ಐಪಿಎಲ್ 2025ರ ರಣರಂಗದಲ್ಲಿ ಕನ್ನಡಿಗ ಕರುಣ್ ನಾಯರ್ ತಮ್ಮ ಬ್ಯಾಟ್ನಿಂದ ಗುಡುಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ಗಾಗಿ ಆಡಿದ ಕರುಣ್, 40 ಎಸೆತಗಳಲ್ಲಿ 89 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿ ಕ್ರಿಕೆಟ್ ಲೋಕವನ್ನೇ ಬೆರಗಾಗಿಸಿದ್ದಾರೆ. 12 ಬೌಂಡರಿ, 5 ಸಿಕ್ಸರ್ಗಳೊಂದಿಗೆ ಮುಂಬೈ ಬೌಲರ್ಗಳನ್ನು ಚೆಂಡಾಡಿದ ಕರುಣ್, ತಮಗಾದ ಅನ್ಯಾಯಕ್ಕೆ ಮೈದಾನದಿಂದಲೇ ಖಡಕ್ ಉತ್ತರ ನೀಡಿದ್ದಾರೆ.
ಕರುಣ್ ನಾಯರ್ಗೆ ಕ್ರಿಕೆಟ್ ಜಗತ್ತಿನಲ್ಲಿ ಸವಾಲುಗಳು ಹೊಸದೇನಲ್ಲ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈ ಟೆಸ್ಟ್ನಲ್ಲಿ ಭರ್ಜರಿ ತ್ರಿಶತಕ (303*) ಸಿಡಿಸಿ ದೇಶವನ್ನೇ ತಲೆ ಎತ್ತಿ ನೋಡುವಂತೆ ಮಾಡಿದ್ದ ಕರುಣ್, ನಂತರ ತಂಡದಿಂದ ಕೈಬಿಡಲ್ಪಟ್ಟರು. ಆಸ್ಟ್ರೇಲಿಯಾ ವಿರುದ್ಧ ಒಂದು ಸರಣಿಯಲ್ಲಿ ವೈಫಲ್ಯ ಕಂಡ ಬಳಿಕ, ಅವರಿಗೆ ಮತ್ತೊಂದು ಅವಕಾಶವೂ ಸಿಗಲಿಲ್ಲ. ಈ ಹಿನ್ನಡೆಯ ನಂತರ ಕರ್ನಾಟಕ ರಾಜ್ಯ ತಂಡದಿಂದಲೂ ಹೊರಗುಳಿದ ಕರುಣ್, ವಿದರ್ಭಕ್ಕೆ ವಲಸೆ ಹೋಗಿ ಕಷ್ಟದ ದಿನಗಳನ್ನು ಎದುರಿಸಿದರು.
“ಡಿಯರ್ ಕ್ರಿಕೆಟ್, ನನಗೆ ಒಂದು ಅವಕಾಶ ಕೊಡು..” ಎಂದು ಕರುಣ್ 2022ರಲ್ಲಿ ಮಾಡಿದ ಟ್ವೀಟ್ ದೇಶದಾದ್ಯಂತ ವೈರಲ್ ಆಗಿತ್ತು. ಈ ಟ್ವೀಟ್ನಲ್ಲಿ ಅವರ ನೋವು, ಆಕ್ರೋಶ ಮತ್ತು ಅವಕಾಶಕ್ಕಾಗಿನ ಹಂಬಲ ಸ್ಪಷ್ಟವಾಗಿತ್ತು. ಕ್ರಿಕೆಟ್ ವಲಯದಲ್ಲಿ ಈ ಘಟನೆ ಭಾರೀ ಚರ್ಚೆಗೆ ಕಾರಣವಾಯಿತು. ಒಬ್ಬ ತ್ರಿಶತಕ ಸಿಡಿಸಿದ ಆಟಗಾರನಿಗೆ ಈ ರೀತಿಯ ಅವಮಾನವೇ, ರಾಜಕೀಯವೇ ಎಂದು ಪ್ರಶ್ನೆಗಳು ಕೇಳಿಬಂದವು.
