ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು 2013ರ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ತಮ್ಮ ಹೆಸರನ್ನು ಅನಗತ್ಯವಾಗಿ ಎಳೆದು ತಂದಿದ್ದಕ್ಕಾಗಿ ಹೂಡಿದ್ದ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.
ಈ ಪ್ರಕರಣ ಒಂದು ದಶಕದಿಂದ ಬಾಕಿ ಇದ್ದು, ಇದೀಗ ಧೋನಿ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ನ್ಯಾಯಮೂರ್ತಿ ಸಿ.ವಿ. ಕಾರ್ತಿಕೇಯನ್ ಅವರು ಧೋನಿ ಪರವಾಗಿ ಸಾಕ್ಷ್ಯ ದಾಖಲಿಸಲು ವಕೀಲ ಆಯುಕ್ತರನ್ನು ನೇಮಿಸಿದ್ದಾರೆ. ಧೋನಿ ಅವರು ಸೆಲೆಬ್ರಿಟಿ ಆಗಿರುವುದರಿಂದ ಅವರ ಹಾಜರಾತಿ ಗೊಂದಲಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ, ವೀಡಿಯೋ ಅಥವಾ ಆಯುಕ್ತರ ಮೂಲಕ ಸಾಕ್ಷ್ಯ ದಾಖಲಿಸಲು ಅನುಮತಿ ನೀಡಲಾಗಿದೆ.
2013ರ ಐಪಿಎಲ್ ಬೆಟ್ಟಿಂಗ್ ಹಗರಣ
2013ರಲ್ಲಿ ಐಪಿಎಲ್ನಲ್ಲಿ ನಡೆದ ಬೆಟ್ಟಿಂಗ್ ಮತ್ತು ಸ್ಪಾಟ್-ಫಿಕ್ಸಿಂಗ್ ಹಗರಣವು ಭಾರತೀಯ ಕ್ರಿಕೆಟ್ ಅನ್ನು ಭಾರೀ ನಡುಗಿಸಿತ್ತು. ಆ ಸಮಯದಲ್ಲಿ, ಕೆಲವು ಟಿವಿ ಚಾನೆಲ್ಗಳು ಮತ್ತು ಪತ್ರಕರ್ತರು ಧೋನಿ ಅವರ ಹೆಸರನ್ನೂ ಈ ಹಗರಣಕ್ಕೆ ಎಳೆದು ತಂದಿದ್ದರು ಎಂದು ಧೋನಿ ಆರೋಪಿಸಿದ್ದಾರೆ. ತಮ್ಮ ವಿರುದ್ಧ ನಡೆದ ಈ ಪ್ರಚಾರವು ಕ್ರಿಕೆಟಿಗರ ಹೆಗ್ಗಳಿಕೆಗೆ ಧಕ್ಕೆ ತಂದು, ಮಾನಸಿಕ ಹಾಗೂ ವೃತ್ತಿಪರ ಹಾನಿ ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ.
2014ರಲ್ಲಿ ಹೂಡಿದ 100 ಕೋಟಿ ರೂ. ಮೊಕದ್ದಮೆ
ಈ ಆರೋಪಗಳ ನಂತರ, ಧೋನಿ 2014ರಲ್ಲಿ ಎರಡು ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ಕೆಲವು ಪತ್ರಕರ್ತರ ವಿರುದ್ಧ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅವರ ಅಭಿಪ್ರಾಯದಲ್ಲಿ, ದೂರದರ್ಶನ ಚರ್ಚೆಗಳಲ್ಲಿ ಹಾಗೂ ಸುದ್ದಿವಾಹಿನಿಗಳ ವರದಿಗಳಲ್ಲಿ ತಮ್ಮ ವಿರುದ್ಧ ನೀಡಲಾದ ಹೇಳಿಕೆಗಳು ಸಂಪೂರ್ಣ ತಪ್ಪು ಮತ್ತು ಆಧಾರರಹಿತವಾಗಿದ್ದವು.
ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಸಿ.ವಿ. ಕಾರ್ತಿಕೇಯನ್ ಅವರು ಇತ್ತೀಚಿಗೆ ಈ ಪ್ರಕರಣದ ವಿಚಾರಣೆಯನ್ನು ಮುಂದುವರೆಸಲು ಆದೇಶ ನೀಡಿದ್ದಾರೆ. ಧೋನಿ ಪರವಾಗಿ ಸಾಕ್ಷ್ಯಗಳನ್ನು ದಾಖಲಿಸಲು ವಕೀಲ ಆಯುಕ್ತರನ್ನೂ ನೇಮಿಸಲಾಗಿದೆ. ಎರಡು ಬಾರಿ ವಿಶ್ವಕಪ್ ವಿಜೇತರಾದ ಧೋನಿ ಸೆಲೆಬ್ರಿಟಿಯಾಗಿರುವುದರಿಂದ, ಅವರ ಹಾಜರಾತಿ ನ್ಯಾಯಾಲಯದಲ್ಲಿ ಗೊಂದಲ ಉಂಟುಮಾಡಬಹುದು ಎಂದು ಪರಿಗಣಿಸಿ, ಅವರು ಖುದ್ದಾಗಿ ಹಾಜರಾಗದೆ ವಕೀಲರ ಮೂಲಕ ತಮ್ಮ ಹೇಳಿಕೆಗಳನ್ನು ಸಲ್ಲಿಸಲು ತೀರ್ಮಾನಿಸಿದ್ದಾರೆ.
ಈ ಪ್ರಕರಣ ಒಂದು ದಶಕದಿಂದ ಬಾಕಿಯಾಗಿದೆ. ಧೋನಿ ಪರವಾಗಿ ಹಿರಿಯ ವಕೀಲ ಪಿ.ಆರ್. ರಾಮನ್ ಅವರು ಅಫಿಡವಿಟ್ ಸಲ್ಲಿಸಿ, ವಿಚಾರಣೆಯನ್ನು ಪ್ರಾರಂಭಿಸುವಂತೆ ಕೋರಿದ್ದಾರೆ.