T20 World Cup 2026: ಜಿಂಬಾಬ್ವೆ ವಿರುದ್ಧ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಟೀಮ್ ಇಂಡಿಯಾ

India vs Zimbabwe

ಚೆನ್ನೈ, ಫೆಬ್ರವರಿ 28: ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಯ ಸೂಪರ್‌-8 ಹಂತದಲ್ಲಿ ರೋಚಕ ಹೋರಾಟಗಳು ಆರಂಭವಾಗಿವೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯದಲ್ಲಿ ಭಾರತ ಮತ್ತು ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಿವೆ. ಟಾಸ್‌ ಗೆದ್ದ ಜಿಂಬಾಬ್ವೆ ನಾಯಕ ಸಿಕಂದರ್ ರಜಾ ಮೊದಲು ಬೌಲಿಂಗ್‌ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್‌ಗೆ ಇಳಿದಿದೆ.

ಸೂಪರ್‌-8 ಹಂತದಲ್ಲಿ ಪ್ರತಿಯೊಂದು ಪಂದ್ಯವೂ ಸೆಮಿಫೈನಲ್‌ ಪ್ರವೇಶದ ದೃಷ್ಟಿಯಿಂದ ಅತಿ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನ ಪಂದ್ಯ ಎರಡೂ ತಂಡಗಳಿಗೆ ‘ಮಾಡು ಅಥವಾ ಮಡಿ’ ಎನ್ನುವಂತಾಗಿದೆ. ಭಾರತ ತಂಡದ ನಾಯಕತ್ವ ವಹಿಸಿರುವ ಸೂರ್ಯಕುಮಾರ್‌ ಯಾದವ್‌ಗೆ ಇದು ಮಹತ್ವದ ಪರೀಕ್ಷೆಯಾಗಿದೆ.

ಟಾಸ್‌ನಲ್ಲಿ ಜಿಂಬಾಬ್ವೆಯ ಚತುರ ನಿರ್ಧಾರ

ಚೆನ್ನೈ ಪಿಚ್‌ ಸಾಮಾನ್ಯವಾಗಿ ಸ್ಪಿನ್‌ಗೆ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಕಷ್ಟಕರವಾಗಬಹುದು ಎಂಬ ಅಂದಾಜಿನಲ್ಲಿ ಸಿಕಂದರ್ ರಾಜಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ನಂತರದ ಇನ್ನಿಂಗ್ಸ್‌ನಲ್ಲಿ ತೇವಾಂಶದ ಪರಿಣಾಮದಿಂದ ಬ್ಯಾಟಿಂಗ್ ಸುಲಭವಾಗಬಹುದು ಎಂಬ ಲೆಕ್ಕಾಚಾರ ಜಿಂಬಾಬ್ವೆಯದು.

ಭಾರತ ತಂಡದ ಪರವಾಗಿ ಆರಂಭಿಕ ಜವಾಬ್ದಾರಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಮೇಲಿದೆ. ಮಧ್ಯಕ್ರಮದಲ್ಲಿ ಇಶಾನ್ ಕಿಶನ್, ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಬೇಕಿದೆ. ಅಂತಿಮ ಓವರ್‌ಗಳಲ್ಲಿ ವೇಗದ ರನ್‌ಗಳಿಗಾಗಿ ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಮೇಲೆ ನಿರೀಕ್ಷೆ ಇದೆ.

ಭಾರತ ಪ್ಲೇಯಿಂಗ್ XI

ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ.

ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಮಹತ್ವದ ಪಾತ್ರವಹಿಸಲಿದ್ದಾರೆ.

ಜಿಂಬಾಬ್ವೆ ಪ್ಲೇಯಿಂಗ್ XI

ತಡಿವಾನಾಶೆ ಮರುಮಾನಿ (ವಿಕೆಟ್‌ ಕೀಪರ್‌), ಬ್ರಿಯಾನ್ ಬೆನೆಟ್, ಡಿಯೋನ್ ಮೇಯರ್ಸ್, ರಿಯಾನ್ ಬರ್ಲ್, ಸಿಕಂದರ್ ರಾಜಾ (ನಾಯಕ), ಟೋನಿ ಮುನ್ಯೊಂಗಾ, ತಶಿಂಗಾ ಮುಸೆಕಿವಾ, ಬ್ರಾಡ್ ಇವಾನ್ಸ್, ಟಿನೊಟೆಂಡಾ ಮಾಪೋಸಾ, ಬ್ಲೆಸಿಂಗ್ ಮುಜರಾಬಾನಿ, ರಿಚರ್ಡ್ ಎನ್‌ಗರವಾ.

ಜಿಂಬಾಬ್ವೆಯ ಬೌಲಿಂಗ್ ದಾಳಿ ವಿಶೇಷ ಗಮನ ಸೆಳೆಯುತ್ತಿದೆ. ಬ್ಲೆಸಿಂಗ್ ಮುಜರಾಬಾನಿ ಮತ್ತು ರಿಚರ್ಡ್ ಎನ್‌ಗರವಾ ಅವರ ವೇಗ ಭಾರತ ಬ್ಯಾಟರ್‌ಗಳಿಗೆ ಸವಾಲಾಗಬಹುದು. ಮಧ್ಯ ಓವರ್‌ಗಳಲ್ಲಿ ಸಿಕಂದರ್ ರಾಜಾ ಸ್ಪಿನ್ ಮೂಲಕ ಒತ್ತಡ ಹೇರುವ ಸಾಧ್ಯತೆ ಇದೆ.

ಸೆಮಿಫೈನಲ್ ಕನಸಿಗೆ ಇಂದು ದಾರಿ

ಸೂಪರ್‌-8 ಹಂತದಲ್ಲಿ ಅಂಕಗಳ ಪೈಪೋಟಿ ತೀವ್ರವಾಗಿದೆ. ಒಂದು ಸೋಲು ಕೂಡ ತಂಡದ ಅವಕಾಶಗಳಿಗೆ ದೊಡ್ಡ ಹೊಡೆತ ನೀಡಬಹುದು. ಭಾರತ ತಂಡಕ್ಕೆ ಇಂದು ದೊಡ್ಡ ಮೊತ್ತ ಕಲೆಹಾಕಿ ಜಿಂಬಾಬ್ವೆಗೆ ಒತ್ತಡ ಸೃಷ್ಟಿಸುವುದು ಪ್ರಮುಖ ಗುರಿಯಾಗಿದೆ. ಮತ್ತೊಂದೆಡೆ, ಜಿಂಬಾಬ್ವೆ ತಂಡ ಅಚ್ಚರಿ ಫಲಿತಾಂಶದ ಮೂಲಕ ಟೂರ್ನಿಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಬಯಸುತ್ತಿದೆ.

ಚೆನ್ನೈ ಪ್ರೇಕ್ಷಕರ ಗರ್ಜನೆಯ ನಡುವೆ ಆರಂಭವಾದ ಈ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದು ಕಾದುನೋಡಬೇಕಾಗಿದೆ.

Exit mobile version