ಬಾಹ್ಯಾಕಾಶ ನಿಲ್ದಾಣದಿಂದ ಪ್ರಧಾನಿ ಮೋದಿ ಜೊತೆ ಶುಭಾಂಶು ಶುಕ್ಲಾ ಮಾತುಕತೆ

Pm modi speak with shubhanshu shukla

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪಿರುವ ಮೊದಲ ಭಾರತೀಯ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಜೂನ್ 28, 2025 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ. ಜೂನ್ 25 ರಂದು ಆಕ್ಸಿಯಮ್-4 ಮಿಷನ್‌ನ ಭಾಗವಾಗಿ, ಶುಭಾಂಶು ಶುಕ್ಲಾ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ISSಗೆ ತೆರಳಿದ್ದರು. ಈ ಮೂಲಕ 40 ವರ್ಷಗಳ ಬಳಿಕ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಭಾರತೀಯರಾಗಿ ಇತಿಹಾಸ ಸೃಷ್ಟಿಸಿದ್ದಾರೆ.

ISS ತಲುಪಿದ ಕೂಡಲೇ, ಶುಭಾಂಶು ಶುಕ್ಲಾ ಹಿಂದಿಯಲ್ಲಿ ಭಾರತೀಯ ಜನತೆಗೆ ಸಂದೇಶ ನೀಡಿದ್ದರು. “140 ಕೋಟಿ ಭಾರತೀಯರ ಪ್ರೀತಿ ಮತ್ತು ಆಶೀರ್ವಾದವೇ ನನ್ನನ್ನು ಸುರಕ್ಷಿತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆತಂದಿದೆ,” ಎಂದು ಶುಭಾಂಶು ತಿಳಿಸಿದ್ದರು. ಈ ಸಂದೇಶವು ದೇಶಾದ್ಯಂತ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ADVERTISEMENT
ADVERTISEMENT
ಪ್ರಧಾನಿ ಮೋದಿಯ ಮೆಚ್ಚುಗೆ

ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಎಕ್ಸ್ ಖಾತೆಯಲ್ಲಿ, “ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು,” ಎಂದು ಫೋಟೋ ಸಹಿತ ಪೋಸ್ಟ್ ಮಾಡಲಾಗಿದೆ. ಪ್ರಧಾನಿ ಮೋದಿ, ಶುಭಾಂಶು ಅವರೊಂದಿಗಿನ ಸಂವಾದದ ವಿಡಿಯೋವನ್ನು ಹಂಚಿಕೊಂಡು, “ನೀವು ಭೂಮಿಯನ್ನು ಬಿಟ್ಟು ಬಾಹ್ಯಾಕಾಶದಲ್ಲಿದ್ದರೂ, ಜನರ ಹೃದಯಕ್ಕೆ ಹತ್ತಿರವಾಗಿದ್ದೀರಿ. 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ನೀವು ಒಯ್ದಿದ್ದೀರಿ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಹ್ಯಾಕಾಶದಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಕ್ಕಾಗಿ ಶುಭಾಂಶು ಅವರಿಗೆ ಅಭಿನಂದನೆ ಸಲ್ಲಿಸಿದ ಮೋದಿ, ಜೊತೆಗಿರುವ ಇತರ ಗಗನಯಾತ್ರಿಗಳ ಆರೋಗ್ಯವನ್ನೂ ವಿಚಾರಿಸಿದ್ದಾರೆ.

ತಮಾಷೆಯ ಸಂಭಾಷಣೆ: ಕ್ಯಾರೆಟ್ ಹಲ್ವಾ!

ಸಂವಾದದ ಸಂದರ್ಭದಲ್ಲಿ, ಪ್ರಧಾನಿ ಮೋದಿ ತಮಾಷೆಯಾಗಿ, “ನೀವು ಕ್ಯಾರೆಟ್ ಹಲ್ವಾ ತೆಗೆದುಕೊಂಡು ಹೋಗಿದ್ದೀರಾ? ಅದನ್ನು ಇತರರಿಗೂ ಕೊಟ್ಟಿದ್ದೀರಾ?” ಎಂದು ಕೇಳಿದರು. ಇದಕ್ಕೆ ಶುಭಾಂಶು ಶುಕ್ಲಾ, “ನಾನು ಕ್ಯಾರೆಟ್ ಹಲ್ವಾ, ಹೆಸರುಬೇಳೆ ಹಲ್ವಾ, ಮವಿನ ರಸವನ್ನು ತೆಗೆದುಕೊಂಡು ಬಂದಿದ್ದೇನೆ. ಭಾರತದ ಪಾಕಪದ್ಧತಿಯನ್ನು ಇತರ ದೇಶದ ಗಗನಯಾತ್ರಿಗಳಿಗೆ ಪರಿಚಯಿಸಲು ಅವರಿಗೂ ಕೊಟ್ಟೆ. ಎಲ್ಲರೂ ಒಟ್ಟಿಗೆ ಕೂತು ತಿಂದೆವು,  ತುಂಬಾ ಇಷ್ಟವಾಯಿತು,” ಎಂದು ಉತ್ತರಿಸಿದರು. ಈ ತಮಾಷೆಯ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆಕ್ಸಿಯಮ್-4 ಮಿಷನ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಜೂನ್ 25 ರಂದು ಯಶಸ್ವಿಯಾಗಿ ISSಗೆ ಡಾಕಿಂಗ್ ಮಾಡಿತು. ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಾದ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಪು ಅವರು ಎರಡು ವಾರಗಳ ಕಾಲ ISSನಲ್ಲಿ ವಾಸವಿರಲಿದ್ದಾರೆ. ಈ ಅವಧಿಯಲ್ಲಿ ಅವರು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸರದಲ್ಲಿ 60  ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದ್ದು, ಇದರಲ್ಲಿ ಶುಭಾಂಶು ಶುಕ್ಲಾ 7 ಪ್ರಯೋಗಗಳನ್ನು ಮುನ್ನಡೆಸಲಿದ್ದಾರೆ. ಈ ಮಿಷನ್ ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಮೈಲಿಗಲ್ಲು ಎನಿಸಿದೆ.

Exit mobile version