ಕ್ರಿಕೆಟ್ ಪ್ರೇಮಿಗಳ ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ. ಐಪಿಎಲ್ನ 18ನೇ ಆವೃತ್ತಿಯ ಪ್ರಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ನಲ್ಲಿ ಈ ಬಾರಿ 10 ತಂಡಗಳು ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ.
ಅಣ್ಣಾವ್ರ ಡೈಲಾಗ್ ಹೊಡೆದ ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್
ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನಾಯಕ ರಜತ್ ಪಾಟಿದಾರ್ ಆರ್ಸಿಬಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದರಲ್ಲೇ ವಿಶೇಷವೆಂದರೆ, ರಜತ್ ವರನಟ ಡಾಕ್ಟರ್ ರಾಜ್ಕುಮಾರ್ ಅವರನ್ನು ನೆನೆದಿದ್ದಾರೆ. ಅಣ್ಣಾವ್ರ ಡೈಲಾಗ್ ಹೊಡೆದಿದ್ದಾರೆ. ‘ಅಭಿಮಾನಿಗಳೇ ನಮ್ಮ ದೇವ್ರು’ ಎಂದು ರಜತ್ ಹೇಳಿದ್ದು, ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಹೆಚ್ಚಿಸಿದೆ.
ಮಿಸ್ಟರ್ ನ್ಯಾಗ್ಸ್ ಜೊತೆಗಿನ ಆರ್ಸಿಬಿ ಇನ್ಸೈಡರ್ ಶೋನಲ್ಲಿ ಭಾಗವಹಿಸಿದ ರಜತ್, ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಾ, ‘ನಿಮ್ಮ ಬೆಂಬಲವೇ ನಮ್ಮ ಶಕ್ತಿ’ ಎಂದು ಹೇಳಿದ್ದಾರೆ. ಡಾಕ್ಟರ್ ರಾಜ್ಕುಮಾರ್ ಅವರು ಕನ್ನಡಿಗರ ಹೃದಯದಲ್ಲಿರುವುದು ಸತ್ಯ. ಅವರ ಡೈಲಾಗ್ ಬಳಸಿಕೊಂಡು ಅಭಿಮಾನಿಗಳ ಮನಗೆದ್ದ ರಜತ್ ಪಾಟಿದಾರ್, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.
ಅಭಿಮಾನಿಗಳ ಪ್ರತಿಕ್ರಿಯೆ
ಆರ್ಸಿಬಿ ಕ್ಯಾಪ್ಟನ್ ರಜತ್ ಅವರು ಡಾ. ರಾಜ್ಕುಮಾರ್ ಹೇಳಿದ ಡೈಲಾಗ್ ಕೇಳಿದ ಅಭಿಮಾನಿಗಳಂತೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಾಮೆಂಟ್ಗಳ ಸುರಿಮಳೆಗೈದಿದ್ದಾರೆ. “ಅಭಿಮಾನಿಗಳಿಗೆ ನಮ್ಮನೇ ದೇವ್ರು”, “RCB ನಮ್ಮ ಎದೆ ಉಸಿರು”, “ಕನ್ನಡ ಮಾತಾಡಿ ಮನಸ್ಸು ಗೆದ್ದು ಬಿಟ್ಟೆ”, “ಈ ಸಲ ಕಪ್ ನಮ್ದೇ” ಎಂಬ ಕಾಮೆಂಟ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
2022 ರಿಂದ 2024ರವರೆಗೆ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಆರ್ಸಿಬಿ ನಾಯಕರಾಗಿದ್ದರು. ಅವರು ತಮ್ಮ ನಾಯಕತ್ವದಲ್ಲಿ ತಂಡವನ್ನು ಯಶಸ್ಸಿನತ್ತ ನಡಿಸಿದ್ದಾರೆ. ಈ ಬಾರಿಯಂತೆ, ರಜತ್ ಪಾಟಿದಾರ್ ನಾಯಕತ್ವ ಹೊತ್ತಿದ್ದು, ಇವರ ಪಂದ್ಯ ವೀಕ್ಷಿಸಲು ಆರ್ಸಿಬಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.
ಆರ್ಸಿಬಿ ತಂಡದ ಇತಿಹಾಸದಲ್ಲಿ ಹಲವು ಸ್ಟಾರ್ ಆಟಗಾರರು ಬಂದಿದ್ದು, ತಂಡವನ್ನು ಮುನ್ನಡೆಸಿದ್ದಾರೆ. ವಿರಾಟ್ ಕೋಹ್ಲಿ, ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ಮುಂತಾದ ತಾರೆಗಳು ಆಟದಿಂದಲೇ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದರು. ಈ ಸಲ ರಜತ್ ಪಾಟಿದಾರ್ ಅವರ ನಾಯಕತ್ವದಲ್ಲಿ ಆರ್ಸಿಬಿ ಅಭಿಮಾನಿಗಳು ಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.