IPL ಫೈನಲ್‌ಗೂ ಮುನ್ನ RCB ತಂಡಕ್ಕೆ ಶುಭಕೋರಿದ ಭಾವಿ ಸಿಎಂ ಡಿಕೆ ಶಿವಕುಮಾರ್!

BeFunky collage (12)

ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳು ಇಂದು ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಕರ್ನಾಟಕದ ಭಾವಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತವರಿನ ತಂಡ RCBಗೆ ಶುಭಕೋರಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ರಜತ್ ಪಾಟೀದಾರ್ ನೇತೃತ್ವದ RCB ತಂಡ ಎರಡನೇ ಬಾರಿ ಐಪಿಎಲ್ ಟ್ರೋಫಿ ಎತ್ತುವ ಕನಸು ಕಾಣುತ್ತಿದೆ. ಇತ್ತ ಶುಭ್‌ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ತವರಿನಲ್ಲಿ ವಿಜಯ ಸಾಧಿಸಲು ಸಿದ್ಧವಾಗಿದೆ.

ಡಿಕೆ ಶಿವಕುಮಾರ್ ಅವರ ಶುಭ ಹಾರೈಕೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಡಿಕೆ ಶಿವಕುಮಾರ್ ಅವರು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

“ಹಾಲಿ ಚಾಂಪಿಯನವರಿಗೆ ಆಲ್ ದಿ ಬೆಸ್ಟ್. ಇದು RCBಯ ಹೊಸ ಅಧ್ಯಾಯ. ಮೊದಲ ಮ್ಯಾಚ್‌ನಿಂದ ಫೈನಲ್ ವರೆಗೆ ಅತ್ಯಂತ ಶಿಸ್ತುಬದ್ಧ ಮತ್ತು ಸಂಘಟಿತ ಪ್ರದರ್ಶನ ನೀಡಿದೆ. ಈ ತಂಡವು ಬೆಂಗಳೂರು ಮತ್ತು ಕರ್ನಾಟಕದಾದ್ಯಂತ ಲಕ್ಷಾಂತರ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ,” ಎಂದು ಡಿಕೆಶಿ ಹೇಳಿದ್ದಾರೆ.

ಅವರು ಮುಂದುವರೆದು, “ಇಂದಿನ ಪಂದ್ಯವು ಬೆಂಗಳೂರಿಗೆ ಮತ್ತೊಮ್ಮೆ ವೈಭವ ತಂದುಕೊಡಲಿ. ಕರ್ನಾಟಕದಾದ್ಯಂತ ಎಲ್ಲರೂ ಸಂಭ್ರಮಿಸುವಂತೆ ಆಡಿ” ಎಂದು ಶುಭ ಹಾರೈಸಿದ್ದಾರೆ.

ಎರಡನೇ ಟ್ರೋಫಿ ಗೆಲ್ಲುವ ಸಾಧ್ಯತೆ

ಇಂದು ಯಾವ ತಂಡ ಗೆದ್ದರೂ ಅದು ತನ್ನ ಎರಡನೇ ಐಪಿಎಲ್ ಟ್ರೋಫಿ ಎತ್ತುವಂತಾಗುತ್ತದೆ. ಕ್ರಿಕೆಟ್ ಅಭಿಮಾನಿಗಳಿಗೆ ಇಂದು ಭರಪೂರ ಮನರಂಜನೆಯ ಪಂದ್ಯವಾಗುವ ನಿರೀಕ್ಷೆಯಿದೆ.

Exit mobile version