾವಣೆಯ ಹಾದಿಯಲ್ಲಿದೆ. ಪ್ರಸ್ತುತ ಡಿಯಾಜಿಯೊ (ಯುನೈಟೆಡ್ ಸ್ಪಿರಿಟ್ಸ್) ಒಡೆತನದಲ್ಲಿರುವ ಈ ತಂಡವನ್ನು ಖರೀದಿಸಲು ದೈತ್ಯ ಉದ್ಯಮಿಗಳ ಒಕ್ಕೂಟವೊಂದು ಭಾರಿ ಪೈಪೋಟಿ ನಡೆಸುತ್ತಿದೆ. ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಈ ಒಕ್ಕೂಟವು ಸುಮಾರು 1.8 ಬಿಲಿಯನ್ ಡಾಲರ್ನಿಂದ 2 ಬಿಲಿಯನ್ ಡಾಲರ್ (ಅಂದಾಜು ₹16,000 – ₹18,500 ಕೋಟಿ) ಮೊತ್ತಕ್ಕೆ ಆರ್ಸಿಬಿಯನ್ನು ತನ್ನದಾಗಿಸಿಕೊಳ್ಳಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
ಮಾಲೀಕತ್ವದ ರೇಸ್ನಲ್ಲಿರುವ ದೈತ್ಯರು ಯಾರು ?
ಆರ್ಸಿಬಿ ಖರೀದಿಗೆ ಪ್ರಮುಖವಾಗಿ ಎರಡು ಬಲಿಷ್ಠ ಒಕ್ಕೂಟಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು:
-
ಆದಿತ್ಯ ಬಿರ್ಲಾ ಒಕ್ಕೂಟ: ಇದರಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ಜೊತೆಗೆ ಡೇವಿಡ್ ಬ್ಲಿಟ್ಜರ್, ಅಮೆರಿಕದ ಖಾಸಗಿ ಇಕ್ವಿಟಿ ದೈತ್ಯ ಬ್ಲ್ಯಾಕ್ಸ್ಟೋನ್ ಮತ್ತು ಬೆನೆಟ್ ಕೋಲ್ಮನ್ (ಟೈಮ್ಸ್ ಆಫ್ ಇಂಡಿಯಾ ಗ್ರೂಪ್) ಪಾಲುದಾರರಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಈ ಗುಂಪು ಈಗಾಗಲೇ ತಂಡವನ್ನ ಖರೀದಿ ಮಾಡಿದೆ.
-
ಡಾ. ರಂಜನ್ ಪೈ ಒಕ್ಕೂಟ: ಮಣಿಪಾಲ್ ಹಾಸ್ಪಿಟಲ್ಸ್ನ ಡಾ. ರಂಜನ್ ಪೈ ನೇತೃತ್ವದ ಈ ತಂಡದಲ್ಲಿ ಯುಎಸ್ ಇಕ್ವಿಟಿ ಫರ್ಮ್ ಕೆಕೆಆರ್ ಮತ್ತು ಸಿಂಗಪುರದ ಟೆಮಾಸೆಕ್ ಸೇರಿಕೊಂಡಿವೆ.
-
ಅಜೀಮ್ ಪ್ರೇಮ್ಜಿ ಮತ್ತು ಇಕ್ಯೂಟಿ: ವಿಪ್ರೋ ಸಂಸ್ಥಾಪಕ ಅಜೀಮ್ ಪ್ರೇಮ್ಜಿ ಅವರ ಹೂಡಿಕೆ ಸಂಸ್ಥೆ ‘ಪ್ರೇಮ್ಜಿ ಇನ್ವೆಸ್ಟ್’ ಮತ್ತು ಸ್ವೀಡನ್ ಮೂಲದ ಇಕ್ಯೂಟಿ (EQT) ಕೂಡ ಬಿಡ್ ಸಲ್ಲಿಸಿವೆ ಎಂದು ತಿಳಿದುಬಂದಿದೆ.
ರಾಜಸ್ಥಾನ್ ರಾಯಲ್ಸ್ ದಾಖಲೆ ಮುರಿಯುತ್ತಾ ಆರ್ಸಿಬಿ ?
ಇತ್ತೀಚೆಗಷ್ಟೇ ರಾಜಸ್ಥಾನ್ ರಾಯಲ್ಸ್ ತಂಡವನ್ನು ಅಮೆರಿಕದ ಉದ್ಯಮಿ ಕಾಲ್ ಸೋಮಾನಿ ಅವರು ₹15,300 ಕೋಟಿಗೆ ಖರೀದಿಸಿದ್ದು ಐಪಿಎಲ್ ಇತಿಹಾಸದ ಅತೀ ದೊಡ್ಡ ಡೀಲ್ ಎನಿಸಿಕೊಂಡಿದೆ. ಆದರೆ, ಆರ್ಸಿಬಿ ತಂಡದ ಬ್ರ್ಯಾಂಡ್ ಮೌಲ್ಯ ಮತ್ತು 2025ರಲ್ಲಿ ಟೈಟಲ್ ಗೆದ್ದಿರುವುದು ಅದರ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಆರ್ಸಿಬಿ ಮಾರಾಟವು ರಾಜಸ್ಥಾನ್ ರಾಯಲ್ಸ್ ದಾಖಲೆಯನ್ನು ಸುಲಭವಾಗಿ ಮೀರಿಸಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಡೀಲ್ ಯಾವಾಗ ಜಾರಿಗೆ ಬರಲಿದೆ ?
ವರದಿಗಳ ಪ್ರಕಾರ, ಈ ಮಾರಾಟ ಪ್ರಕ್ರಿಯೆಯು ಐಪಿಎಲ್ 2026ರ ಸೀಸನ್ ನಂತರ ಅಧಿಕೃತವಾಗಿ ಜಾರಿಗೆ ಬರಲಿದೆ. ಅಂದರೆ, 2027ರಿಂದ ಆರ್ಸಿಬಿ ತಂಡವು ಸಂಪೂರ್ಣ ಹೊಸ ಮಾಲೀಕತ್ವದ ಅಡಿಯಲ್ಲಿ ಕಣಕ್ಕಿಳಿಯಲಿದೆ. ಡಯಾಗಿಯೋ ಸಂಸ್ಥೆಯು ತನ್ನ 100% ಪಾಲನ್ನು ಮಾರಾಟ ಮಾಡಲು ಉದ್ದೇಶಿಸಿದ್ದು, ಡ್ಯೂ ಡಿಲಿಜೆನ್ಸ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಂತಿಮ ಮೊತ್ತದ ಬಗ್ಗೆ ಸ್ಪಷ್ಟತೆ ಸಿಗಲಿದೆ.
ಸದ್ಯಕ್ಕೆ ಯಾವುದೇ ಸಂಸ್ಥೆಗಳು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಹರ್ಷ ಗೋಯಂಕಾ ಅವರಂತಹ ಪ್ರಮುಖ ಉದ್ಯಮಿಗಳ ಟ್ವೀಟ್ ಮತ್ತು ಮನಿಕಂಟ್ರೋಲ್ ವರದಿಗಳು ಈ ಭಾರಿ ಮೊತ್ತದ ಒಪ್ಪಂದಕ್ಕೆ ಪುಷ್ಟಿ ನೀಡಿವೆ. ಕನ್ನಡಿಗರ ಹೆಮ್ಮೆಯ ತಂಡವು ಬಿರ್ಲಾ ಅಥವಾ ಪ್ರೇಮ್ಜಿಯಂತಹ ದೇಶೀಯ ದೈತ್ಯರ ಕೈಸೇರಲಿದೆಯೇ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.