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಕರುಣ್, ಯಾರೂ ನಿರೀಕ್ಷಿಸದ ರೀತಿಯಲ್ಲಿ ಆಟವಾಡಿದರು. 40 ಎಸೆತಗಳಲ್ಲಿ 89 ರನ್ಗಳ ವಿಸ್ಫೋಟಕ ಇನ್ನಿಂಗ್ಸ್ನಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಒಂದೊಂದು ಬೌಂಡರಿ, ಸಿಕ್ಸರ್ಗಳು ಕೇವಲ ರನ್ಗಳನ್ನೇ ತಂದಿಲ್ಲ, ತಮ್ಮನ್ನು ಟೀಕಿಸಿದವರಿಗೆ, ಕೈಬಿಟ್ಟವರಿಗೆ ತಿರುಗೇಟು ನೀಡಿದವು.
ಕಳೆದ ಕೆಲವು ವರ್ಷಗಳಿಂದ ಕರುಣ್ ನಾಯರ್ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ರನ್ಮಷೀನ್ ಆಗಿ ಮಿಂಚಿದ್ದಾರೆ. ರಣಜಿ ಟ್ರೋಫಿ, ವಿಜಯ್ ಹಜಾರೆ, ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗಳಲ್ಲಿ ಸತತವಾಗಿ ರನ್ಗಳನ್ನು ಕಲೆಹಾಕಿದ್ದಾರೆ. KSCA ಆಯೋಜಿತ ಮಹಾರಾಜ ಟೂರ್ನಿಯಲ್ಲೂ ಅವರ ಬ್ಯಾಟ್ ಗುಡುಗಿತ್ತು. ಆದರೆ, ಟೀಮ್ ಇಂಡಿಯಾದ ಬಾಗಿಲು ಮಾತ್ರ ತೆರೆದಿಲ್ಲ.
ಐಪಿಎಲ್ನಲ್ಲಿ 2022ರ ಬಳಿಕ ಸಿಕ್ಕ ಈ ಅವಕಾಶವನ್ನು ಕರುಣ್ ಎರಡೂ ಕೈಗಳಲ್ಲಿ ಬಾಚಿಕೊಂಡಿದ್ದಾರೆ. ಅವರ ಈ ಇನ್ನಿಂಗ್ಸ್ ಕೇವಲ ಡೆಲ್ಲಿ ಕ್ಯಾಪಿಟಲ್ಸ್ಗೆ ರನ್ಗಳನ್ನು ತಂದಿಲ್ಲ, ಕರುಣ್ರನ್ನು ಟೀಕಿಸಿದವರಿಗೆ, ಅವಕಾಶ ನೀಡದವರಿಗೆ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ತೋರಿಸಿದೆ.
ಕರುಣ್ ನಾಯರ್ ಈಗ ರೆಡ್ಹಾಟ್ ಫಾರ್ಮ್ನಲ್ಲಿದ್ದಾರೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ನ ನಾಯಕ ಫಾಫ್ ಡುಪ್ಲೆಸಿ ಗಾಯದಿಂದ ಚೇತರಿಸಿಕೊಂಡು ಕಮ್ಬ್ಯಾಕ್ ಮಾಡಿದರೆ ಕರುಣ್ಗೆ ತಂಡದಲ್ಲಿ ಸ್ಥಾನ ಸಿಗುವುದೇ? ಈ ಪ್ರಶ್ನೆ ಇಡೀ ಕ್ರಿಕೆಟ್ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕರುಣ್ ನಾಯರ್ರ ಈ ಕಮ್ಬ್ಯಾಕ್ ಕೇವಲ ಒಂದು ಇನ್ನಿಂಗ್ಸ್ನ ಕತೆಯಲ್ಲ. ಇದು ಒಬ್ಬ ಕ್ರಿಕೆಟಿಗನ ತಾಳ್ಮೆ, ಹೋರಾಟ, ಮತ್ತು ತನ್ನ ಸಾಮರ್ಥ್ಯದ ಮೇಲಿನ ಅಚಲ ನಂಬಿಕೆಯ ಕತೆಯಾಗಿದೆ. ತನ್ನನ್ನು ಅವಮಾನಿಸಿದವರಿಗೆ, ಕೈಬಿಟ್ಟವರಿಗೆ ಕರುಣ್ ತಮ್ಮ ಬ್ಯಾಟ್ನಿಂದ ಡಿಸ್ಟಿಂಕ್ಷನ್ನಲ್ಲಿ ಉತ್ತರ ನೀಡಿದ್ದಾರೆ.