ಸ್ವಾತಂತ್ರ್ಯೋತ್ಸವದಂದು ‘ವಂದೇ ಮಾತರಂ’ ಹಾಡಿಗೆ ಸೋನಿಯಾ ಗಾಂಧಿ ಆಕ್ಷೇಪ? ವಿಡಿಯೋ ವೈರಲ್

ಖರ್ಗೆ (5)

ನವದೆಹಲಿ, ಆ. 15: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ನವದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಕಾಂಗ್ರೆಸ್ ಕಚೇರಿಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಸಂಪೂರ್ಣ ‘ವಂದೇ ಮಾತರಂ’ ಗೀತೆಯನ್ನು ಹಾಡಲಾಯಿತು. ಆದರೆ, ಸಮಾರಂಭದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಸೋನಿಯಾ ಗಾಂಧಿ ಅವರು ಸಂಪೂರ್ಣ ಗೀತೆ ಹಾಡಲು ಆಕ್ಷೇಪಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದವು.

ಸಮಾರಂಭದಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು. ‘ವಂದೇ ಮಾತರಂ’ ಗಾಯನ ನಡೆಯುತ್ತಿದ್ದ ವೇಳೆ ಸೋನಿಯಾ ಗಾಂಧಿ ಅವರು ಹಾಡನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿತು. ಬಿಜೆಪಿ ಬೆಂಬಲಿಗರು ಈ ವಿಡಿಯೋವನ್ನು ಹಂಚಿಕೊಂಡು, ಸೋನಿಯಾ ಗಾಂಧಿ ಅವರ ದೇಶಭಕ್ತಿಯ ಬಗ್ಗೆ ಪ್ರಶ್ನಿಸತೊಡಗಿದರು.

ಆದರೆ, ತಕ್ಷಣವೇ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಪಕ್ಷವು, “ಸುದೀರ್ಘ ಸಮಯದಿಂದ ನಿಂತುಕೊಂಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುಳಿತುಕೊಳ್ಳಲು ಕುರ್ಚಿ ತಂದುಕೊಡುವಂತೆ ಸೋನಿಯಾ ಗಾಂಧಿ ಅವರು ಸೂಚಿಸಿದ್ದೇ ಹೊರತು, ‘ವಂದೇ ಮಾತರಂ’ ಹಾಡನ್ನು ನಿಲ್ಲಿಸಲು ಹೇಳಿಲ್ಲ” ಎಂದು ಸ್ಪಷ್ಟಪಡಿಸಿದೆ. ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಿದ ಹಲವರು, ಸೋನಿಯಾ ಅವರು ಕೈಯಿಂದ ಸನ್ನೆ ಮಾಡಿ ತಮ್ಮ ಸಿಬ್ಬಂದಿಗೆ ಏನೋ ಸೂಚಿಸಿದ್ದನ್ನು ಮಾತ್ರ ಕಂಡು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ವಾದಿಸಿದರು.

ವೈರಲ್ ಆದ ವಿಡಿಯೋದಲ್ಲಿ ಸೋನಿಯಾ ಗಾಂಧಿ ಅವರು ತಮ್ಮ ಎಡಗೈಯನ್ನು ಮೇಲೆತ್ತಿ, ಸಿಬ್ಬಂದಿಯ ಕಡೆಗೆ ತಿರುಗಿ ಏನೋ ಸೂಚಿಸುತ್ತಿರುವಂತೆ ಕಾಣುತ್ತದೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಖರ್ಗೆ ಅವರಿಗೆ ವಯಸ್ಸಾಗಿದ್ದು, ಅವರಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಬೇಕು ಎಂದು ಸೋನಿಯಾ ಅವರು ಸೂಚಿಸಿದ್ದರು. “ಇದು ಸೋನಿಯಾ ಗಾಂಧಿ ಅವರ ಸಂವೇದನಾಶೀಲತೆಯ ಪ್ರತೀಕವೇ ಹೊರತು, ಯಾವುದೇ ರೀತಿಯ ದೇಶಭಕ್ತಿ ವಿರೋಧಿ ಚಟುವಟಿಕೆಯಲ್ಲ” ಎಂದು ಕಾಂಗ್ರೆಸ್ ವಕ್ತಾರರು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಕೇಂದ್ರ ಸರ್ಕಾರವು ಎಲ್ಲಾ ಅಧಿಕೃತ ಕಾರ್ಯಕ್ರಮಗಳು, ಶಾಲೆಗಳು ಹಾಗೂ ರಾಷ್ಟ್ರೀಯ ಸಮಾರಂಭಗಳಲ್ಲಿ ‘ವಂದೇ ಮಾತರಂ’ ಗೀತೆಯ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕೆಂದು ಸೂಚಿಸಿದ್ದು, ಈ ಹಿನ್ನೆಲೆ ಈ ವಿವಾದವು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಕಳೆದ ವರ್ಷದ ನವೆಂಬರ್ನಲ್ಲಿ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸರ್ಕಾರವು ವರ್ಷವಿಡೀ ಆಚರಿಸುವ ವಿಶೇಷ ಕಾರ್ಯಕ್ರಮಗಳಿಗೆ ಚಾಲನೆ ನೀಡಿತ್ತು.

ಕಾಂಗ್ರೆಸ್ ಪಕ್ಷವು ಆಡಳಿತಾರೂಢ ಬಿಜೆಪಿ ಸರ್ಕಾರವು ರಾಷ್ಟ್ರೀಯ ಸಂಕೇತಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸುತ್ತಾ ಬಂದಿದೆ. ಈಗ ಸೋನಿಯಾ ಗಾಂಧಿ ಅವರ ಈ ‘ಸೂಚನೆ’ಯು ವಿಪಕ್ಷಗಳ ವಿಚಿತ್ರ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಇನ್ನೊಂದೆಡೆ, ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆಯೂ ಸೇನಾ ಬ್ಯಾಂಡ್ನಿಂದ ಸಂಪೂರ್ಣ ‘ವಂದೇ ಮಾತರಂ’ ಗೀತೆಯನ್ನು ಮೊದಲ ಬಾರಿಗೆ ನುಡಿಸಲಾಯಿತು. ತದನಂತರ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿ ರಾಷ್ಟ್ರಗೀತೆ ಗಾಯನದಲ್ಲಿ ಪಾಲ್ಗೊಂಡರು. 

Exit mobile version