ಅಹಮದಾಬಾದ್: ಭಾರತೀಯ ಕ್ರಿಕೆಟ್ನ ಸುವರ್ಣ ಯುಗವೊಂದು ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೊಸ ಇತಿಹಾಸ ಬರೆದಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ, ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಬೃಹತ್ ಅಂತರದಿಂದ ಸೋಲಿಸಿ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಗೆಲುವಿನೊಂದಿಗೆ ಭಾರತವು ವಿಶ್ವ ಕ್ರಿಕೆಟ್ನಲ್ಲಿ ಸತತ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದ ಹ್ಯಾಟ್ರಿಕ್ ಸಾಧನೆಯನ್ನು ಸಂಭ್ರಮಿಸಿದೆ.
ನರೇಂದ್ರ ಮೋದಿ ಕ್ರಿಡಾಂಗಣದಲ್ಲಿ ಪಂದ್ಯ
ಕಳೆದ ಕೆಲವು ವರ್ಷಗಳಿಂದ ನರೇಂದ್ರ ಮೋದಿ ಕ್ರೀಡಾಂಗಣವು ಟೀಮ್ ಇಂಡಿಯಾ ಪಾಲಿಗೆ ದುರದೃಷ್ಟದ ಮೈದಾನ ಅಥವಾ ‘ಪನೌತಿ’ ಮೈದಾನ ಎಂದೇ ಬಿಂಬಿತವಾಗಿತ್ತು. 2023ರ ವಿಶ್ವಕಪ್ ಫೈನಲ್ ಸೋಲು ಮಾತ್ರವಲ್ಲದೆ, ಇತ್ತೀಚಿನ ಸೂಪರ್ 8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೂ ಭಾರತ ಇಲ್ಲಿ ಮುಗ್ಗರಿಸಿತ್ತು. ಆದರೆ, ಇಂದಿನ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ದಾಖಲೆಯ ಮೊತ್ತ ಪೇರಿಸಿ, ಬೌಲಿಂಗ್ನಲ್ಲಿ ಕಿವೀಸ್ ಪಡೆಯನ್ನು ಸೋಲಿಸುವ ಮೂಲಕ ಮೂಲಕ ಭಾರತ ಆ ಟೀಕೆಯನ್ನ ಅಳಿಸಿದೆ.
ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಮೊದಲು ಬ್ಯಾಟಿಂಗ್ ನಡೆಸಿ ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್ ದಾಖಲಿಸಿತು. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಬೃಹತ್ ಮೊತ್ತ ಪೇರಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು ಭಾರತೀಯ ಬೌಲರ್ಗಳ ಸಂಘಟಿತ ದಾಳಿಗೆ ತತ್ತರಿಸಿ ಶರಣಾಯಿತು. ಈ ಮೂಲಕ ಭಾರತವು ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡು ವಿಶ್ವದಾಖಲೆ ಬರೆದಿದೆ.
ತವರಿನ ನೆಲದಲ್ಲಿ ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. 2023ರಲ್ಲಿ ಕಣ್ಣೀರು ಹಾಕುತ್ತಾ ಕ್ರೀಡಾಂಗಣದಿಂದ ಹೊರಬಂದಿದ್ದ ಅಭಿಮಾನಿಗಳು, ಇಂದು ಇಂಡಿಯಾ.. ಇಂಡಿಯಾ.. ಎಂಬ ಘೋಷಣೆಗಳೊಂದಿಗೆ ಸಂಭ್ರಮದಿಂದ ಮನೆಗೆ ಮರಳುತ್ತಿದ್ದಾರೆ. ಈ ಗೆಲುವಿನೊಂದಿಗೆ ಸೂರ್ಯಕುಮಾರ್ ಯಾದವ್ ಅವರು ಐಸಿಸಿ ಟ್ರೋಫಿ ಗೆದ್ದ ಭಾರತದ ಯಶಸ್ವಿ ನಾಯಕರ ಸಾಲಿಗೆ ಸೇರ್ಪಡೆಯಾಗಿದ್ದಾರೆ.





