ಪಶ್ಚಿಮ ಬಂಗಾಳದಲ್ಲಿ ಇಂದು 2ನೇ ಹಂತದ ಚುನಾವಣೆ: ಟಿಎಂಸಿ-ಬಿಜೆಪಿ ನಡುವೆ ತೀವ್ರ ಪೈಪೋಟಿ

Untitled design 2026 04 29T074253.214

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಬುಧವಾರ (ಏಪ್ರಿಲ್ 29, 2026) ನಡೆಯಲಿದೆ. ಒಟ್ಟು 142 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಭಾರತೀಯ ಚುನಾವಣಾ ಆಯೋಗವು ಈ ಹಂತವನ್ನು ಅತ್ಯಂತ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ರಾಜ್ಯದ ಏಳು ಜಿಲ್ಲೆಗಳಲ್ಲಿ ಸಿಆರ್‌ಪಿಎಫ್, ಎಸ್‌ಎಸ್‌ಬಿ, ಐಟಿಬಿಪಿ, ಆರ್‌ಪಿಎಫ್ ಹಾಗೂ ಸಿಐಎಸ್‌ಎಫ್ ಸೇರಿದಂತೆ ಕೇಂದ್ರ ಪಡೆಗಳ ಸಾವಿರಾರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಟ್ಟಾರೆ 3.5 ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ತೊಡಗಿದ್ದಾರೆ. ಕೋಲ್ಕತ್ತಾ ನಗರದಲ್ಲೇ ಸುಮಾರು 35 ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 2,550ಕ್ಕೂ ಹೆಚ್ಚು ಕೇಂದ್ರ ಪಡೆಗಳ ಕಂಪನಿಗಳು ರಾಜ್ಯಾದ್ಯಂತ ಕಾವಲು ಕಾಯುತ್ತಿವೆ.

ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಸುರಕ್ಷಿತವಾಗಿಸಲು 142 ಸಾಮಾನ್ಯ ವೀಕ್ಷಕರು ಮತ್ತು 95 ಪೊಲೀಸ್ ವೀಕ್ಷಕರನ್ನು ನೇಮಿಸಲಾಗಿದೆ. ಪ್ರತಿ ಮತಗಟ್ಟೆಯ ಮೇಲೂ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಅಳವಡಿಸಲಾಗಿದ್ದು, ನೇರ ದೃಶ್ಯಾವಳಿಗಳು ನಿಯಂತ್ರಣ ಕೊಠಡಿಗೆ ತಲುಪುತ್ತಿವೆ. ಜೊತೆಗೆ CAPF ನಿಯಂತ್ರಣ ಕೊಠಡಿಗಳು ರಾಜ್ಯ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ. ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸಲು 6,000ಕ್ಕೂ ಹೆಚ್ಚು ತ್ವರಿತ ಪ್ರತಿಕ್ರಿಯೆ ತಂಡಗಳು (QRT) ಸಿದ್ಧವಾಗಿವೆ.

ಈ ಬಾರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಚುನಾವಣಾ ಕರ್ತವ್ಯಗಳಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ. ಕೋಲ್ಕತ್ತಾದ ಕೇಂದ್ರ ನಿಯಂತ್ರಣ ಕೊಠಡಿಯಿಂದ ಸಂಪೂರ್ಣ ಪ್ರಕ್ರಿಯೆಯನ್ನು ನಿಗಾ ವಹಿಸಲಾಗುತ್ತಿದೆ.

ವಿವಿಧ ಜಿಲ್ಲೆಗಳಲ್ಲಿ ಲಕ್ಷಾಂತರ ಮತದಾರರ ಹೆಸರುಗಳು ಪಟ್ಟಿಯಿಂದ ಅಳಿಸಲ್ಪಟ್ಟಿರುವುದಾಗಿ ವರದಿಯಾಗಿದೆ. ಉತ್ತರ 24 ಪರಗಣಗಳಲ್ಲಿ ಸುಮಾರು 12.5 ಲಕ್ಷ, ದಕ್ಷಿಣ 24 ಪರಗಣಗಳಲ್ಲಿ 11 ಲಕ್ಷಕ್ಕೂ ಹೆಚ್ಚು, ಹೌರಾ ಜಿಲ್ಲೆಯಲ್ಲಿ 6 ಲಕ್ಷ, ಹೂಗ್ಲಿಯಲ್ಲಿ 4.5 ಲಕ್ಷ ಹಾಗೂ ನಾಡಿಯಾದಲ್ಲಿ ಸುಮಾರು 4.85 ಲಕ್ಷ ಹೆಸರುಗಳು ಕಾಣೆಯಾಗಿರುವುದಾಗಿ ಹೇಳಲಾಗಿದೆ.

ಕೋಲ್ಕತ್ತಾದ ಭಬಾನಿಪುರ ಕ್ಷೇತ್ರವು ಈ ಹಂತದ ಅತ್ಯಂತ ಗಮನ ಸೆಳೆಯುವ ಕ್ಷೇತ್ರವಾಗಿದೆ. ಇಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ವಿರೋಧ ಪಕ್ಷದ ಪ್ರಮುಖ ನಾಯಕ ಸುವೇಂದು ಅಧಿಕಾರಿ ನಡುವಿನ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ. ಈ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಸಾಕಷ್ಟು ಹೆಸರುಗಳು ಅಳಿಸಲಾಗಿರುವುದಾಗಿ ಆರೋಪಗಳು ಕೇಳಿಬಂದಿವೆ. ಟಿಎಂಸಿ ಇದನ್ನು ರಾಜಕೀಯ ಪಿತೂರಿ ಎಂದು ಹೇಳುತ್ತಿದ್ದರೆ, ಬಿಜೆಪಿ ಈ ಆರೋಪಗಳನ್ನು ತಳ್ಳಿ ಹಾಕಿದೆ.

ದಕ್ಷಿಣ 24 ಪರಗಣಗಳು ಮತ್ತು ಉತ್ತರ 24 ಪರಗಣಗಳು ಈ ಹಂತದಲ್ಲಿ ಅತ್ಯಂತ ನಿರ್ಣಾಯಕವಾಗಿವೆ. ಈ ಎರಡು ಜಿಲ್ಲೆಗಳಲ್ಲೇ ಒಟ್ಟು 64 ಕ್ಷೇತ್ರಗಳಿದ್ದು, ಹಿಂದಿನ ಚುನಾವಣೆಯಲ್ಲಿ ಟಿಎಂಸಿ ಇಲ್ಲಿ ಬಹುಮತ ಸಾಧಿಸಿತ್ತು. ಈ ಬಾರಿ ಪರಿಸ್ಥಿತಿ ಹೆಚ್ಚು ಸ್ಪರ್ಧಾತ್ಮಕವಾಗಿದೆ. ಬ್ಯಾರಕ್‌ಪೋರ್, ಬರಾಸತ್, ಡೈಮಂಡ್ ಹಾರ್ಬರ್, ಅಲಿಪುರ ಮುಂತಾದ ಪ್ರಮುಖ ಕ್ಷೇತ್ರಗಳು ಎಲ್ಲರ ಗಮನ ಸೆಳೆದಿವೆ.

Exit mobile version