ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಶನಿವಾರ ಐತಿಹಾಸಿಕ ಮತ್ತು ಕಠಿಣ ನಿರ್ಧಾರವನ್ನು ಪ್ರಕಟಿಸಿದೆ. ಮುಂಬರುವ ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಟೂರ್ನಿಯಿಂದ ಅಧಿಕೃತವಾಗಿ ಹೊರಗಿಡಲಾಗಿದೆ. ಬಾಂಗ್ಲಾದೇಶದ ಬದಲಿಗೆ ಈಗ ಸ್ಕಾಟ್ಲೆಂಡ್ ತಂಡಕ್ಕೆ ವಿಶ್ವಕಪ್ ಆಡುವ ಅವಕಾಶ ಸಿಕ್ಕಿದೆ.
ವಿವಾದದ ಹಿನ್ನೆಲೆ ಏನು?
ಬಾಂಗ್ಲಾದೇಶದ ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ನಜ್ರುಲ್ ಅವರು ಭದ್ರತಾ ಕಾರಣಗಳನ್ನು ನೀಡಿ ತಂಡವನ್ನು ಭಾರತಕ್ಕೆ ಕಳುಹಿಸಲು ಹಿಂದೇಟು ಹಾಕಿದ್ದರು. ಐಸಿಸಿ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪದೇ ಪದೇ ಭದ್ರತೆಯ ಭರವಸೆ ನೀಡಿದ್ದರೂ, ಬಾಂಗ್ಲಾದೇಶ ಸರ್ಕಾರ ತನ್ನ ನಿರ್ಧಾರ ಬದಲಿಸಲಿಲ್ಲ. ಅಲ್ಲದೆ, ಐಪಿಎಲ್ನಿಂದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಹೊರಗಿಟ್ಟ ನಂತರ ಟಿ20ಯಲ್ಲಿ ಬಾಂಗ್ಲಾದೇಶ ಭಾಗವಹಿಸುವ ಬಗ್ಗೆ ಸಂಘರ್ಷ ಮತ್ತಷ್ಟು ಹೆಚ್ಚಾಯಿತು.
ಐಸಿಸಿ ಕಠಿಣ ನಿರ್ಧಾರಕ್ಕೆ ಕಾರಣಗಳು
ಭಾರತಕ್ಕೆ ಪ್ರಯಾಣಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಐಸಿಸಿ ನೀಡಿದ್ದ 24 ಗಂಟೆಗಳ ಗಡುವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಗಂಭೀರವಾಗಿ ಪರಿಗಣಿಸಲಿಲ್ಲ ಇದರ ಜತೆಗೆ ಐಸಿಸಿಗೆ ಅಧಿಕೃತವಾಗಿ ಮಾಹಿತಿ ನೀಡುವ ಮುನ್ನವೇ ಬಿಸಿಬಿ ಅಧ್ಯಕ್ಷ ಅಮೀನುಲ್ ಇಸ್ಲಾಂ ಬುಲ್ಬುಲ್ ಅವರು ಢಾಕಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು ಜಾಗತಿಕ ಕ್ರಿಕೆಟ್ ಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿದೆ ಹೀಗಾಗಿ ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ.
ದುಬೈನಲ್ಲಿ ನಡೆದ ಐಸಿಸಿ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಜಯ್ ಶಾ ಅವರ ಸಮ್ಮುಖದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಶುಕ್ರವಾರ ಸಂಜೆ ಬಾಂಗ್ಲಾದೇಶ ಮಂಡಳಿಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗಿದೆ.
ಸ್ಕಾಟ್ಲೆಂಡ್ಗೆ ಒಲಿದ ಅದೃಷ್ಟ
ಬಾಂಗ್ಲಾದೇಶದ ನಿರ್ಗಮನದಿಂದಾಗಿ ಸ್ಕಾಟ್ಲೆಂಡ್ ತಂಡಕ್ಕೆ ಬಂಪರ್ ಲಾಟರಿ ಹೊಡೆದಿದೆ. ಸ್ಕಾಟ್ಲೆಂಡ್ ಈಗ ಭಾರತದಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಇದರಿದ ಕ್ರಿಕೆಟ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕೋಲ್ಕತ್ತಾದಲ್ಲಿ , ವೆಸ್ಟ್ ಇಂಡೀಸ್ (ಫೆಬ್ರವರಿ 7), ಇಟಲಿ (ಫೆಬ್ರವರಿ 9) ಮತ್ತು ಇಂಗ್ಲೆಂಡ್ (ಫೆಬ್ರವರಿ 14) ಪಂದ್ಯಗಳು ನಡೆದರೆ, ಮುಂಬೈನಲ್ಲಿ, ನೇಪಾಳ ವಿರುದ್ಧ ಫೆಬ್ರವರಿ 17 ರಂದು ಪಂದ್ಯ ಆಡಲಿದೆ. ರಾಜಕೀಯ ಮತ್ತು ಕ್ರೀಡಾ ಸಂಘರ್ಷದ ನಡುವೆ ಬಾಂಗ್ಲಾದೇಶದಂತಹ ಬಲಿಷ್ಠ ತಂಡ ವಿಶ್ವಕಪ್ನಿಂದ ಹೊರಬಿದ್ದಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದೆ.





