ಇಂದು, ಜೂನ್ 3, 2025ರಂದು ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2025 ಫೈನಲ್ ಪಂದ್ಯಕ್ಕೆ ಕೋಟಿ ಕೋಟಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಬೆಂಗಳೂರಿನ ಆರ್ಸಿಬಿ ಅಭಿಮಾನಿಗಳಿಗೆ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಎಚ್ಚರಿಕೆಯೊಂದು ಬಂದಿದೆ. ಫೈನಲ್ ಪಂದ್ಯದ ಸಂಭ್ರಮಾಚರಣೆಯ ಹೆಸರಿನಲ್ಲಿ ಹದ್ದುಮೀರಿ ವರ್ತಿಸಿದರೆ ಕಾನೂನು ಕ್ರಮ ಎದುರಾಗಲಿದೆ.
ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಈ ಪಂದ್ಯ ಗುಜರಾತ್ನಲ್ಲಿ ನಡೆಯುತ್ತಿದ್ದರೂ, ಬೆಂಗಳೂರಿನಲ್ಲಿ ಅಭಿಮಾನಿಗಳು ಸಂಭ್ರಮಾಚರಣೆಯ ಹೆಸರಿನಲ್ಲಿ ಉದ್ಧಟತನ ತೋರಬಾರದೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಭಿಮಾನಿಗಳ ಸಂಭ್ರಮವು ಕಾನೂನಿನ ಚೌಕಟ್ಟಿನೊಳಗೆ ಇರಬೇಕು. ರಸ್ತೆ ತಡೆಯುವುದು, ಟೈರ್ಗೆ ಬೆಂಕಿ ಹಚ್ಚುವುದು, ವಾಹನಗಳಿಗೆ ಅಡ್ಡಿಪಡಿಸುವುದು, ಸಾರ್ವಜನಿಕ ಶಾಂತಿಗೆ ಭಂಗ ತರುವುದು ಅಥವಾ ಸಾರ್ವಜನಿಕ ಆಸ್ತಿಗೆ ಹಾನಿಮಾಡುವಂತಹ ಕೃತ್ಯಗಳು ಸಂಪೂರ್ಣ ನಿಷಿದ್ಧವಾಗಿದೆ.
ಬೆಂಗಳೂರಿನಲ್ಲಿ ಹೆಚ್ಚಿನ ಭದ್ರತೆ
ಬೆಂಗಳೂರಿನ ಎಂ.ಜಿ ರಸ್ತೆ, ಕೋರಮಂಗಲ, ಇಂದಿರಾ ನಗರ, ಎಂ. ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಐಪಿಎಲ್ ಫೈನಲ್ ಪಂದ್ಯದ ಸ್ಕ್ರೀನಿಂಗ್ ಆಯೋಜಿಸಿರುವ ಎಲ್ಲಾ ಸ್ಥಳಗಳಲ್ಲಿ ಖಾಕಿ ಹದ್ದಿನ ಕಣ್ಣು ಇಡಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಅತಿರೇಕದ ಪೋಸ್ಟ್ಗಳು, ಉದ್ಧಟತನದ ವಿಡಿಯೊಗಳನ್ನು ಹಂಚಿಕೊಂಡರೂ ಕಾನೂನು ಕ್ರಮಕ್ಕೆ ಒಳಗಾಗುವ ಸಾಧ್ಯತೆ ಇದೆ.
ಪಬ್ಗಳು ಮತ್ತು ಹೋಟೆಲ್ಗಳಿಗೆ ಕಟ್ಟುನಿಟ್ಟಿನ ಆದೇಶ
ಬೆಂಗಳೂರಿನ ಪಬ್ಗಳು, ಕ್ಲಬ್ಗಳು ಮತ್ತು ಪ್ರತಿಷ್ಠಿತ ಹೋಟೆಲ್ಗಳಿಗೆ ರಾತ್ರಿಯ ವೇಳೆ ನಿಗದಿತ ಅವಧಿಯನ್ನು ಮೀರಿ ತೆರೆದಿರುವಂತಿಲ್ಲ ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ತಪ್ಪಿದ್ದಲ್ಲ. ಈ ಕ್ರಮವು ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು-ಸುವ್ಯವಸ್ಥೆಯನ್ನು ಕಾಪಾಡಲು ತೆಗೆದುಕೊಳ್ಳಲಾಗಿದೆ.
ಅಭಿಮಾನಿಗಳಿಗೆ ಸಂದೇಶ
ಆರ್ಸಿಬಿ ತಂಡದ ಅಭಿಮಾನಿಗಳು ತಮ್ಮ ಪ್ರೀತಿಯ ತಂಡಕ್ಕೆ ಬೆಂಬಲ ಸೂಚಿಸುವಾಗ ಕಾನೂನಿನ ಗಡಿಯೊಳಗೆ ವರ್ತಿಸಬೇಕು. ಅತಿರೇಕದ ಸಂಭ್ರಮಾಚರಣೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಕಾನೂನು ಉಲ್ಲಂಘನೆಯಾದರೆ, ಪೊಲೀಸರು ತಕ್ಷಣ ಕ್ರಮಕೈಗೊಳ್ಳಲು ಸಿದ್ಧರಾಗಿದ್ದಾರೆ. ಆರ್ಸಿಬಿಯ ಐತಿಹಾಸಿಕ ಫೈನಲ್ ಪಂದ್ಯವನ್ನು ಎಲ್ಲರೂ ಸಂತೋಷದಿಂದ, ಸುರಕ್ಷಿತವಾಗಿ ಆಚರಿಸೋಣ.