ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಮಾನವೀಯತೆಗೆ ಮಸಿ ಬಳಿಯುವಂತಹ ಘಟನೆಯೊಂದು ನಡೆದಿದೆ. ಪತಿಯ ಸಾಲ ತೀರಿಸದಿರುವ ಕಾರಣಕ್ಕೆ ಪತ್ನಿಯನ್ನು ಮರಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ ನೀಡಿರುವ ಕ್ರೂರ ಘಟನೆ ನಡೆದಿದೆ. ಸಿರಿಶಾ ಎಂಬ ಮಹಿಳೆಯನ್ನು ಬೇವಿನ ಮರಕ್ಕೆ ಕಟ್ಟಿಹಾಕಿ ದುಷ್ಕರ್ಮಿಯೊಬ್ಬ ದೌರ್ಜನ್ಯವೆಸಗಿದ್ದಾನೆ.
ಸಿರಿಶಾ, ತನ್ನ ಮಗುವಿನ ಪರೀಕ್ಷಾ ಪ್ರಮಾಣಪತ್ರವನ್ನು ತರಲೆಂದು ಕುಪ್ಪಂ ಮಂಡಲದ ನಾರಾಯಣಪುರಂ ಗ್ರಾಮಕ್ಕೆ ಭೇಟಿ ನೀಡಿದ್ದಳು. ಆದರೆ, ಈ ಸಂದರ್ಭವನ್ನು ಗಮನಿಸಿದ ಸಾಲಗಾರ ಮುನಿಕಣ್ಣಪ್ಪ ಎಂಬಾತ ಸಿರಿಶಾಳನ್ನು ಗುರಿಯಾಗಿಸಿಕೊಂಡನು. ಮೂರು ವರ್ಷಗಳ ಹಿಂದೆ ಸಿರಿಶಾಳ ಪತಿ ಮುನಿಕಣ್ಣಪ್ಪನಿಂದ 80,000 ರೂಪಾಯಿಗಳ ಸಾಲವನ್ನು ಪಡೆದಿದ್ದನಂತೆ. ಆದರೆ, ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ, ಆ ದಂಪತಿಗಳು ತಮ್ಮ ಮಕ್ಕಳೊಂದಿಗೆ ಗ್ರಾಮವನ್ನು ತೊರೆದು ಹೋಗಿದ್ದರು. ಆಗಿನಿಂದ ಸಿರಿಶಾ ತನ್ನ ಕುಟುಂಬವನ್ನು ನೋಡಿಕೊಳ್ಳಲು ದಿನಗೂಲಿ ಕೆಲಸ ಮಾಡುತ್ತಿದ್ದಾಳೆ.
ಗ್ರಾಮಕ್ಕೆ ಮರಳಿದ ಸಿರಿಶಾಳನ್ನು ಕಂಡ ಮುನಿಕಣ್ಣಪ್ಪ, ಸಾಲದ ವಿಷಯವನ್ನು ಪ್ರಸ್ತಾಪಿಸಿ ಆಕೆಯೊಂದಿಗೆ ಕ್ಷುಲ್ಲಕವಾಗಿ ವರ್ತಿಸಿದ್ದಾನೆ. ಸಾಲದ ಹಣವನ್ನು ಕೇಳಿದ್ದು ಮಾತ್ರವಲ್ಲದೇ, ಆಕೆಯನ್ನು ಬೇವಿನ ಮರಕ್ಕೆ ಕಟ್ಟಿಹಾಕಿ ಕ್ರೂರವಾಗಿ ಥಳಿಸಿದ್ದಾನೆ. ಸಾಯಿಸಿಬಿಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾನೆ.
ಈ ದೌರ್ಜನ್ಯವನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮುನಿಕಣ್ಣಪ್ಪನನ್ನು ಬಂಧಿಸಿ, ಕಾನೂನು ಕ್ರಮಕ್ಕಾಗಿ ಕರೆದೊಯ್ದಿದ್ದಾರೆ.