ಟೆರರ್ ಡಾಕ್ಟರ್ಸ್‌ನಿಂದ ಸಂಗ್ರಹಿಸಿದ್ದ ಸ್ಫೋಟಕಗಳು ಬ್ಲಾಸ್ಟ್‌: ಸ್ಥಳದಲ್ಲೇ 8 ಭದ್ರತಾ ಅಧಿಕಾರಿಗಳು ದುರ್ಮರಣ

Untitled design (43)

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 8 ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಮತ್ತು 27ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಿನವರು ಪೊಲೀಸ್ ಮತ್ತು ವಿಧಿವಿಜ್ಞಾನ ತಂಡದ ಸದಸ್ಯರೆಂದು ತಿಳಿದುಬಂದಿದೆ. ನವದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರ್ ಬಾಂಬ್ ಸ್ಫೋಟದ ನಂತರ ಕೆಲವೇ ದಿನಗಳಲ್ಲಿ ಸಂಭವಿಸಿದ ಈ ಘಟನೆ ಸಂಭವಿಸಿದೆ.

ಈ ಸ್ಫೋಟಕ್ಕೂ ದೆಹಲಿ ಸ್ಫೋಟಕ್ಕೂ ನೇರ ಸಂಬಂಧ ಇದೆ ಎಂದು ತನಿಖಾ ಮೂಲಗಳು ತಿಳಿಸಿವೆ. ಹರಿಯಾಣದ ಫರಿದಾಬಾದ್ನಲ್ಲಿ ಬಂಧಿತ ಉಗ್ರ ವೈದ್ಯ ಮುಜಮ್ಮಿಲ್ ಗನೈನ ಬಾಡಿಗೆ ಮನೆಯಿಂದ ವಶಪಡಿಸಿಕೊಂಡ 360 ಕಿಲೋಗ್ರಾಂ ಸ್ಫೋಟಕ ವಸ್ತುಗಳ ಪೈಕಿ ಒಂದು ಭಾಗವನ್ನು ಮಾದರಿ ಪರೀಕ್ಷೆಗಾಗಿ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಸಂಗ್ರಹಿಸಿಡಲಾಗಿತ್ತು. ಈ ಸಂಗ್ರಹಿಸಿದ ಸ್ಫೋಟಕ ವಸ್ತುಗಳಿಂದಲೇ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಸ್ಫೋಟದ ತೀವ್ರತೆ ಬಹಳ ಭಯಾನಕವಾಗಿತ್ತು. ಸ್ಫೋಟದ ನಂತರ ಪೊಲೀಸ್ ಠಾಣೆಯಿಂದ ಭಾರಿ ಪ್ರಮಾಣದ ಹೊಗೆ ಮತ್ತು ಬೆಂಕಿ ಹೊರಚಿಮ್ಮುವ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಸ್ಫೋಟದ ಧ್ವನಿ ಅಕ್ಕಪಕ್ಕದ ಪ್ರದೇಶಗಳಲ್ಲಿ ಕೂಡ ಕೇಳಿಸಿತ್ತು. ಘಟನೆಯ ತೀವ್ರತೆಯಿಂದ ಪೊಲೀಸ್ ಠಾಣೆಯ ಒಂದು ಭಾಗವು ಹಾನಿಗೊಳಗಾಗಿದೆ. ಗಾಯಗೊಂಡವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ನೌಗಾಮ್ ಪ್ರದೇಶದ ಬನ್ಪೋರಾದಲ್ಲಿ ಗೋಡೆಗಳ ಮೇಲೆ ಬೆದರಿಕೆಯ ಪೋಸ್ಟರುಗಳು ಕಂಡುಬಂದ ನಂತರ ಪೊಲೀಸರು ವ್ಯಾಪಕ ತನಿಖೆ ನಡೆಸಿದ್ದರು. ಶ್ರೀನಗರ ಪೊಲೀಸರು ಅಕ್ಟೋಬರ್ 19ರಂದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಈ ತನಿಖೆಯ ಭಾಗವಾಗಿ, ಫರಿದಾಬಾದ್ನಿಂದ ವಶಪಡಿಸಿಕೊಂಡ ಸ್ಫೋಟಕಗಳಲ್ಲಿ ಒಂದು ಭಾಗವನ್ನು ಮಾದರಿ ಪರೀಕ್ಷೆಗಾಗಿ ಪೊಲೀಸ್ ಠಾಣೆಗೆ ತರಲಾಗಿತ್ತು. ಉಳಿದ ಬೃಹತ್ ಭಾಗದ ಸ್ಫೋಟಕಗಳನ್ನು ಇನ್ನೊಂದು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿತ್ತು.

ಸ್ಫೋಟದ ನಿಖರ ಕಾರಣ ಮತ್ತು ಸ್ಫೋಟಕಗಳು ಆಕಸ್ಮಿಕವಾಗಿ ಸಿಡಿದದ್ದು ಹೇಗೆ ಎಂಬುದನ್ನು ಕಂಡುಹಿಡಿಯಲು ತನಿಖೆ ಪ್ರಾರಂಭವಾಗಿದೆ. ಘಟನಾ ಸ್ಥಳಕ್ಕೆ ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಭದ್ರತಾದಳಗಳು ವೇಗವಾಗಿ ತಲುಪಿ ದೃಶ್ಯಾವಳಿ ಸಂಗ್ರಹ ಮತ್ತು ತನಿಖೆ ನಡೆಸಿವೆ. ಶ್ರೀನಗರದ ಉಪ ಆಯುಕ್ತ ಅಕ್ಷಯ್ ಲ್ಯಾಬ್ರೂ ಘಟನೆಯ ನಂತರ ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಶ್ರೀನಗರದ ನೌಗಾಮ್ ಪೊಲೀಸ್ ಠಾಣೆ ಸ್ಫೋಟವು ದೆಹಲಿ ಸ್ಫೋಟದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಉಗ್ರರಿಂದ ವಶಪಡಿಸಿಕೊಂಡ ಸ್ಫೋಟಕಗಳು ಪೊಲೀಸ್ ಠಾಣೆಯಲ್ಲೇ ಸ್ಫೋಟಿಸಿದೆ. ಇನ್ನೂ ಸಾವನ್ನಪ್ಪಿರುವುದು ಭದ್ರತಾ ಪಡೆಗಳ ಅಧಿಕಾರಿಗಳು ಎಂಬುದು ತೀವ್ರ ಬೇಸರದ ಸಂಗತಿಯಾಗಿದೆ.

Exit mobile version